ಎನ್.ಆರ್. ಪುರ : ಮೋರಿಯ ಕಟ್ಟೆಗೆ ಕಾರು ಢಿಕ್ಕಿ: ವ್ಯಕ್ತಿ ಮೃತ್ಯು

ಎನ್.ಆರ್.ಪುರ, ಜೂ.5: ಮಗಳಿಗೆ ವರ ನೋಡಲು ಹಾಸನ ಜಿಲ್ಲೆಯ ಬೇಲೂರಿಗೆ ತೆರಳುತ್ತಿದ್ದ ಕುಟುಂಬವೊಂದು ಸಂಚರಿಸುತ್ತಿದ್ದ ಕಾರು ಮೋರಿಯ ಕಟ್ಟೆಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಗಡಿಗೇಶ್ವರ ಗ್ರಾಮದ ಸಮೀಪ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಮೃತರನ್ನು ಶಿವಮೊಗ್ಗ ಜಿಲ್ಲೆಯ ಹೊಸಕೊಪ್ಪ ಗ್ರಾಮದ ಜಗದೀಶ್ ಹೆಚ್.ಕೆ. (50) ಎಂದು ಗುರುತಿಸಲಾಗಿದೆ.
ಜಗದೀಶ್ ಅವರು ತಮ್ಮ ಅಣ್ಣ ಶಿವಮೂರ್ತಿ, ಅತ್ತಿಗೆ ಕಲಾವತಿ ಹಾಗೂ ಅಣ್ಣನ ಮಗ ಕಿರಣ್ ಅವರೊಂದಿಗೆ ಕಾರಿನಲ್ಲಿ ಬೇಲೂರಿಗೆ ತೆರಳುತ್ತಿದ್ದರು. ನರಸಿಂಹರಾಜಪುರ-ಬಾಳೆಹೊನ್ನೂರು ರಸ್ತೆಯಲ್ಲಿ ಬೆಳಿಗ್ಗೆ ಸುಮಾರು 7.50ರ ವೇಳೆಗೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಯ ಕಟ್ಟೆಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಅಪಘಾತದ ಪರಿಣಾಮ ಜಗದೀಶ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಸಾರ್ವಜನಿಕರು ಗಾಯಾಳುಗಳನ್ನು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಶಿವಮೂರ್ತಿ ಹಾಗೂ ಕಲಾವತಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಾಲಕ ಕಿರಣ್ ಕಾರನ್ನು ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಮೃತರ ಮಗ ಆದರ್ಶ ತಂದೆಯ ಸಾವಿಗೆ ಕಾರಣನಾದ ಕಾರು ಚಾಲಕ ಕಿರಣ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.






