ಮೂರು ದಶಕದ ಬಳಿಕ ಗುರು-ಶಿಷ್ಯರ ಸಂಗಮ ಶ್ಲಾಘನೀಯ: ತಿಪ್ಪೇಸ್ವಾಮಿ

ಕಡೂರು: ಮೂವತ್ತು ವರ್ಷದ ಸುದೀರ್ಘ ಪ್ರಯಣದ ನಂತರ ‘ಗುರು ವಂದನೆ ಮತ್ತು ಸ್ನೇಹ ಸಮ್ಮಿಲನ’ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದು ನಿವೃತ್ತ ಕನ್ನಡ ಉಪನ್ಯಾಸಕ ಎಂ.ಬಿ.ತಿಪ್ಪೇಸ್ವಾಮಿ ಶ್ಲಾಘಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಚೌಳಹಿರಿಯೂರಿನಲ್ಲಿ 1995- 96ನೇ ಸಾಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಚೌಳಹಿರಿಯೂರಿನ ಬಯಲು ರಂಗ ಮಂದಿರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ‘ಗುರು ವಂದನೆ ಮತ್ತು ಸ್ನೇಹ ಸಮ್ಮಿಲನ’ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬದುಕಿನ ಕಾಲಘಟ್ಟದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಲೌಕಿಕ ಸುಖದಲ್ಲಿ ತೊಡಗಿಕೊಂಡು, ಜ್ಞಾನದ ಹಿಂದೆ ಯಾರೂ ಓಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹಿಂದಿರುಗಿ ನೋಡಿ ಮುಂದಕ್ಕೆ ನಡೆಯುವುದಕ್ಕೆ ನಮ್ಮೆಲ್ಲರಿಗೂ ಸಿಕ್ಕಂತಹ ಸುವರ್ಣ ಅವಕಾಶ ಇದಾಗಿದೆ. ಎಚ್ಚರ ತಪ್ಪಿದ ಮನಸ್ಸುಗಳನ್ನು ಜಾಗೃತಗೊಳಿಸಿ ಸನ್ಮಾರ್ಗ ತೋರಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ವೇದಿಕೆಯಲ್ಲಿರುವ ಎಲ್ಲ ಶಿಕ್ಷಕರೂ ನಿಮಗೆ ಸನ್ಮಾರ್ಗವನ್ನು ತೋರಿಸಿದ್ದೇವೆ ಎಂಬ ಕಾರಣಕ್ಕಾಗಿ ನಮ್ಮನ್ನೆಲ್ಲಾ ಆಹ್ವಾನಿಸಿ ಸನ್ಮಾನಿಸಿದ್ದೀರಿ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಇತಿಹಾಸ ಉಪನ್ಯಾಸಕ ಬಿ.ಡಿ.ಬಸವರಾಜು ಮಾತನಾಡಿ, ಚೌಳಹಿರಿಯೂರು ನನಗೆ ಹಾಲುಂಡ ತವರಾಗಿದೆ. ಈ ಕಾಲೇಜಿನಲ್ಲಿ 14 ವರ್ಷ ಸೇವೆ ಸಲ್ಲಿಸಿದ್ದೇನೆ. 30 ವರ್ಷಗಳ ನಂತರ ಶಿಷ್ಯವರ್ಗವನ್ನು ನೋಡಿ ಬಹಳ ಖುಷಿಯಾಯಿತು ಎಂದು ಸಂತಸ ವ್ಯಕ್ತಪಡಿಸಿದರು.
ನಿವೃತ್ತ ಉಪನ್ಯಾಸಕರಾದ ಎಚ್.ಮಹೇಶ್, ಉಮಾ ಮಹೇಶ್, ನಾಗರಾಜ್, ರವೀಶ್ ಮತ್ತಿತರರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾಲೇಜಿನ ಹಾಲಿ ಪ್ರಾಂಶುಪಾಲ ಸುರೇಶ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ರೈತರಾದ ಸಿದ್ದಲಿಂಗಸ್ವಾಮಿ, ಮಲ್ಲಿಕಾರ್ಜುನ, ಪತ್ರಕರ್ತ ಸಿದ್ದು ಚಿಕ್ಕಬಳ್ಳೇಕೆರೆ, ನಿವೃತ್ತ ಯೋಧ ಉಮೇಶ್, ಪೊಲೀಸ್ ಇಲಾಖೆಯ ಸುರೇಶ್, ವಕೀಲ ಮಂಜುನಾಥ್, ಶಿಕ್ಷಕರಾದ ಶಿವಕುಮಾರ್, ಬಸವರಾಜ್, ಇಂಜನಿಯರ್ ಚೇತನ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಶ್ರೀಶೈಲ ಶೆಟ್ಟಿ, ಶಿವಣ್ಣ, ಪ್ರತಾಪ್ ಮತ್ತಿತರರು ಪಾಲ್ಗೊಂಡಿದ್ದರು.






