ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಂದ ಬಿಜೆಪಿಗೆ ಸಹಕಾರ : ಸಂತೋಷ್ ಲಾಡ್ ಆರೋಪ

ಸಂತೋಷ್ ಲಾಡ್
ಬೀದರ್ : ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಂದ ಬಿಜೆಪಿಗೆ ಸಹಕಾರವಾಗುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಆರೋಪಿಸಿದರು.
ಇಂದು ಬೆಳಿಗ್ಗೆ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ ಎಸ್ಐಆರ್ ಮುಖಾಂತರ 65 ಲಕ್ಷ ವೋಟ್ ತೆಗೆದು ಹಾಕಿದರು. 65 ಲಕ್ಷ ವೋಟ್ ವಾಪಾಸ್ ಹಾಕಿ ಎಂದು ಸುಪ್ರೀಂ ಕೋರ್ಟ್ ಹೇಳಿದರೂ ಕೂಡ ಅದನ್ನು ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
65 ಲಕ್ಷ ವೋಟ್ ತೆಗೆದಿದ್ದನ್ನು ಡಿಜಿಟಲ್ ಫಾರ್ಮಟ್ನಲ್ಲಿ ತೋರಿಸಲಿಲ್ಲ. ಮೋದಿ ಸಾಹೇಬರು ವಿಶ್ವಗುರು ಎಂದು ಹೇಳಿಕೊಂಡು ಓಡಾಡುತ್ತಾರೆ. ಆದರೆ ಅವರಿಗೆ ಡಿಜಿಟಲ್ ಫಾರ್ಮೆಟ್ನಲ್ಲಿ ವೋಟರ್ ಲಿಸ್ಟ್ ಕೊಡುವುದಕ್ಕೆ ಬರಲ್ವಾ? ಅದಕ್ಕೆ ಅವರು ಅರ್ಹತೆ ಪಡೆದಿಲ್ವಾ ಎಂದು ಕೇಳಿದ ಅವರು, ಫೇಕ್ ವೋಟರ್ ಚೆಕ್ ಮಾಡುವ ಸಾಫ್ಟವೇರ್ ಅನ್ನು ಬಳಸುವ ಹಕ್ಕು ಚುನಾವಣಾ ಆಯುಕ್ತರಿಗೆ ಇದೆ. ಆದರೆ ಬೇಕಂತಲೇ ಅದನ್ನು ಬಳಸಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ವಿಶ್ವಗುರು ಮೋದಿಯವರು ಒಬ್ಬ ಮಹಿಳೆಗೆ 10 ಸಾವಿರ ರೂ. ಕೊಟ್ಟು ಮತ ಖರೀದಿ ಮಾಡಿದ್ದಾರೆ. ಇದೆಲ್ಲ ಮಾಡಿದರೂ ಕೂಡ ಆರ್ಜೆಡಿ ಪಕ್ಷ ಶೇ.23ರಷ್ಟು, ಬಿಜೆಪಿಗೆ ಶೇ.20 ರಷ್ಟು, ಜೆಡಿಯು ಶೇ.19ರಷ್ಟು ಮತ ಪಡೆದಿವೆ. ರಾಮವಿಲಾಸ್ ಪಾಸ್ವಾನ್ ಅವರ ಪಕ್ಷ ಹೋದ ಚುನಾವಣೆಯಲ್ಲಿ 134 ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿತ್ತು. ಈ ಚುನಾವಣೆಯಲ್ಲಿ ಕೇವಲ 27 ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿತ್ತು. ಆದರೆ ಎರಡು ಚುನಾವಣೆಯಲ್ಲಿ ಶೇ.6ರಷ್ಟು ಮತದಾನ ಪಡೆದಿದೆ. ಅದು ಹೇಗೆ ಸಾಧ್ಯವಾಯಿತು ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಿಜೆಪಿ 5-6 ತಿಂಗಳ ಅಂತರದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿತು. ಅದಕ್ಕೆ ಕಾರಣ ಆ 5-6 ತಿಂಗಳ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 45 ಲಕ್ಷ ಮತ ಸೇರಿಸಿದ್ದಾರೆ. ಹರಿಯಾಣ ರಾಜ್ಯದಲ್ಲಿ 2 ಕೋಟಿ 25 ಲಕ್ಷ ಮತ, ಇವಾಗ ಬಿಹಾರ ರಾಜ್ಯದಲ್ಲಿ ಇದನ್ನು ಉಲ್ಟಾ ಮಾಡಿ 65 ಲಕ್ಷ ಮತ ಗಳನ್ನು ತೆಗೆದಿದ್ದಾರೆ ಎಂದು ಕಿಡಿಕಾರಿದರು.
ವೋಟ್ ಶೇರ್ ಹೆಚ್ಚು ಕಡಿಮೆಯಾಗದೆ ಸಮಾನವಾಗಿದ್ದರೂ ಕೂಡ ಬಿಜೆಪಿಯವರಿಗೆ ಹೆಚ್ಚು ಸ್ಥಾನಗಳು ಗೆಲ್ಲುವುದಕ್ಕೆ ಹೇಗೆ ಸಾಧ್ಯ. ಅವರು ಮತದಾರರ ಪಟ್ಟಿಯಿಂದ ಮತಗಳನ್ನು ತೆಗೆಯುವ, ಸೇರಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಗೆದ್ದ ಸ್ಥಾನಗಳು ಹೆಚ್ಚಾದರೆ ವೋಟ್ ಶೇರ್ ಕೂಡ ಹೆಚ್ಚಾಗಬೇಕಿತ್ತು, ಆದರೆ ಅದು ಆಗಲಿಲ್ಲ. ಹಾಗಾಗಿ ಜನಕ್ಕಿಂತ ಚುನಾವಣೆ ಆಯೋಗದ ಮೇಲೆಯೇ ಇವರಿಗೆ ಹೆಚ್ಚು ನಂಬಿಕೆ ಇದೆ. ಇದು ಮೇಲ್ನೋಟಕ್ಕೆ ಕಾಣುತ್ತದೆ ಎಂದರು.







