ಚಿಕ್ಕಮಗಳೂರು | ಪ್ರಿಯಕರನೊಂದಿಗೆ ಸೇರಿ ಪತಿಯ ಹತ್ಯೆ
ಮೊದಲ ಪತ್ನಿ ಮಗನಿಂದ ದೂರು

ಸಾಂದರ್ಭಿಕ ಚಿತ್ರ (Meta AI)
ಚಿಕ್ಕಮಗಳೂರು : ಮಹಿಳೆಯೋರ್ವಳು ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ಶುಕ್ರವಾರ ವರದಿಯಾಗಿದೆ.
ಉದ್ದೇಬೋರನಹಳ್ಳಿ ಗ್ರಾಮದ ಶ್ರೀನಿವಾಸ್ (55) ಹತ್ಯೆಯಾದ ವ್ಯಕ್ತಿ. ಈತನ ಮೊದಲ ಹೆಂಡತಿಯ ಮಗ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮೃತ ಶ್ರೀನಿವಾಸ್ನ ಹೆಂಡತಿ ಮೃತಪಟ್ಟಿದ್ದು, ಸುಮಾ ಎಂಬವರೊಂದಿಗೆ ಎರಡನೇ ವಿವಾಹವಾಗಿದ್ದರು. ಮೊದಲ ಹೆಂಡತಿಗೆ ನಾಲ್ಕು ಜನ ಮಕ್ಕಳಿದ್ದು, ಎರಡನೇ ಹೆಂಡತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ನಡುವೆ ಸುಮಾ ಸಿದ್ದರಾಜು ಎಂಬಾತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರೆನ್ನಲಾಗುತ್ತಿದ್ದು, ಶ್ರೀನಿವಾಸ್ ತನ್ನ ಮೊದಲ ಹೆಂಡತಿ ಮಕ್ಕಳಿಗೆ ಆಸ್ತಿ ವಿಭಾಗ ಮಾಡಲು ಮುಂದಾಗಿದ್ದರಿಂದ ಆಸ್ತಿ ತನ್ನ ಮಕ್ಕಳ ಕೈತಪ್ಪಲಿದೆ ಎಂಬ ಕಾರಣಕ್ಕೆ ಸುಮಾ ತನ್ನ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿದ್ದಾಳೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.