ಚಾಮರಾಜನಗರ: ಅನುಮಾಸ್ಪದ ರೀತಿಯಲ್ಲಿ ಐದು ಹಸುಗಳು ಸಾವು

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಬಿದರಳ್ಳಿ ಗ್ರಾಮದಲ್ಲಿ ಐದು ಹಸುಗಳು ಅನುಮಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಸ್ಥಳೀಯ ರೈತರು ಆತಂಕದಲ್ಲಿದ್ದಾರೆ.
ಮೃತ ಹಸುಗಳು ಬಿದರಳ್ಳಿ ಗ್ರಾಮದ ನಾಗ ಹಾಗೂ ಪ್ರಭು ಎಂಬವರಿಗೆ ಸೇರಿದ್ದು, ಶನಿವಾರ ಸಂಜೆ ಹಸುಗಳನ್ನು ಹತ್ತಿರದ ಕಾಡು ಪ್ರದೇಶಕ್ಕೆ ಮೇಯಲು ಬಿಟ್ಟಿದ್ದರು. ಆದರೆ ರಾತ್ರಿ ಕಳೆದರೂ ಹಸುಗಳು ಮನೆಗೆ ಮರಳದ ಕಾರಣ, ಭಾನುವಾರ ಬೆಳಗ್ಗೆಯೇ ರೈತರು ಹಾಲ್ಲಿ ಕೆರೆಯ ಬಳಿ ಹಸುವನ್ನು ಹುಡುಕಲು ತೆರಳಿದಾಗ, ಐದು ಹಸುಗಳು ಒಂದೇ ಕಡೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಾವಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಸ್ಥಳೀಯರು ವಿಷಪ್ರಾಷಣವಾಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮುನ್ನ ಜಿಲ್ಲೆಯಲ್ಲಿನ ವಿವಿಧ ಕಡೆಗಳಲ್ಲಿ ಪ್ರಾಣಿಗಳ ಸಾವಿನ ಘಟನೆಗಳು ನಡೆದಿವೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸೂಳ್ಳಾಡಿ ಮಾರಮ್ಮ ದೇವಾಲಯದಲ್ಲಿ ನಡೆದ ವಿಷಪ್ರಸಾದ ದುರಂತ, ಮೀಣ್ಯಂ ಬಳಿ ಐದು ಹುಲಿಗಳ ಸಾವಿಗೆ ಕಾರಣವಾದ ವಿಷದ ಮಿಶ್ರಣ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಕಂದೇಗಾಲ ಬಳಿ ಕೋತಿಗಳ ವಿಷದ ಸಾವು, ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದ ಕ್ಯಾರಿಯಲ್ಲಿ ಚಿರತೆ ಸಾವು - ಇವೆಲ್ಲವೂ ಜಿಲ್ಲೆಯಲ್ಲಿ ಮೂಕ ಪ್ರಾಣಿಗಳ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತಿದೆ.
ಇದೀಗ ಹಸುಗಳ ಸಾವಿನ ಪ್ರಕರಣದಲ್ಲಿ ನಿಖರ ಸತ್ಯ ಹೊರಗೆಳೆಯುವಂತೆ ರೈತರು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಪೊಲೀಸರಿಂದ ಪರಿಶೀಲನೆ ಹಾಗೂ ಪಶುಸಂಗೋಪನೆ ಇಲಾಖೆಯಿಂದ ಮೃತ ಹಸುಗಳ ಶವ ಪರೀಕ್ಷೆ ಮೂಲಕ ಸ್ಪಷ್ಟ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಸತತವಾಗಿ ನಡೆದಿರುವ ಈ ರೀತಿಯ ಘಟನೆಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ಅಗತ್ಯವಿದೆ ಎಂಬ ಮಾಉಗಳೂ ಕೇಳಿ ಬರುತ್ತಿದೆ.







