ʼಗೃಹಜ್ಯೋತಿʼ ಅನರ್ಹ ಫಲಾನುಭವಿಗಳಿಗೆ ಕಡಿವಾಣ ಹಾಕಲು ದಾಖಲೆ ಕೇಳುತ್ತಿದ್ದೇವೆ : ಸಚಿವ ಕೆ.ಜೆ.ಜಾರ್ಜ್

ಚಿಕ್ಕಮಗಳೂರು : ಗೃಹಜ್ಯೋತಿ ಯೋಜನೆಯಡಿಯಲ್ಲಿ ಅನರ್ಹ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಾಖಲೆಗಳನ್ನು ಕೇಳಲಾಗಿದೆ. ದಾಖಲೆಗಳನ್ನು ಕೇಳುವುದರಲ್ಲಿ ಏನು ತಪ್ಪು? ಎಂದು ಇಂಧನ ಹಾಗೂ ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಪ್ರಶ್ನಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 1.64 ಕೋಟಿ ಕುಟುಂಬಸ್ಥರಿಗೆ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು ಇದ್ದಾರೆ. ಇದರಲ್ಲಿ ಅರ್ಹರು ಯಾರಿದ್ದಾರೋ ಅವರಿಗೆ ಉಚಿತ ವಿದ್ಯುತ್ ನೀಡುತ್ತೇವೆ. ಗೃಹಜ್ಯೋತಿ ಯೋಜನೆಯಡಿ ಕೆಲವೊಂದು ದೂರುಗಳು ಬಂದಿವೆ. ಅನರ್ಹರು ಕೂಡ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಒಂದು ಮನೆಯಲ್ಲಿ ಎರಡು ಮೂರು ಮೀಟರ್ ಇದೆ. ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ವಾಣಿಜ್ಯ ಚಟುವಟಿಕೆ ಸಂಬಂಧಿಸಿದವರು ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಈ ಸಂಬಂಧ ಮಾಹಿತಿ ಕೇಳುತ್ತಿದ್ದೇವೆ ಎಂದು ಹೇಳಿದರು.
ಜಾತಿ ಪ್ರಮಾಣಪತ್ರ ಕೇಳಿದ್ದು, ಜಾತಿ ಪ್ರಮಾಣಪತ್ರ ಕೊಟ್ಟರೇ ತಪ್ಪೇನು ಎಂದು ಪ್ರಶ್ನಿಸಿದ ಅವರು, ಜಾತಿಗಣತಿಗೆ ಮಾಹಿತಿ ಕೊಟ್ಟಿದೀರಾ, ಅದನ್ನೇ ಕೇಳಿದ್ದೇವೆ. ಜಾತಿಯನ್ನು ಆಧಾರವಾಗಿ ನಾವೇನು ಉಚಿತ ಕರೆಂಟ್ ನೀಡುತ್ತಿಲ್ಲ. ಅರ್ಹ ಎಲ್ಲಾ ಜಾತಿಯವರಿಗೂ ನೀಡುತ್ತಿದ್ದೇವೆ ಸಮಜಾಯಿಸಿ ನೀಡಿದರು.
ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದೆ ಎಂದು ಇಷ್ಟುಬೇಗ ನಾವೂ ತೀರ್ಮಾನಕ್ಕೆ ಬರುವುದಿಲ್ಲ, ಮುಂದೇ ಮಳೆ ಕಡಿಮೆಯಾದರೇ, ಏನು ಮಾಡಬೇಕೆಂದು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಆಗಸ್ಟ್ ವರೆಗೂ ಕಾದು ನೋಡುತ್ತೇವೆ. ಆ ನಂತರ ತೀರ್ಮಾನಕ್ಕೆ ಬರುತ್ತೇವೆ. ಕಳೆದ ವರ್ಷ ಮುಂಗಾರು ಮಳೆ ಬೇಗ ಬಂದಿದೆ. ಈ ವರ್ಷ ತಡವಾಗಿದೆ. ಆದ್ದರಿಂದ ಜನರು ಗಾಬರಿಯಾಗಿದ್ದಾರೆ ಅಷ್ಟೇ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗುತ್ತಿಗೆದಾರರಿಗೆ ಗುತ್ತಿಗೆ ಕಾಮಗಾರಿಗಳನ್ನು ನೀಡುವಂತೆ ಮೆಸ್ಕಾಂ ಎಂ.ಡಿ.ಯವರಿಗೆ ಸೂಚನೆ ನೀಡಿದ್ದೇನೆ. ಪ್ರವಾಸೋದ್ಯಮ ಅಭಿವೃದ್ಧಿಯ ನಿಟ್ಟಿನಲ್ಲಿ ಕರಾವಳಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಮಡಿಕೇರಿ ಪ್ರವಾಸೋದ್ಯಮ ಅಭಿವೃದ್ದಿ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ನ ಐದು ಜನ ಶಾಸಕರಿದ್ದಾರೆ. ಹಾಗಾಗಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಯವರಿಗೆ ಸಚಿವ ಸ್ಥಾನ ನೀಡಬೇಕೆಂದು ಯಾವಾಗಲೂ ಹೇಳುತ್ತಿದ್ದೇನೆ. ಕಳೆದ ಬಾರಿಯೂ ಹೇಳಿದ್ದೇನೆ. ಇಲ್ಲಿಯವರನ್ನು ಮಂತ್ರಿ ಮಾಡಿದರೇ ಜಿಲ್ಲೆಯ ಅಭಿವೃದ್ಧಿ ಕೆಲಸಗಳನ್ನು ಸುಲಭವಾಗಿಸಲು ಸಹಕಾರಿಯಾಗಲಿದೆ.
- ಕೆ.ಜೆ.ಜಾರ್ಜ್, ಸಚಿವ






