ಜು.29 ರಂದು ಔರಾದ್ನಲ್ಲಿ ಪತ್ರಿಕಾ ದಿನಾಚರಣೆ : ಶಿವಾನಂದ್ ಮೊಕ್ತೆದಾರ್

ಔರಾದ್: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಔರಾದ್ ಘಟಕದ ವತಿಯಿಂದ ಜುಲೈ 29ರಂದು ಬೆಳಿಗ್ಗೆ 10:30ಕ್ಕೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಶಿವಾನಂದ್ ಮೊಕ್ತೆದಾರ್ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ. ಬಸವಲಿಂಗ ಪಟ್ಟದೇವರು ದಿವ್ಯಸಾನಿಧ್ಯ ವಹಿಸಲಿದ್ದು, ದತ್ತ–ಸಾಯಿ ಶನೇಶ್ವರ್ ದೇವಸ್ಥಾನ ಸಮಿತಿಯ ಅಧ್ಯಕ್ಷ ಶಂಕರಲಿಂಗ್ ಶಿವಾಚಾರ್ಯ ಸಾನಿಧ್ಯ ವಹಿಸಲಿದ್ದಾರೆ. ಶಾಸಕ ಪ್ರಭು ಚವ್ಹಾಣ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕಲಬುರಗಿ ಸ್ಥಾನಿಕ ಸಂಪಾದಕ ಬಾಬುರಾವ್ ಯಡ್ರಾಮಿ ಮುಖ್ಯ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಭಾಲ್ಕಿ ಡಿವೈಎಸ್ಪಿ ಬಲ್ಲಪ್ಪ ನಂದಗಾಂವೆ, ತಹಶೀಲ್ದಾರ್ ಮಹೇಶ್ ಪಾಟೀಲ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆನಂದ್ ದೇವಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಸ್ವಾಮಿ, ತಾಲೂಕು ಪಂಚಾಯತ್ ಇಒ ಕಿರಣ್ ಪಾಟೀಲ್ ಹಾಗೂ ಸಹಾಯಕ ನಿರ್ದೇಶಕ ಶಿವಕುಮಾರ್ ಫಾಟೆ ಭಾಗವಹಿಸಲಿದ್ದಾರೆ ಎಂದು ಶಿವಾನಂದ್ ಮೊಕ್ತೆದಾರ್ ಮಾಹಿತಿ ನೀಡಿದ್ದಾರೆ.
ರಾಜ್ಯಮಟ್ಟದ ‘ಕನ್ನಡ ಜಂಗಮ ಪ್ರಶಸ್ತಿ’ :
ಮೂರು ದಶಕಗಳಿಗೂ ಅಧಿಕ ಕಾಲ ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತ ಬಾಬುರಾವ್ ಯಡ್ರಾಮಿ ಅವರಿಗೆ ರಾಜ್ಯಮಟ್ಟದ ‘ಕನ್ನಡ ಜಂಗಮ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ. ಅವರ ಸುದೀರ್ಘ ಪತ್ರಿಕೋದ್ಯಮ ಸೇವೆ, ಕನ್ನಡದ ಮೇಲಿನ ಅಪಾರ ಅಭಿಮಾನ ಹಾಗೂ ಸಮಾಜಮುಖಿ ಚಿಂತನೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತಿದೆ ಎಂದು ಸಂಘ ತಿಳಿಸಿದೆ.






