ಹನೂರು ಶೂಟೌಟ್ ಪ್ರಕರಣ: ಮರಣೋತ್ತರ ಪರೀಕ್ಷೆ ನಂತರ ಮೈಸೂರಿನಿಂದ ಸ್ವಗ್ರಾಮಕ್ಕೆ ಮೃತದೇಹಗಳ ಸ್ಥಳಾಂತರ

ಮೈಸೂರು : ಇಲ್ಲಿನ ಮೈಸೂರು ಕೆ.ಆರ್.ಆಸ್ಪತ್ರೆ ವೈದ್ಯಕೀಯ ಕಾಲೇಜಿನ ಶವಗಾರಕ್ಕೆ ಚಾಮರಾಜನಗರ ಜಿಲ್ಲೆ ಹನೂರಿನಿಂದ ತರಲಾಗಿದ್ದ ಎನ್ಕೌಂಟರ್ ನಿಂದ ಮೃತಪಟ್ಟವರ ದೇಹವನ್ನು ರವಿವಾರ ಸಂಜೆ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ವಾರಸುದಾರರೊಂದಿಗೆ ಮೃತರ ಸ್ವಗ್ರಾಮಕ್ಕೆ ಸ್ಥಳಾಂತರಿಸಲಾಯಿತು.
ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಬಲಿಯಾದ ಮೂವರ ಮೃತ ದೇಹವನ್ನು ಕೊಳ್ಳೇಗಾಲ ಪೊಲೀಸರು ಶನಿವಾರ ಬೆಳಗ್ಗೆ ಮೈಸೂರಿನ ಮೆಡಿಕಲ್ ಕಾಲೇಜಿನ ಶವಗಾರಕ್ಕೆ ತಂದಿರಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆಗೆ ಘಟನೆ ಸಂಬಂಧ ಪ್ರಕರಣ ದಾಖಲಾಗದಿರುವುದು ಹಾಗೂ ಮೃತರ ಪೋಷಕರು ಅನುಮತಿ ನಿರಾಕರಿಸಿದ್ದರಿಂದ ಶನಿವಾರ ಮರಣೋತ್ತರ ಪರೀಕ್ಷೆ ನಡೆದಿರಲಿಲ್ಲ. ಬಳಿಕ ರವಿವಾರವೂ ವಿವಿಧ ಬೇಡಿಕೆಗೆ ಆಗ್ರಹಿಸಿ ಪಟ್ಟು ಹಿಡಿದ ಮೃತರ ಕುಟುಂಬದವರು ಸಂಜೆವರೆಗೂ ಶವ ಪರೀಕ್ಷೆಗೆ ಅನುಮತಿ ನೀಡಲಿಲ್ಲ. ಕೊನೆಗೂ ಅಧಿಕಾರಿಗಳು ಮೃತರ ಕುಟುಂಬದವರ ಮನವೊಲಿಸಿ ರಾತ್ರಿ 8 ಗಂಟೆ ವೇಳೆಗೆ ಮೂವರ ಮರಣೋತ್ತರ ಪರೀಕ್ಷೆ ಪ್ರಕ್ರಿಯೆ ಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು.
ಪೊಲೀಸರು ರವಿವಾರ ಬೆಳಗ್ಗಿನಿಂದಲೆ ಮರಣೋತ್ತರ ಪರೀಕ್ಷೆ ನಡೆಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತಾದರೂ, ಮಹಜರು ಪ್ರಕ್ರಿಯೆಗೆ ಸಹಿ ಮಾಡಲು ಪೋಷಕರು ಹಿಂದೇಟು ಹಾಕಿದರು. ಪೊಲೀಸರು ಎಷ್ಟೇ ಮನವಿ ಮಾಡಿದರೂ ಪೋಷಕರು ಮಾತ್ರ ಮಹಜರು ಪ್ರಕ್ರಿಯೆಯಿಂದ ದೂರವುಳಿದರು. ಇದರಿಂದ ಮರಣೋತ್ತರ ಪರೀಕ್ಷೆಗೆ ಮತ್ತೆ ಹಿನ್ನಡೆಯಾಯಿತು.
ಸ್ಥಳಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಬರಬೇಕು. ಅಲ್ಲದೆ, ಕಾವೇರಿ ವನ್ಯಧಾಮದ ಅರಣ್ಯಾಧಿಕಾರಿಗಳು ಬರಬೇಕು ಎಂದು ಬಿ️ಗಿಪಟ್ಟು ಹಿಡಿದರು.
ಗುಂಡೇಟಿನಿಂದ ಮೃತಪಟ್ಟ ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೂ ಮುನ್ನ ನಿಯಮಾನುಸಾರ ಸ್ಕ್ಯಾನಿಂಗ್ ಮಾಡಿಸಿ, ದೇಹದಲ್ಲಿ ಗುಂಡು ಇರುವಿಕೆ ಪತ್ತೆ ಮಾಡಲು ಪೊಲೀಸರು ಮುಂದಾದರು. ಆದರೆ, ಸಂಬಂಧಿಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ನಿಯಮಾನುಸಾರ ಮರಣೋತ್ತರ ಪರೀಕ್ಷೆಗೂ ಮುನ್ನ ಸ್ಕ್ಯಾನಿಂಗ್ ಮಾಡಿಸಬೇಕಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು. ಬಳಿಕ ಶವಗಾರದಿಂದ ಕೆ.ಆರ್.ಆಸ್ಪತ್ರೆಯ ಸ್ಕ್ಯಾನಿಂಗ್ ವಿಭಾಗಕ್ಕೆ ಶವ ಸಾಗಿಸಿ ಸ್ಕ್ಯಾನಿಂಗ್ ಮಾಡಿಸಿ ಮತ್ತೆ ಶವಾಗಾರಕ್ಕೆ ಮೃತದೇಹಗಳ್ನು ತಂದರು.
ಸಂಜೆ ನಂತರ ಶವಪರೀಕ್ಷೆ: ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ. ಈಗಾಗಲೇ ಅರಣ್ಯ ಸಿಬ್ಬಂದಿ ವಿರುದ್ಧ ಎಫ್ಐಆರ್ ಆಗಿದೆ. ತನಿಖೆ ಸಮಗ್ರವಾಗಿ ನಡೆಸಬೇಕಾದರೆ ಮರಣೋತ್ತರ ಪರೀಕ್ಷಾ ವರದಿ ಅಗತ್ಯವಾಗಿದೆ ಎಂದು ಪೊಲೀಸರು ಮನವರಿಕೆ ಮಾಡಿಕೊಟ್ಟ ಬಳಿಕ ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ಸೂಚಿಸಿದರು. ನಂತರ ಸಂಜೆ ಮರಣೋತ್ತರ ಪ್ರಕ್ರಿಯೆ ಆರಂಭವಾಯಿತು. ಮೂವರ ಮರಣೋತ್ತರ ಪರೀಕ್ಷೆ ಮುಗಿಯುವ ವೇಳೆಗೆ ರಾತ್ರಿ 8 ಗಂಟೆ ಆಗಿತ್ತು. ಆದರೂ, ಮೂರು ಪ್ರತ್ಯೇಕ ಆಂಬ್ಯುಲೆನ್ಸ್ನಲ್ಲಿ ಬಿ️ಗಿ ಭದ್ರತೆಯೊಂದಿಗೆ ಮೃತದೇಹವನ್ನು ಸ್ಥಳಾಂತರಿಸಲಾಯಿತು.






