"ಮುಸ್ಲಿಮರ ಬಗ್ಗೆ ಮಾತನಾಡಿಲ್ಲ": ನಿಂದನಾತ್ಮಕ, ಪ್ರಚೋದನಕಾರಿ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡ ಸಿ.ಟಿ. ರವಿ

ಸಿ.ಟಿ.ರವಿ
ಚಿಕ್ಕಮಗಳೂರು : ʼಮುಲ್ಲಾನಿಗೂ ನೀಟ್ ಪರೀಕ್ಷೆಗೂ ಏನು ಸಂಬಂಧ. ಎದೆ ಸೀಳಿದರೆ ಮೂರು ಅಕ್ಷರ ಬರಲ್ಲʼ ಎಂಬ ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, ವಿದ್ಯಾರ್ಥಿ ಹೋರಾಟದ ಹೆಸರಿನಲ್ಲಿ ಜೀಪಿನ ಪೆಟ್ರೋಲ್ ಟ್ಯಾಂಕ್ಗೆ ಬೆಂಕಿ ಹಚ್ಚಲು ಯತ್ನಿಸಿದ ವ್ಯಕ್ತಿಯ ಬಗ್ಗೆ ಮಾತನಾಡಿದ್ದೇ ಹೊರತು, ಮುಸ್ಲಿಂ ಸಮುದಾಯ ಅಥವಾ ಮುಲ್ಲಾಗಳ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಆ ವ್ಯಕ್ತಿಗೂ ನೀಟ್ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಆತ ವಿದ್ಯಾರ್ಥಿಗಳ ಪರ ಹೋರಾಟ ಮಾಡಿಲ್ಲ. ಜೀಪಿಗೆ ಬೆಂಕಿ ಹಚ್ಚಲು ಯತ್ನಿಸಿದ ವ್ಯಕ್ತಿಯ ವಿರುದ್ಧ ಮಾತನಾಡಿದ್ದೇನೆ. ಅದನ್ನು ಮುಸ್ಲಿಂ ವಿರೋಧಿ ಹೇಳಿಕೆ ಎಂದು ಬಿಂಬಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ನಾನು ನೀಟ್ ಚಳುವಳಿಯ ನೆಪದಲ್ಲಿ ಜೀಪಿಗೆ ಬೆಂಕಿ ಹಚ್ಚಲು ಯತ್ನಿಸಿದ ವ್ಯಕ್ತಿಯ ವಿರುದ್ಧ ಮಾತನಾಡಿದ್ದೇನೆ. ಆತನನ್ನು ಟೀಕಿಸಿದರೆ ಅದನ್ನು ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿ ನೋಡುವುದು ತಪ್ಪು ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಪೆಟ್ರೋಲ್ ಟ್ಯಾಂಕ್ಗೆ ಬೆಂಕಿ ಹಚ್ಚಲು ಯತ್ನಿಸಿದ ವ್ಯಕ್ತಿಯ ವಿರುದ್ಧವೇ ನನ್ನ ಹೇಳಿಕೆ ಇತ್ತು. ಮುಸ್ಲಿಮರ ವಿರುದ್ಧ ಅಥವಾ ಮುಲ್ಲಾಗಳ ವಿರುದ್ಧ ನಾನು ಮಾತನಾಡಿಲ್ಲ. ಆತನಿಗೆ ಶಿಕ್ಷಣದ ಅರಿವು ಇದ್ದಿದ್ದರೆ ಇಂತಹ ಕೃತ್ಯ ಎಸಗುತ್ತಿರಲಿಲ್ಲ. ಆತ ಭಯೋತ್ಪಾದಕ. ಆತನಿಗೂ ನೀಟ್ಗೂ ಯಾವುದೇ ಸಂಬಂಧವಿಲ್ಲ. ಅಂತಹ ಕೃತ್ಯವನ್ನು ಸಮರ್ಥಿಸುವವರೂ ಆತನ ಪರವಾಗಿಯೇ ನಿಲ್ಲುತ್ತಾರೆ ಎಂದು ಸಿ.ಟಿ. ರವಿ ಹೇಳಿದ್ದಾರೆ.






