ಚಿಕ್ಕಮಗಳೂರು ನಗರದಲ್ಲಿ ಗಾಳಿ-ಮಳೆಯ ಅಬ್ಬರ: 10ಕ್ಕೂ ಅಧಿಕ ವಿದ್ಯುತ್ ಕಂಬಗಳಿಗೆ ಹಾನಿ

ಚಿಕ್ಕಮಗಳೂರು: ನಗರದಲ್ಲಿ ಕಳೆದ ಮಧ್ಯರಾತ್ರಿ ಗುಡುಗು ಸಿಡಿಲು ಸಹಿತ ಭಾರೀ ಗಾಳಿ-ಮಳೆ ಸುರಿದಿದ್ದು, ಹಲವು ಬಡಾವಣೆಗಳಲ್ಲಿ ಬೃಹತ್ ಮರಗಳು ನೆಲಕ್ಕುರುಳಿವೆ. ಇದರಿಂದ 10ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ.
ಜಯನಗರ, ಕೋಟೆ, ಹೊಸಮನೆ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದೆ.
ನಗರದ ಚಿಕ್ಕಮಗಳೂರು ಕ್ಲಬ್ ಕಾಂಪೌಂಡ್ ಮತ್ತು ಹೊಸಮನೆ ಸರ್ಕಲ್ ಬಳಿ ರಸ್ತೆಯಲ್ಲಿ ವಿದ್ಯುತ್ ಕಂಬ ಮತ್ತು ಮರಗಳು ನೆಲಕ್ಕೆ ಉರುಳಿವೆ. ಎಲ್ಳೈಸಿ ರಸ್ತೆ, ಬೇಲೂರು ರಸ್ತೆ, ಜೂನಿಯರ್ ಕಾಲೇಜ್ ಮುಂಭಾಗದ ಕುವೆಂಪು ಉದ್ಯಾನವನದಲ್ಲಿ ಕಾರಿನ ಮೇಲೆ ಮರ ಬಿದ್ದಿದೆ. ನಲ್ಲೂರು ಗ್ರಾಮದಲ್ಲಿ ಮನೆಯೊಂದು ಸಿಡಿಲು ಬಡಿದು ಹಾನಿಗೊಳಗಾಗಿದೆ.
ನಗರದ ನಲ್ಲೂರು ರಸ್ತೆಯಲ್ಲಿರುವ ಕಾಫಿ ಬೆಳೆಗಾರ ಸುರೇಂದ್ರ ಎಂಬವರ ಮನೆಗೆ ಸಿಡಿದು ಬಡಿದು ಮನೆಯ ಹಂಚುಗಳೆಲ್ಲ ಪುಡಿಯಾಗಿವೆ. ಘಟನೆಯಿಂದ ಮನೆಮಂದಿಗೆ ಯಾವುದೇ ತೊಂದರೆ ಆಗಿಲ್ಲ.
ಮೆಸ್ಕಾಂ, ನಗರಸಭೆ ಅಧಿಕಾರಿಗಳು, ಅರಣ್ಯ ಇಲಾಖೆಯ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.






