ಮೂಡಿಗೆರೆ ಭಾಗದಲ್ಲಿ ಮತ್ತೆ ಕಾಡಾನೆಗಳ ಹಾವಳಿ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಬೀಟಮ್ಮ, ಭುವನೇಶ್ವರಿ ತಂಡದ 15ಕ್ಕೂ ಹೆಚ್ಚು ಕಾಡಾನೆಗಳು ಅರಣ್ಯ ಇಲಾಖೆಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿವೆ. ಕಾಡಾನೆಗಳನ್ನು ಸ್ಥಳಾಂತರ ಮಾಡುವಂತೆ ಇಲ್ಲಿನ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಮಲೆನಾಡು ಭಾಗದಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಈ ಹಿಂದೆ ಕಾಡಾನೆಗಳ ದಾಳಿಗೆ ಸಿಲುಕಿ ಅಮಾಯಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಮತ್ತೊಂದರು ಕಡೆ ಅಪಾರ ಪ್ರಮಾಣದ ಬೆಳೆನಷ್ಟವೂ ಕಾಡಾನೆಯಿಂದ ಸಂಭವಿಸಿದ್ದು ರೈತರು ಮತ್ತು ಬೆಳೆಗಾರರು ಕಾಡಾನೆಗಳ ಉಪಟಳಕ್ಕೆ ಬೇಸತ್ತು ಹೋಗಿದ್ದಾರೆ.
ಮೂಡಿಗೆರೆ ತಾಲೂಕಿನ ಮುಡುಸಸಿ, ಕನ್ನಾಪುರ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಬೀಟಮ್ಮ ಮತ್ತು ಭುವನೇಶ್ವರಿ ತಂಡದ 15ಕ್ಕೂ ಕಾಡಾನೆಗಳು ಬೀಡು ಬಿಟ್ಟಿದು ಇಲ್ಲಿನ ನಿವಾಸಿಗಳು ಆತಂಕದಲ್ಲಿದ್ದಾರೆ. ಕಾಡಾನೆಗಳ ಹಾವಳಿಯಿಂದ ರೈತರು ಹೊಲಗದ್ದೆಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕಳೆದೊಂದು ತಿಂಗಳಿಂದ ಮಲೆನಾಡು ಭಾಗದಲ್ಲಿ 30ಕ್ಕೂ ಹೆಚ್ಚು ಆನೆಗಳು ಬೀಡು ಬಿಟ್ಟಿದೆ.
ನಿರಂತರ ಕಾಡಾನೆಗಳ ಹಾವಳಿಯಿಂದ ಬೇಸತ್ತಿರುವ ಇಲ್ಲಿನ ರೈತರು ಮತ್ತು ಬೆಳೆಗಾರರು, ಕಾಡಾನೆಗಳನ್ನು ಮೂಲಸ್ಥಳಕ್ಕೆ ಕಳಿಸಬೇಕು. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಒದಗಿಸಬೇಕು. ಕಾಡಾನೆ ಹಾವಳಿಯಿಂದ ನಷ್ಟಕ್ಕೊಳಗಾಗಿರು ರೈತರು ಮತ್ತು ಬೆಳೆಗಾರರಿಗೆ ಸಮರ್ಪಕ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.