ಕಳಸ | ನದಿಯಲ್ಲಿ ಕೊಚ್ಚಿಹೋಗಿದ್ದ ಪಿಕಪ್ ವಾಹನ ಪತ್ತೆ

ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಪಿಕಪ್ ವಾಹನದೊಂದಿಗೆ ಚಾಲಕ ಕೊಚ್ಚಿ ಹೋಗಿರುವ ಘಟನೆ ಸಂಬಂಧ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಸುರಿಯುತ್ತಿರುವ ಮಳೆಯ ನಡುವೆಯೂ ಗುರುವಾರ ಹಾಗೂ ಶುಕ್ರವಾರ ಶೋಧ ಕಾರ್ಯಾಚರಣೆ ನಡೆಸಿದ್ದು, ಶುಕ್ರವಾರ ಸಂಜೆ ಭದ್ರಾ ನದಿಯಲ್ಲಿ ಪಿಕಪ್ ವಾಹನ ಪತ್ತೆಯಾಗಿದೆ.
ಕ್ರೇನ್ನ ಸಹಾಯದಿಂದ ವಾಹನವನ್ನು ಮೇಲೆತ್ತಲಾಗಿದ್ದು, ವಾಹನದಲ್ಲಿ ಚಾಲಕ ಶಮಂತ್ನ ಮೃತ ದೇಹ ಇರಲಿಲ್ಲ. ನದಿಯ ನೀರಿನ ರಭಸದಿಂದಾಗಿ ಶಮಂತ್ ಕೊಚ್ಚಿ ಹೋಗಿರುವ ಸಾಧ್ಯತೆ ಇದ್ದು, ಶಮಂತ್ ಶವಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಏನಿದು ಘಟನೆ :
ಚಾಲಕನ ನಿಯಂತ್ರಣ ತಪ್ಪಿದ ವಾಹನವೊಂದು ಭದ್ರಾ ನದಿಗೆ ಉರುಳಿ ನದಿಯಲ್ಲಿ ಕೊಚ್ಚಿಹೋಗಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಹೊಸೂರು-ಕೊಳಮಗೆ ಗ್ರಾಮಗಳ ಮಧ್ಯೆ ನಿನ್ನೆ ನಡೆದಿತ್ತು.
ಕಳಸ-ಕಳಕೋಡು ಸಂಪರ್ಕ ರಸ್ತೆಯ ಮಧ್ಯೆ ಸಿಗುವ ಹೊಸೂರು-ಕೊಳಮಗೆ ಬಳಿ ವಾಹನವೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿರುವ ಕುರುಹು ಪತ್ತೆಯಾಗಿತ್ತು. ನಂತರ ಆ ವಾಹನ ಭದ್ರಾ ನದಿಯತ್ತ ಹೋಗಿರುವುದಕ್ಕೆ ನದಿಯ ಅಂಚಿನಲ್ಲಿ ಟೈರ್ನ ಗುರುತೂ ಕಂಡು ಬಂದಿತ್ತು.
ಈ ಹಿನ್ನೆಲೆಯಲ್ಲಿ ವಾಹನದೊಂದಿಗೆ ಚಾಲಕನೂ ಭದ್ರಾ ನದಿಯಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿತ್ತು. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.







