ಮೂಡಿಗೆರೆ | ಮೈಮೇಲೆ ಮರ ಬಿದ್ದು ಟಿಂಬರ್ ಕಾರ್ಮಿಕ ಮೃತ್ಯು

ಸಾಂದರ್ಭಿಕ ಚಿತ್ರ | PC : freepik
ಚಿಕ್ಕಮಗಳೂರು, ಆ.14 : ಮರ ತುಂಡರಿಸುವ ಸಂದರ್ಭದಲ್ಲಿ ಕಾರ್ಮಿಕನ ಮೈ ಮೇಲೆ ಮರಬಿದ್ದು ಸ್ಥಳದಲ್ಲೇ ವ್ಯಕ್ತಿ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ವರದಿಯಾಗಿದೆ.
ಮರ ಕಟಾವು ಮಾಡುತ್ತಿದ್ದ ವೇಳೆ ಘಟನೆ ಸಂಭವಿಸಿದ್ದು, ಮೃತ ವ್ಯಕ್ತಿಯನ್ನು ಮೂಡಿಗೆರೆ ತಾಲೂಕಿನ ಕೃಷ್ಣಾಪುರ ಗ್ರಾಮದ ನಿವಾಸಿ ಪ್ರಕಾಶ್(45) ಎಂದು ತಿಳಿದು ಬಂದಿದೆ.
ಪ್ರಕಾಶ್ ಟಿಂಬರ್ ಕೆಲಸಕ್ಕೆಂದು ಇತರ ಕಾರ್ಮಿಕರೊಂದಿಗೆ ಗೋಣಿಬೀಡು ಸಮೀಪದ ಕಾಫಿ ತೋಟವೊಂದರಲ್ಲಿ ಕೆಲಸಕ್ಕೆ ಹೋಗಿದ್ದು, ಭಾರೀ ಎತ್ತರದ ಮರ ಕಟಾವು ಮಾಡುತ್ತಿದ್ದ ವೇಳೆ ಕಾರ್ಮಿಕರಿದ್ದ ಕಡೆ ಕಟಾವು ಮಾಡಿದ ಮರ ಉರುಳಿದೆ. ಮರ ಬೀಳುವುದನ್ನು ಕಂಡ ಇತರ ಕಾರ್ಮಿಕರು ಕೂಡಲೇ ಸ್ಥಳದಿಂದ ಓಡಿ ಹೋಗಿದ್ದಾರೆ.
ಅವರೊಂದಿಗಿದ್ದ ಪ್ರಕಾಶ್ ಓಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿದ್ದು, ಈ ವೇಳೆ ತುಂಡಾದ ಮರ ಪ್ರಕಾಶ್ ಮೇಲೆಯೇ ಬಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಘಟನೆ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





