ಐದು ವರ್ಷದ ಮಕ್ಕಳ ಸಾವಿಗೆ ಅತೀಸಾರ ಭೇದಿ ಪ್ರಮುಖ ಕಾರಣ: ಡಾ.ದ್ಯಾನೇಶ್ವರ್ ನಿರುಗುಡೆ

ಬೀದರ್ : ಐದು ವರ್ಷದ ಮಕ್ಕಳ ಸಾವಿಗೆ ಅತೀಸಾರ ಭೇದಿ ಪ್ರಮುಖ ಕಾರಣವಾಗಿದ್ದು, ಮಕ್ಕಳಲ್ಲಿ ಬೇಧಿ ರೋಗ ಪುನರಾವರ್ತನೆಯಾದಾಗ ಮಕ್ಕಳ ತೂಕ ಕ್ಷಿಣಿಸಿ ಅಪೌಷ್ಠಿಕತೆ ಉಂಟಾಗುತ್ತದೆ. ಇದರಿಂದ ಐದು ವರ್ಷದೊಳಗಿನ ಮಕ್ಕಳಲ್ಲಿ ಸಾವಿನ ಪ್ರಮಾಣ ಹೆಚ್ಚುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ದ್ಯಾನೇಶ್ವರ್ ನಿರುಗುಡೆ ತಿಳಿಸಿದರು.
ಇಂದು ನಗರದ ಬ್ರಿಮ್ಸ್ ಆಸ್ಪತ್ರೆಯ ಪೌಷ್ಠಿಕ ಆಹಾರ ಪುನಶ್ಚೇತನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾದ್ಯಾಂತ ಜೂ.16 ರಿಂದ 31 ರವರೆಗೆ ಜರುಗುತ್ತಿರುವ 'ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ' ಕಾರ್ಯಕ್ರಮದಲ್ಲಿ ಮಕ್ಕಳಿಗೆ ಓಆರ್ಎಸ್ ಪೊಟ್ಟಣ ಮತ್ತು ಝಿಂಕ್ ಮಾತ್ರೆ ನೀಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿದ್ದು, ಇದನ್ನು ನಿವಾರಿಸುವ ಸಲುವಾಗಿ 5 ವರ್ಷದೊಳಗಿನ ಎಲ್ಲಾ ಮಕ್ಕಳ ತಾಯಿಂದಿರಿಗೆ ಓಆರ್ಎಸ್ ಪೊಟ್ಟಣವನ್ನು ಮನೆ ಮನೆಗೆ ತೆರಳಿ ವಿತರಿಸಲಾಗುತ್ತಿದೆ. ವಿತರಿಸುವ ಸಮಯದಲ್ಲಿ ಓಆರ್ಎಸ್ ಚಕಿತ್ಸೆಯ ವಿಧಾನ, ಓಆರ್ಎಸ್ ದ್ರಾವಣ ತಯಾರಿಸುವ ಕ್ರಮ ಹಾಗೂ ಬೇಧಿ ಸಂದರ್ಭದಲ್ಲಿ ಓಆರ್ಎಸ್ ಮತ್ತು ಝಿಂಕ್ ಮೂಲಕ ಉಪಚರಿಸುವ ಕ್ರಮಗಳ ಕುರಿತು ತಾಯಿಂದಿಯರಿಗೆ ತಿಳಿಸಲಾಗುತ್ತಿದೆ. ಅದಲ್ಲದೆ ಕೈತೊಳೆಯುವ ಪ್ರಾತ್ಯಕ್ಷಿಕೆ ಮತ್ತು ಕೈ ತೊಳೆಯುವುದರ ಮಹತ್ವವನ್ನು ಕುರಿತು ವಿವರಿಸಲಾಗುತ್ತಿದೆ ಎಂದು ಹೇಳಿದರು.
ಎಲ್ಲ ತಾಯಿಂದಿರು ಈ ಯೋಜನೆಯ ಮಹತ್ವವನ್ನು ಅರಿತುಕೊಂಡು ಅನುಸರಿಸಬೇಕು. ಮೊದಲ ಆರು ತಿಂಗಳಲ್ಲಿ, ಮಗುವಿಗೆ ಕೇವಲ ತಾಯಿ ಹಾಲನ್ನು ಮಾತ್ರ ನೀಡಬೇಕು. ಅಡುಗೆ ಮಾಡುವ, ಅಡುಗೆ ಬಡಿಸುವ ಮುನ್ನ ಮತ್ತು ಮಗುವಿನ ಮಲ ಶುಚಿ ಮಾಡಿದ ನಂತರ ಕೈಗಳನ್ನು ಸೋಪು ಬಳಸಿ ತೊಳೆದುಕೊಳ್ಳಿರಿ ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಹ್ಮದುದ್ದೀನ್ ಅವರು ಮಾತನಾಡಿ, ಅತಿಸಾರ ಬೇದಿಯಾಗುವಾಗ ಮತ್ತು ನಂತರ ತಾಯಿ ಹಾಲು, ದ್ರಾವಣಗಳು ಹಾಗೂ ಹೆಚ್ಚುವರಿ ಪೌಷ್ಟಿಕ ಆಹಾರ ನೀಡುವುದನ್ನು ಮುಂದುವರೆಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಕ್ಕಳ ತಜ್ಞ ಡಾ. ಜಗದೀಶ್ ಕೋಟೆ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಶಿವಶಂಕರ್.ಬಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬಳೆ, ಮಕ್ಕಳ ತಜ್ಞೆ ಡಾ. ಶಾಂತಲಾ ಕೌಜಲಗಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ್ ಬಿರಾದರ್, ಕಾರ್ಯಕ್ರಮ ಸಂಯೋಜಕ ಶಿವಶಂಕರ್ ಬೇಮಳಗಿ, ಲೊಕೇಶ್, ಗಂಗಾಧರ ಕಾಂಬಳೆ, ಭಾಗ್ಯಲಕ್ಷ್ಮಿ, ಅಶೋಕ್, ವಿನಾಯಕ್, ದೇವಿದಾಸ್, ಚನ್ನಬಸವ ಹಾಗೂ ಸನ್ನಿಪಾಲ್ ಸೇರಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಅಧಿಕಾರಿ, ಸಿಬ್ಬಂದಿ ಮತ್ತು ಮಕ್ಕಳ ತಾಯಿಂದಿರು ಉಪಸ್ಥಿತರಿದ್ದರು.







