Chikkamagaluru | ಭೂ ಭೌತಿಕ ಸಮೀಕ್ಷೆ ಉದ್ದೇಶದಿಂದ ಲಘು ವಿಮಾನ ಹಾರಾಟ; ಆತಂಕಕ್ಕೆ ತೆರೆ

ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಮತ್ತು ಕಳಸ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಲಘು ವಿಮಾನವೊಂದು ತಳಮಟ್ಟದಲ್ಲಿ ಹಾರಾಟ ನಡೆಸಿ ಇಲ್ಲಿನ ಜನತೆಯ ಆತಂಕಕ್ಕೆ ಕಾರಣವಾಗಿತ್ತು, ಈ ಲಘು ವಿಮಾನ ಭೂ ಭೌತಿಕ ಸಮೀಕ್ಷೆ ಉದ್ದೇಶದಿಂದ ಹಾರಾಟ ನಡೆಸಿದೆ ಎಂಬುದು ಲಭ್ಯ ಮೂಲಗಳಿಂದ ತಿಳಿದು ಬಂದಿದ್ದು, ಇಲ್ಲಿನ ಜನರು ನಿರಾಳರಾಗಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಲಘು ವಿಮಾನವೊಂದು ಎರೆಡೆರೆಡು ಬಾರಿ ತಳಮಟ್ಟದಲ್ಲಿ ಹಾರಾಟ ನಡೆಸಿ ಸಂಚಲನ ಮೂಡಿಸಿತ್ತು. ಯಾವ ಉದ್ದೇಶಕ್ಕಾಗಿ ಲಘು ವಿಮಾನ ಹಾರಾಟ ನಡೆಸುತ್ತಿದೆ. ವಿಮಾನದಲ್ಲಿ ಯಾರಿದ್ದಾರೆ. ಎಲ್ಲಿಂದ ವಿಮಾನ ಬಂದಿತ್ತು ಎಂಬ ಹಲವು ಪ್ರಶ್ನೆಗಳು ಇಲ್ಲಿನ ಜನರಲ್ಲಿ ಮೂಡಿತ್ತು. ಈ ವಿಮಾನ ಹಾರಾಟದ ಬಗ್ಗೆ ಅರಣ್ಯ, ಪೊಲೀಸ್ ಇಲಾಖೆಗೂ ಯಾವುದೇ ಮಾಹಿತಿ ಇರಲಿಲ್ಲ. ಸದ್ಯ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆತ್ತಿದ್ದು, ಭೂ ಗರ್ಭದ ಸಮೀಕ್ಷೆ ಉದ್ದೇಶದಿಂದ ಲಘು ವಿಮಾನ ಪಶ್ಚಿಮಘಟ್ಟ ಪ್ರದೇಶದಲ್ಲಿ ಹಾರಾಟ ನಡೆಸಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.
ಬಾಳೆಹೊನ್ನೂರು ಮತ್ತು ಕಳಸ ತಾಲೂಕು ಭಾಗದಲ್ಲಿ ಈ ವಿಮಾನ ಹಾರಾಟ ಸಂಚಲನ ಮೂಡಿಸಿದ್ದು, ಇದು ಸೆಸ್ನಾ 208 ಗ್ರ್ಯಾಂಡ್ ಕಾರವಾನ್ ವಿಮಾನವಾಗಿದ್ದು, ಈ ಪ್ರದೇಶದಲ್ಲಿ ವೈಜ್ಞಾನಿಕ ಉದ್ದೇಶಕ್ಕಾಗಿ ಕಾರ್ಯ ನಿರ್ವಹಿಸಿದೆ, ವಿಶೇಷವಾಗಿ ಭೂ ಭೌತಿಕ ಸಮೀಕ್ಷೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಭೂಮಿಯ ಅಡಿಭಾಗವನ್ನು ಗಾಳಿಯಿಂದ ಮ್ಯಾಪಿಂಗ್ ಮಾಡುವ ಕಂಪೆನಿ ಇದನ್ನು ನಿರ್ವಹಣೆ ಮಾಡಲಾಗುತ್ತಿದ್ದು, ವಿಮಾನದ ಹಿಂಭಾಗದಲ್ಲಿ ಉದ್ದವಾದ ಸೂಜಿತರಹ ಕಾಣುವ ಸಾಧನ ಇದೆ. ಇದನ್ನು ಮ್ಯಾಗ್ನೆಟೋಮೀಟರ್ ಸ್ಟಿಂಗರ್ ಎಂದು ಕರೆಯಲಾಗುತ್ತದೆ. ಇದು ಭೂಮಿಯ ಚುಂಬಕ ವ್ಯತ್ಯಾಸಗಳನ್ನು ಅಳೆಯಲು ಬಳಸಲಾಗುತ್ತದೆ ಎಂದು ಹೇಳ ಲಾಗುತ್ತದೆ.
ಈ ಲಘು ವಿಮಾನವೂ ಮಂಗಳೂರು(ಐಎಕ್ಸ್ಇ) ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿ ಚಿಕ್ಕಮಗಳೂರು ಹಾಗೂ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದೆ ಎನ್ನಲಾಗುತ್ತಿದೆ. ಈ ವಿಮಾನವು ಕಡಿಮೆ ಎತ್ತರದಲ್ಲಿ ಹಾರಾಡುವಂತಹ ವಿಮಾನವಾಗಿದ್ದು, ಜಿಗ್ ಜಾಗ್ ಅಥವಾ ಜಾಲರಿಯ ರೀತಿಯಲ್ಲಿ ಹಾರಾಟ ನಡೆಸುತ್ತದೆ. ಒಂದೇ ಪ್ರದೇಶದ ಮೇಲೆ ಮತ್ತೆ ಮತ್ತೆ ಹಾರಾಟ ನಡೆಸುತ್ತದೆ ಎಂದು ತಿಳಿದು ಬಂದಿದೆ.
ಈ ಲಘು ವಿಮಾನವೂ ಖನಿಜ ಸಂಪತ್ತು, ಭೂಗರ್ಭ ರಚನೆ, ಭೂಗರ್ಭ ಜಲ ಸಂಪನ್ಮೂಲ, ಚುಂಬಕ ಕ್ಷೇತ್ರದ ಬದಲಾವಣೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತದೆ. ಈ ಹಿನ್ನೆಲೆಯಲ್ಲಿ ಲಘು ವಿಮಾನ ಹಾರಾಟ ನಡೆಸಿದೆ ಎಂಬುದು ಲಭ್ಯ ಮೂಲಗಳಿಂದ ತಿಳಿದು ಬಂದಿದೆ. ಒಟ್ಟಾರೆ ಕಳೆದ ಮೂರು ದಿನಗಳ ಹಿಂದೆ ತಳ ಮಟ್ಟದಲ್ಲಿ ಹಾರಾಟ ನಡೆಸಿ ಜನರ ಆತಂಕಕ್ಕೆ ಕಾರಣವಾಗಿದ್ದ ವಿಮಾನವೂ ಭೂ ಭೌತಿಕ ಸಮೀಕ್ಷೆಗೆ ಹಾರಾಟ ನಡೆಸಿದ್ದೆಂದು ತಿಳಿದು, ಈ ವಿಚಾರ ಇಲ್ಲಿನ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.






