ಮಹಾಭಾರತ ಧಾರಾವಾಹಿಯ ಕರ್ಣನ ಪಾತ್ರಧಾರಿ, ನಟ ಪಂಕಜ್ ಧೀರ್ ನಿಧನ

ನಟ ಪಂಕಜ್ ಧೀರ್ (Photo: PTI)
ಹೊಸದಿಲ್ಲಿ : 'ಮಹಾಭಾರತ' ಧಾರಾವಾಹಿಯಲ್ಲಿ ಕರ್ಣನ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ನಟ ಪಂಕಜ್ ಧೀರ್ ಬುಧವಾರ ನಿಧನರಾದರು.
ಮೂಲಗಳ ಪ್ರಕಾರ, ಕ್ಯಾನ್ಸರ್ನಿಂದ ಬಳಲುತ್ತಿದ್ದ ಪಂಕಜ್ ಧೀರ್, ಕೆಲವು ತಿಂಗಳಿನಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇತ್ತೀಚೆಗಷ್ಟೆ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಕೂಡ ಒಳಗಾಗಿದ್ದರು. ಆದರೆ ಬುಧವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಪಂಕಜ್ ಧೀರ್ ಪಂಜಾಬ್ ಮೂಲದವರು. 1980ರ ದಶಕದಲ್ಲಿ ನಟನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು ಹಲವು ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಪಂಕಜ್ ಧೀರ್ ಅವರು ಬಿಆರ್ ಚೋಪ್ರಾ ನಿರ್ದೇಶನದ ‘ಮಹಾಭಾರತ’ ಧಾರಾವಾಹಿಯಲ್ಲಿ ಕರ್ಣನ ಪಾತ್ರದಲ್ಲಿ ನಟಿಸಿದ್ದರು. ಆ ಪಾತ್ರ ಅವರಿಗೆ ಭಾರಿ ಜನಪ್ರಿಯತೆ ತಂದಿತ್ತು. ಇದಾದ ಬಳಿಕ ‘ಚಂದ್ರಕಾಂತ’ ಧಾರಾವಾಹಿಯಲ್ಲಿಯೂ ನಟಿಸಿದ್ದರು.
ಕನ್ನಡದಲ್ಲಿ ವಿಷ್ಣು ವಿಜಯ, ವಿಷ್ಣು ಸೇನಾ ಚಿತ್ರದಲ್ಲಿ ವಿಷ್ಣುವರ್ಧನ್ ಜೊತೆ ಪಂಕಜ್ ಧೀರ್ ನಟಿಸಿದ್ದರು.





