ಬೀದರ್: ಸೆ.3 ರಿಂದ 14ರ ವರೆಗೆ ಸೀರತ್ ಅಭಿಯಾನ

ಬೀದರ್: ನಗರದಲ್ಲಿ ಸೆ.3 ರಿಂದ 14 ರ ವರೆಗೆ 'ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್' ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಸಲಹಾ ಮಂಡಳಿ ಸದಸ್ಯ ಮುಹಮ್ಮದ್ ಆಸಿಫುದ್ದೀನ್ ಹಾಗೂ ಜಿಲ್ಲಾ ಘಟಕದ ಹಿರಿಯ ಸದಸ್ಯ ಮುಹಮ್ಮದ್ ನಿಝಾಮುದ್ದೀನ್ ಅವರು ಹೇಳಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಈ ಮಾಹಿತಿ ನೀಡಿದರು.
ಪ್ರವಾದಿ ಮುಹಮ್ಮದ್(ಸ) ಅವರ ಸಾರ್ವತ್ರಿಕ ಬೋಧನೆಗಳನ್ನು ಜನರಿಗೆ ತಿಳಿಸುವುದು ಹಾಗೂ ವಿವಿಧ ಧರ್ಮೀಯರ ನಡುವಿನ ಸಂಬಂಧ ಗಟ್ಟಿಗೊಳಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ತಿಳಿಸಿದರು.
ರಾಜ್ಯದಾದ್ಯಂತ ನಡೆಯಲಿರುವ ಅಭಿಯಾನದ ನಿಮಿತ್ತ ನಗರದಲ್ಲೂ ಮುಸ್ಲಿಮ್ ಗಣ್ಯರ ಸಮಾಲೋಚನಾ ಸಭೆ, ಗಣ್ಯರು-ಧಾರ್ಮಿಕ ಮುಖಂಡರ ಭೇಟಿ, ವೈಯಕ್ತಿಕ ಭೇಟಿ, ಕ್ಯಾಂಪಸ್ ಉಪನ್ಯಾಸ, ಜುಮಾ ಪ್ರವಚನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಸೆ. 13 ಮತ್ತು 14 ರಂದು ಜಾಮಾ ಮಸೀದಿಯಲ್ಲಿ ನಡೆಯುವ ಸೀರತ್ ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ನ ತೆಲಂಗಾಣ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಮೌಲಾನಾ ಹಾಮಿದ್ ಮುಹಮ್ಮದ್ ಖಾನ್ ಪಾಲ್ಗೊಳ್ಳುವರು. ಸೆ.14 ರಂದು ಸಂಜೆ 7ಕ್ಕೆ ಹೋಟೆಲ್ ಬೀದರ್ ಗೇಟ್ ವೇ ನಲ್ಲಿ ಗಣ್ಯರ ಸಂವಾದ ಕಾರ್ಯಕ್ರಮ ನಡೆಯಲಿದೆ. ಜಮಾಅತೆ ಇಸ್ಲಾಮಿ ಹಿಂದ್ನ ಕೇಂದ್ರ ಸಲಹಾ ಮಂಡಳಿಯ ಸದಸ್ಯ ಮೌಲಾನಾ ಮುಹಮ್ಮದ್ ಇಕ್ಬಾಲ್ ಮುಲ್ಲಾ ಅವರು ಭಾಗವಹಿಸುವರು ಎಂದರು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ನ ಬೀದರ್ ಘಟಕದ ಉಪಾಧ್ಯಕ್ಷ ಮುಹಮ್ಮದ್ ಆರಿಫುದ್ದೀನ್ ಅವರು ಇದ್ದರು.







