ಹನೂರು | 14 ಎಕರೆ ಸರಕಾರಿ ಜಮೀನು ಒತ್ತುವರಿ ತೆರವು

ಚಾಮರಾಜನಗರ: ಹನೂರು ಪಟ್ಟಣದ ಹೊರವಲಯದ ಕೊಳ್ಳೇಗಾಲ ಮುಖ್ಯರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಜೆಸಿಬಿಗಳ ಗರ್ಜನೆ ಕೇಳಿ ಬಂದಿದ್ದು ಸರಕಾರದ ಮಾಲಕತ್ವದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ರೈತ ಕುಟುಂಬದ ವಿರುದ್ಧ ಅಧಿಕಾರಿಗಳು ಭಾರೀ ಕಾರ್ಯಾಚರಣೆ ನಡೆಸಿ, ಸುಮಾರು 30 ಕೋಟಿ ರೂ. ಮೌಲ್ಯದ 14 ಎಕರೆ ಜಮೀನನ್ನು ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಮಂಗಳವಾರ ಬೆಳಗ್ಗೆ 7 ಗಂಟೆಗೆ ಆರಂಭವಾದ ಕಾರ್ಯಾಚರಣೆ ತಹಶೀಲ್ದಾರ್ ವೈ.ಕೆ.ಗುರುಪ್ರಸಾದ್, ರಾಜಸ್ವ ನಿರೀಕ್ಷಕ ಶೇಷಣ್ಣ ಮತ್ತು ಹನೂರು ಪೊಲೀಸ್ ಇನ್ ಸ್ಪೆಕ್ಟರ್ ಆನಂದ್ ಮೂರ್ತಿ ನೇತೃತ್ವದಲ್ಲಿ ನಡೆಯಿತು.
ಈ ವೇಳೆ ಸರ್ವೆ ಸಂಖ್ಯೆ 355/1 – 5.50 ಎಕರೆ,ಸರ್ವೆ ಸಂಖ್ಯೆ 356/A 5.95 ಎಕರೆ,ಸರ್ವೆ ಸಂಖ್ಯೆ 356/C 2.58 ಎಕರೆ ಒಟ್ಟಾರೆ 14.03 ಎಕರೆ ಜಾಗವನ್ನು ವಿಶ್ವೇಶ್ವರ ಪ್ರಸಾದ್ ಎಂಬಾತ ತನ್ನ ವಶಕ್ಕೆ ಪಡೆದಿದ್ದಾನೆ ಎಂಬ ಮಾಹಿತಿ ಮೇರೆಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಸ್ಥಳದಲ್ಲೇ ಜೆಸಿಬಿಗಳ ಮೂಲಕ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಿದರು.
ಈ ತೆರವು ಕಾರ್ಯಾಚರಣೆಯಲ್ಲಿ 20ಕ್ಕೂ ಹೆಚ್ಚು ಕಂದಾಯ ಇಲಾಖೆಯ ಅಧಿಕಾರಿಗಳು, 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ, ಪಟ್ಟಣ ಪಂಚಾಯತ್ ಮತ್ತು ಆರೋಗ್ಯ ಇಲಾಖೆಗಳ ಸಿಬ್ಬಂದಿ ಪಾಲ್ಗೊಂಡಿದ್ದರು.







