Chamarajanagar | ಅಕ್ರಮವಾಗಿ ಹುಲಿ ಉಗುರು, ಹಲ್ಲು ಮಾರಾಟಕ್ಕೆ ಯತ್ನ; ಮೂವರು ಆರೋಪಿಗಳ ಬಂಧನ

ಚಾಮರಾಜನಗರ : ಅಕ್ರಮವಾಗಿ ಹುಲಿ ಉಗುರು ಮತ್ತು ಹಲ್ಲುಗಳನ್ನು ಸಂಗ್ರಹಿಸಿಕೊಂಡು ಮಾರಾಟ ಮಾಡಲು ಯತ್ನಿಸಿದ ಮೂವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಬಳಿ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಬಳಿ ಅರಣ್ಯಾಧಿಕಾರಿಗಳಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ವಿಶೇಷ ಹುಲಿ ಸಂರಕ್ಷಣಾ ದಳ, ಬಂಡೀಪುರ- ನಾಗರಹೊಳೆ ಮತ್ತು ಜಿ.ಎಸ್.ಬೆಟ್ಟ ಅರಣ್ಯ ಸಿಬ್ಬಂದಿಗಳು ಜಂಟಿಯಾಗಿ ಕಾರ್ಯಚರಣೆ ನಡೆಸಿ ಹುಲಿ ಉಗುರು ಮತ್ತು ಹಲ್ಲುಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮಹದೇವ ಬಿನ್ ಜಡಿಯ, ಹೊಸಪೋಡು ಗ್ರಾಮ , ರಮೇಶ ಬಿನ್ ಆಲುವಯ್ಯ, ಮಾವತ್ತೂರು ಗ್ರಾಮ , ಮಣಿ ಬಿನ್ ರಾಮು, ವಡೆಯರಪಾಳ್ಯ ಬಂಧಿಸಲಾಗಿದೆ.
ಬಂಧಿತರ ಆರೋಪಿಗಳಿಂದ 4 (ನಾಲ್ಕು) ಹುಲಿಯ ಕೋರೆ ಹಲ್ಲುಗಳು, 2 (ಎರಡು) ದವಡೆ ಹಲ್ಲುಗಳು, 1 (ಒಂದು) ಹುಲಿಯ ಉಗುರು ಮತ್ತು ಆಟೋವನ್ನು ವಶಪಡಿಸಿಕೊಂಡು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಬಂಧಿತರನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಡಿಯಲ್ಲಿ ಮೊಕದ್ದಮೆಯನ್ನು ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.




