1984 ರ ಸಿಖ್ ವಿರೋಧಿ ದಂಗೆ | ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಗೆ ಜೀವಾವಧಿ ಶಿಕ್ಷೆ

Photo : PTI
ಹೊಸದಿಲ್ಲಿ: 1984 ರ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದ ಕೊಲೆ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಮಂಗಳವಾರ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
1984ರ ನವೆಂಬರ್ 1ರಂದು ರಾಷ್ಟ್ರ ರಾಜಧಾನಿಯ ಸರಸ್ವತಿ ವಿಹಾರ್ ಪ್ರದೇಶದಲ್ಲಿ ಜಸ್ವಂತ್ ಸಿಂಗ್ ಮತ್ತು ಅವರ ಪುತ್ರ ತರುಣ್ದೀಪ್ ಸಿಂಗ್ ಅವರನ್ನು ಹತ್ಯೆಗೈಯ್ಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ವಾದವನ್ನು ಆಲಿಸಿದ ದಿಲ್ಲಿಯ ರೋಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶರಾದ ಕಾವೇರಿ ಬವೇಜಾ ತೀರ್ಪು ಕಾಯ್ದಿರಿಸಿದ್ದರು.
ಸಜ್ಜನ್ ಕುಮಾರ್ ಪ್ರಸ್ತುತ ದಿಲ್ಲಿಯಲ್ಲಿ ನಡೆದ ಮತ್ತೊಂದು ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ಗಲಭೆಯ ಸಂದರ್ಭ ಉದ್ರಿಕ್ತ ಗುಂಪು ಜಸ್ವಂತ್ ಸಿಂಗ್ ಮತ್ತು ಅವರ ಪುತ್ರ ತರುಣ್ದೀಪ್ ಸಿಂಗ್ ಅವರನ್ನು ಕೊಲೆ ಮಾಡಿ ಅವರ ಮನೆಯನ್ನು ಲೂಟಿ ಮಾಡಿತ್ತು. ಸಜ್ಜನ್ ಕುಮಾರ್ ಕೃತ್ಯದಲ್ಲಿ ಭಾಗವಹಿಸಿದ್ದಲ್ಲದೆ ಉದ್ರಿಕ ಗುಂಪಿನ ನೇತೃತ್ವ ವಹಿಸಿದ್ದರು ಎಂದು ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ವಾದ ಮಂಡಿಸಿತ್ತು.





