ಚಿಕ್ಕಮಗಳೂರು: ಕಾಫಿ ಕಣದಲ್ಲಿ ಮಲಗಿದ್ದ ವ್ಯಕ್ತಿಯನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿದ ಕಾಡಾನೆ

ಚಿಕ್ಕಮಗಳೂರು: ಕಾಫಿ ರಕ್ಷಣೆ ಗಾಗಿ ಕಾಫಿ ಕಣದಲ್ಲಿ ಮಲಗಿದ್ದ ವ್ಯಕ್ತಿಯನ್ನು ಕಾಡಾನೆ ಸೊಂಡಿಲಿನಿಂದ ಎತ್ತಿ ಬಿಸಾಕಿರುವ ಘಟನೆ ಆಲ್ದೂರು ಸಮೀಪದ ಹುಕ್ಕುಂದ ಗ್ರಾಮದಲ್ಲಿ ರವಿವಾರ ಬೆಳಿಗ್ಗೆ ನಡೆದಿದೆ.
ಹೆಡದಾಳು ಹುಕ್ಕುಂದ ಗ್ರಾಮದ ರೈತ ನಾರಾಯಣಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆ ದಾಖಲಾಗಿದ್ದಾರೆ.
ಒಣಗಲು ಹಾಕಿದ್ದ ಕಾಫಿ ಬೀಜದ ರಕ್ಷಣೆಗೆ ನಾರಾಯಣ ಗೌಡ ಕಣದಲ್ಲಿ ಮಲಗಿದ್ದರು. ಬೆಳಗಿನ ಜಾವ ಕಣಕ್ಕೆ ಬಂದಿದ್ದ ಆನೆ ನಾರಾಯಣ ಗೌಡ ಅವರನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿದೆ. ನಾರಾಯಣಗೌಡ ಅವರು ಪಕ್ಕದಲ್ಲಿದ್ದ ಹುಲ್ಲಿನ ಮೇಲೆ ಬಿದ್ದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.
ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ನಾರಾಯಣಗೌಡ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾಡಾನೆಗಳ ಉಪಟಳ ಜಾಸ್ತಿಯಾಗಿದ್ದು, ಇಲ್ಲಿರುವ ಕಾಡಾನೆಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Next Story





