ಕರ್ತವ್ಯ ಲೋಪ ಆರೋಪ : ಚಿಕ್ಕಮಗಳೂರು ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ಅಮಾನತು

ಚಿಕ್ಕಮಗಳೂರು : ಜಾಮಿಯಾ ಮಸೀದಿ ಹಾಗೂ ನಲ್ಲೂರು ಮಠ ನಡುವಿನ ವಿವಾದಿತ ಬಡಾ ಮಕಾನ್ ಜಾಗದಲ್ಲಿದ್ದ ಕಟ್ಟಡ ತೆರವು ಪ್ರಕ್ರಿಯೆ ಕೈಗೊಳ್ಳುವ ಪೂರ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡದಿರುವುದು, ಸೂಕ್ತ ಪೊಲೀಸ್ ಭದ್ರತೆ ಪಡೆಯದಿರುವುದು ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳಲಾಗಿದೆ ಎಂಬ ಆರೋಪದಲ್ಲಿ ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿಯನ್ನು ಅಮಾನತುಗೊಳಿಸಿ ರಾಜ್ಯ ವಕ್ಫ್ ಬೋರ್ಡ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೋಮವಾರ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರು ನಗರದ ಜಾಮೀಯಾ ಮಸೀದಿಗೆ ಸೇರಿದ್ದು ಎನ್ನಲಾದ ಬಡಾ ಮಕಾನ್ ವಕ್ಫ್ ಆಸ್ತಿಯಲ್ಲಿ ಎನ್.ಎಂ.ಕಮಲಮ್ಮ ಹಾಗೂ ಇತರರು ಮತ್ತು ವಕ್ಫ್ ಮಂಡಳಿ ಹಾಗೂ ಜಾಮಿಯಾ ಮಸೀದಿ ಆಡಳಿತ ಸಮಿತಿ ಮಧ್ಯೆ ನ್ಯಾಯಾಲಯದಲ್ಲಿ ವಿವಾದ ನಡೆಯುತ್ತಿದೆ. ಈ ಮಧ್ಯೆ ಹೈಕೋರ್ಟ್ ಆದೇಶದನ್ವಯ ಇತ್ತೀಚೆಗೆ
ವಕ್ಫ್ ಬೋರ್ಡ್ ಜಿಲ್ಲಾ ಅಧಿಕಾರಿ ಸೈಯದ್ ಸತ್ತಾರ್ ಹುಸೇನಿ ನೇತೃತ್ವದದಲ್ಲಿ ಬಡಾ ಮಕಾನ್ ಜಾಗದಲ್ಲಿದ್ದ ಕಟ್ಟಡ ತೆರವು ಮಾಡಲಾಗಿತ್ತು. ಈ ತೆರವು ಕಾರ್ಯಾಚರಣೆ ವಿರುದ್ಧ ಕೆಲ ಸಂಘಟನೆಗಳು ಜಿಲ್ಲಾಡಳಿತ ಮತ್ತು ಸರಕಾರಕ್ಕೆ ದೂರು ನೀಡಿದ್ದವು.
ಈ ಹಿನ್ನೆಲೆಯಲ್ಲಿ ರಾಜ್ಯ ವಕ್ಫ್ಬೋರ್ಡ್ ಸಿಇಒ ಅವರು ಕರ್ತವ್ಯ ಲೋಪದಡಿಯಲ್ಲಿ ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ಸೈಯದ್ ಸತ್ತಾರ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ತೆರವು ಕಾರ್ಯಾಚರಣೆ ವೇಳೆ ಅಧಿಕಾರಿಯ ಅಧಿಕಾರ ವ್ಯಾಪ್ತಿ ಬಗ್ಗೆ ಸರಿಯಾಗಿ ಮಾಹಿತಿ ಹೊಂದಿಲ್ಲ. ತೆರವು ಪೂರ್ವದಲ್ಲಿ ನಗರಸಭೆ ಆಯುಕ್ತರಿಗೆ ಮಾಹಿತಿ ನೀಡಿಲ್ಲ, ಪೊಲೀಸ್ ಠಾಣೆಗೆ ಬಂದೋಬಸ್ತ್ ಒದಗಿಸಲು ಮಾಹಿತಿ ನೀಡಿಲ್ಲ. ದಾಖಲಾತಿಗಳನ್ನು ಸರಿಯಾಗಿ ಪರಿಶೀಲಿಸದೆ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಅಧಿಕಾರಿಯ ಬೇಜವಾಬ್ದಾರಿಯಿಂದಾಗಿ ವಿವಾದಿತ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಲು ಕಾರಣವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.