ಭಾಲ್ಕಿ ಸೇರಿದಂತೆ ನಾಲ್ಕು ತಾಲೂಕುಗಳನ್ನು ಬರಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವನೆ: ಸಚಿವ ಈಶ್ವರ್ ಖಂಡ್ರೆ
ಧರಣಿ ಸ್ಥಳಕ್ಕೆ ಈಶ್ವರ್ ಖಂಡ್ರೆ ಭೇಟಿ

ಭಾಲ್ಕಿ : ಜಿಲ್ಲೆಯ ಉಳಿದ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಭಾಲ್ಕಿ, ಹುಲಸೂರು, ಔರಾದ್ ಮತ್ತು ಕಮಲನಗರ ತಾಲೂಕುಗಳನ್ನು ಎರಡನೇ ಹಂತದ ಬರಪಟ್ಟಿಗೆ ಸೇರಿಸಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಕಳೆದ ಏಳು ದಿನಗಳಿಂದ ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಸಚಿವರಿಗೆ ರೈತರು ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಸಚಿವರು, ಬರಪೀಡಿತ ತಾಲೂಕು ಘೋಷಣೆಯಲ್ಲಿ ರಾಜ್ಯ ಸರ್ಕಾರದ ಪಾತ್ರ ಸೀಮಿತವಾಗಿದ್ದು, ಕೇಂದ್ರ ಸರ್ಕಾರದ ವೈಜ್ಞಾನಿಕ ಮಾನದಂಡಗಳ ಆಧಾರದಲ್ಲೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಮುಂಗಾರು ಅವಧಿಯಲ್ಲಿ ಶೇ.60ರಷ್ಟು ಮಳೆ ಕೊರತೆ ಹಾಗೂ ಸತತ ಮೂರು ವಾರ ಮಳೆಯಾಗದಿದ್ದರೆ ಮಾತ್ರ ಕೇಂದ್ರದ ನಿಯಮಾನುಸಾರ ಬರಪೀಡಿತ ತಾಲೂಕು ಎಂದು ಘೋಷಿಸಲಾಗುತ್ತದೆ. ಈ ಮಾನದಂಡಗಳ ಪ್ರಕಾರ ಜಿಲ್ಲೆಯ ನಾಲ್ಕು ತಾಲೂಕುಗಳು ಈಗಾಗಲೇ ಬರಪಟ್ಟಿಗೆ ಸೇರಿವೆ. ಉಳಿದ ತಾಲೂಕುಗಳ ಸೇರ್ಪಡೆಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೀದರ್ ಜಿಲ್ಲೆಗೆ ದಾಖಲೆಯ 264 ಕೋಟಿ ರೂ. ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ಜಮೆಯಾಗಿದ್ದು, ಕಳೆದ ವರ್ಷದ ಪ್ರವಾಹ ಸಂದರ್ಭದಲ್ಲಿ 260 ಕೋಟಿ ರೂ. ಪರಿಹಾರವೂ ಬಿಡುಗಡೆ ಮಾಡಲಾಗಿದೆ. ರೈತರ ಹಿತಾಸಕ್ತಿಗೆ ರಾಜ್ಯ ಸರ್ಕಾರ ಸದಾ ಬದ್ಧವಾಗಿದೆ ಎಂದು ಸಚಿವರು ಹೇಳಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಬೀದರ್ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಹಾಗೂ ಪ್ರತಿ ಟನ್ ಕಬ್ಬಿಗೆ 5,000 ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ನಾಗಶೆಟೆಪ್ಪ ಲಂಜವಾಡೆ, ಮಲ್ಲಿಕಾರ್ಜುನ್ ಬಿರಾದಾರ್, ಅಶೋಕ್ ಕಾರಬಾರಿ, ಕಾಶಿಮಲಿ ಜಲಸಂಗಿ, ಕಿರಣ್ ಖಂಡ್ರೆ, ಕೆ.ಡಿ.ಗಣೇಶ್, ಜೈರಾಜ್ ಕೊಳ್ಳಾ, ಸೂರಜ್ ಮಜಗೆ, ಕಿಶನರಾವ್ ಪಾಟೀಲ್ ಕಳಸದಾಳ್, ಭೀಮಾಶಂಕರ್ ಪಾಟೀಲ್ ಉಚ್ಛಾ, ಗೌರವ್ ನೆಲವಾಡೆ, ವಿಠಲರಾವ್ ಮೇತ್ರೆ, ವೀರಾರೆಡ್ಡಿ ಪಾಟೀಲ್, ಶಾಂತಮ್ಮ ಮೂಲಗೆ ಹಾಗೂ ಪ್ರಭಾವತಿ ಚನ್ಮಲ್ ಸೇರಿದಂತೆ ಹಲವರು ಇದ್ದರು.






