Chamarajanagar | ಕಾವೇರಿಗಾಗಿ ರಸ್ತೆಗಿಳಿದ ಕನ್ನಡ ಪರ ಸಂಘಟನೆಗಳು

ಚಾಮರಾಜನಗರ: ರಾಜ್ಯದ ಕಾವೇರಿ ನದಿ ಪಾತ್ರದಿಂದ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶಿಸಿರುವ ಕ್ರಮ ಖಂಡಿಸಿ ವಿವಿಧ ಕನ್ನಡಪರ ಸಂಘಟನೆಗಳಿಂದ ಚಾಮರಾಜನಗರದಲ್ಲಿ ಪ್ರತಿಭಟನೆ ನಡೆಯಿತು.
ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆಯಲ್ಲಿ ಪಚ್ಚಪ್ಪ ವೃತ್ತಕ್ಕೆ ತೆರಳಿ ಹೆದ್ದಾರಿ ತಡೆದು ಕಡ್ಲೆಪುರಿ, ಅರಿಶಿಣ, ಕುಂಕುಮ ಹಾಗೂ ಹೂವುಗಳನ್ನು ಎರಚಿ ಕೆಲಕಾಲ ಪ್ರತಿಭಟನೆ ನಡೆಸಿದರು. ಕಾವೇರಿ ನೀರು ನಿಯಂತ್ರಣ ಸಮಿತಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪರ ಸಂಘಟನೆಯ ಪರವಾಗಿ ಕರ್ನಾಟಕ ಸೇನಾ ಪಡೆಯ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕರ್ನಾಟಕದ ವಾಸ್ತವ ಸ್ಥಿತಿಯನ್ನು ಅರಿಯದೆ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ನೀಡಿರುವುದು ಖಂಡನೀಯ. ಇದರಿಂದ ರಾಜ್ಯದ ಜನತೆಗೆ ಅನ್ಯಾಯವಾಗುತ್ತಿದೆ. ನಮ್ಮ ಪಾಲಿಗೆ ಕಾವೇರಿ ನೀರು ನಿಯಂತ್ರಣ ಸಮಿತಿ ಸತ್ತು ಹೋಗಿದೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು, ನೀರಿನ ಕೊರತೆ ಕಾಡುತ್ತಿದೆ. ಆದರೆ, ಇದನ್ನು ತಿಳಿಯದ ಸಮಿತಿ ದೆಹಲಿಯಲ್ಲಿ ಕುಳಿತು ಇಲ್ಲಿನ ವಾಸ್ತವವನ್ನು ಪರಿಶೀಲನೆ ನಡೆಸದೇ ತಮಿಳುನಾಡಿಗೆ ನೀರು ಬಿಡಿ ಎಂದು ಆದೇಶ ಹೊರಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಕನ್ನಡಪರ ಸಂಘಟನೆಯ ಸೋಮನಾಯಕ, ಪರಶಿವಮೂರ್ತಿ, ಶಿವರಾಜು, ಪಣ್ಯದಹುಂಡಿ ರಾಜು, ನಿಜಧ್ವನಿ ಗೋವಿಂದರಾಜು, ರಾಚಪ್ಪ, ಆಟೋ ಲಿಂಗರಾಜು, ಲೋಕೇಶ್, ಮಹೇಶ್ ಗೌಡ, ರಮೇಶ್ ಗೌಡ, ಮಹದೇವನಾಯಕ, ತಾಂಡವಮೂರ್ತಿ, ಮಂಜು, ವೀರಭದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.






