ಮೂಡಿಗೆರೆ | ತಂದೆಯಿಂದಲೇ ಮಗನ ಕೊಲೆ

ಚಿಕ್ಕಮಗಳೂರು: ತಂದೆಯೇ ಮಗನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದ ಘಟನೆ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ನಡೆದಿದೆ.
ಪ್ರದೀಪ್ ಆಚಾರ್ (29) ಕೊಲೆಯಾದವರು. ಮೃತರ ತಂದೆ ರಮೇಶ್ ಆಚಾರ್ ಕೊಲೆ ಆರೋಪಿಯಾಗಿದ್ದಾನೆ.
ಮದ್ಯಪಾನಿಗಳಾಗಿದ್ದ ತಂದೆ-ಮಗ ಕ್ಷುಲಕ ಕಾರಣಕ್ಕೆ ಆಗಾಗ್ಗೆ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರೆನ್ನಲಾಗಿದೆ. ಇದೇ ಕಾರಣಕ್ಕೆ ಬೇಸತ್ತು ಪ್ರದೀಪ್ ತಾಯಿ ತವರು ಮನೆಗೆ ತೆರಳಿದ್ದರು. ನಂತರ ಮನೆಯಲ್ಲಿ ತಂದೆ–ಮಗ ಇಬ್ಬರೇ ವಾಸವಿದ್ದರು ಎನ್ನಲಾಗಿದೆ.
ಶನಿವಾರ ರಾತ್ರಿ ಅಪ್ಪ-ಮಗನ ಮಧ್ಯೆ ಜಗಳ ನಡೆದಿದ್ದು, ಮದ್ಯದ ಅಮಲಿನಲ್ಲಿದ್ದ ರಮೇಶ್ ಆಚಾರ್ ತನ್ನ ಮಗ ಪ್ರದೀಪ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಪ್ರದೀಪ್ ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ ವಿಷಯ ಅರಿತ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಬಾಳೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
Next Story





