ಎಲ್ಲ ಕಹಿಯನ್ನು ಮರೆಯೋಣ ಬಾ..!

ಚಿತ್ರ: ಟಾಕ್ಸಿಕ್
ನಿರ್ದೇಶನ: ಗೀತು ಮೋಹನ್ ದಾಸ್
ನಿರ್ಮಾಣ: ಕೆ.ವಿ.ಎನ್. ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್
ತಾರಾಗಣ: ಯಶ್, ಕಿಯಾರಾ, ನಯನ್ ತಾರಾ ಮೊದಲಾದವರು.
1947ರ ಕಾಲಘಟ್ಟದ ಕಥೆಯೊಂದಿಗೆ ಚಿತ್ರ ಆರಂಭವಾಗುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿರುತ್ತದೆ. ಆದರೆ ಗೋವಾದಲ್ಲಿ ಮಾತ್ರ ಪೋರ್ಚುಗೀಸರ ನೇತೃತ್ವದಲ್ಲಿ ಕಾಳದಂಧೆ ನಡೆಯುತ್ತಿರುತ್ತದೆ. ಆ ಸಂದರ್ಭದಲ್ಲಿ ಸಂಬಂಧ, ಸಂಪತ್ತನ್ನು ಕಳೆದುಕೊಂಡು ಗುಲಾಮರಂತೆ ಬೆಳೆದ ಅಕ್ಕ, ತಮ್ಮನ ಕಥೆ ಇದು.
ಗಂಗ ಮತ್ತು ರಾಯ ಎನ್ನುವ ಅಕ್ಕ, ತಮ್ಮನ ಕಥೆಯಂತೆ ಶುರುವಾಗುವ ಚಿತ್ರದಲ್ಲಿ ಗಂಗಳಿಗೊಂದು ಮಹತ್ವಾಕಾಂಕ್ಷೆಯಿದೆ. ಚಿನ್ನ ತರಲು ಹೇಳುವ ‘ಕೆ.ಜಿ.ಎಫ್.’ನ ತಾಯಿಯಂತೆ, ಇಡೀ ಗೋವಾವನ್ನೇ ತನ್ನ ತಮ್ಮ ಆಳಬೇಕು ಎಂದು ಹೇಳುತ್ತಾಳೆ ಗಂಗ. ಈ ಕನಸನ್ನು ಈಡೇರಿಸುವಲ್ಲಿ ರಾಯ ತುಳಿಯುವ ಹಾದಿಯೇನು? ಕೊನೆಗೆ ಪಡೆಯುವ ಸ್ಥಿತಿ ಏನು ಎನ್ನುವುದೇ ಚಿತ್ರದ ಕಥೆ.
ರಾಯನಾಗಿ ಯಶ್ ಸ್ಟೈಲಿಷ್ ಸ್ಟಾರ್. ದ್ವಿತೀಯಾರ್ಧದಲ್ಲಿ ಈ ಅಂದಕ್ಕೆ ವಯಸ್ಸಾದಾಗಿನ ಅಭಿನಯ ಕೂಡ ಅದ್ಭುತ. ಟಿಕೆಟ್ ಎನ್ನುವ ಮಗನಾಗಿ ದ್ವಿಪಾತ್ರವಾಗುವಲ್ಲಿ ಹಾಕಿರುವ ಪರಿಶ್ರಮ ಕೂಡ ಗಮನಾರ್ಹ. ನಾಯಕಿಯರ ವಿಚಾರಕ್ಕೆ ಬಂದರೆ ಗಂಗ ಎನ್ನುವ ಅಕ್ಕನ ಪಾತ್ರದಲ್ಲಿ ನಯನ್ ತಾರಾ ಮತ್ತು ನಾಡಿಯ ಎನ್ನುವ ಪ್ರೇಯಸಿಯಾಗಿ ಕಿಯಾರಾ ತಮ್ಮ ಪಾತ್ರದ ಗಟ್ಟಿತನದಿಂದ ನೆನಪಲ್ಲಿ ಉಳಿಯುತ್ತಾರೆ. ‘ತಬಾಹಿ’ ಹಾಡು ಈಗಾಗಲೇ ಜನಪ್ರಿಯವಾಗಿದೆ. ಉಳಿದಂತೆ ಯಾವುದು ಕೂಡ ಮನಮುಟ್ಟುವುದು ಕಷ್ಟ.
ತಾಂತ್ರಿಕವಾಗಿ ಚಿತ್ರದ ದೃಶ್ಯವೈಭವವನ್ನು ಮೆಚ್ಚಲೇಬೇಕು. ಹಳೆಯ ಕಾಲವನ್ನು ಕೂಡ ಕಲರ್ಫುಲ್ ಆಗಿಸುವಲ್ಲಿ ವಸ್ತ್ರವಿನ್ಯಾಸ ಮತ್ತು ಕಲಾನಿರ್ದೇಶಕರ ಕೈ ಚಳಕವೂ ಇದೆ. ರಾಜೀವ್ ರವಿ ಛಾಯಾಗ್ರಹಣದಲ್ಲಿ ಪ್ರತಿಯೊಂದು ದೃಶ್ಯಗಳು ಕಲಾತ್ಮಕವಾಗಿವೆ. ಸಾಮಾನ್ಯವಾಗಿ ನಿರ್ದೇಶಕ ಮತ್ತು ಛಾಯಾಗ್ರಾಹಕರದ್ದು ಗಂಡಹೆಂಡತಿ ಸಂಬಂಧ ಎಂದು ಹೋಲಿಸಲಾಗುತ್ತದೆ. ಇಲ್ಲಿ ನಿಜಕ್ಕೂ ನಿರ್ದೇಶಕಿ ಗೀತು ಮೋಹನ್ ದಾಸ್ ಪತಿಯೇ ಛಾಯಾಗ್ರಾಹಕರು. ಬಹುಶಃ ಇದೇ ಕಾರಣದಿಂದಲೇ ಇರಬಹುದು ಇಂಟಿಮೇಟ್ ದೃಶ್ಯಗಳನ್ನು ಕೂಡ ಸುಂದರವಾಗಿ ತೋರಿಸಿದ್ದಾರೆ! ಆದರೆ ಸಂಭಾಷಣೆಗಳಿಗೆ ಇದು ಅನ್ವಯವಾಗುವುದಿಲ್ಲ. ರಾಯನಿಗೆ ಹೆಣ್ಣೆಂದರೆ ಹೇಗೆ ಕಾಮದ ವಸ್ತುವೋ ಅದೇ ರೀತಿ ಆತನ ಸಂಭಾಷಣೆಗಳಿಗೂ ಲಂಗು ಲಗಾಮಿಲ್ಲ. ಆದರೆ ಕೆಲವೊಮ್ಮೆ ಬೆಚ್ಚಿ ಬೀಳಿಸುವಂತೆ ವೇದಾಂತಿಯ ಹಾಗೆ ಮಾತನಾಡುತ್ತಾನೆ. ರಾಯನ ಬಗ್ಗೆ ಪ್ರೇಕ್ಷಕರಿಗೆ ಅಭಿಪ್ರಾಯ ಮೂಡುವ ವೇಳೆಗೆ ಮಧ್ಯಂತರ ದಾಟಿರುತ್ತದೆ.
ಕೆ.ಜಿ.ಎಫ್. 2 ಚಿತ್ರಕ್ಕಾಗಿ ವ್ಯಾಪಕ ಮನ್ನಣೆ ಗಳಿಸಿದ್ದ ಉಜ್ವಲ್ ಕುಲಕರ್ಣಿ ಈ ಚಿತ್ರದ ಸಂಕಲನಕಾರರು. ಆದರೆ ಆ ಅನುಭವವನ್ನು ಮರೆಸುವ ಹಾಗೆ ದೃಶ್ಯಗಳ ರಾಶಿಯನ್ನೇ ತುರುಕಿದಂತಿದೆ. ಇದರಲ್ಲಿ ಚಿತ್ರಕಥೆಯ ಕೊಡುಗೆಯೂ ಸಾಕಷ್ಟಿದೆ.
ಸಾಹಸ ಸಂಯೋಜನೆಯಲ್ಲಿ ಹೊಸತನವಿದೆ. ಆದರೆ ಒಟ್ಟು ಸಿನೆಮಾ ನೋಡುವುದೇ ಒಂದು ಸಾಹಸವಾಗಿ ಬದಲಾಗುವಾಗ ಎಲ್ಲವೂ ಗೌಣವಾಗಿ ಬಿಡುತ್ತದೆ. ಯಾಕೆಂದರೆ ಚಿತ್ರದ ಆರಂಭದಿಂದಲೇ ಸಿಗಾರ್ ಸೇದುತ್ತಾ ಕೋವಿಯಿಂದ ಸುಡುತ್ತಾ ಸಾಗುವ ರಾಯನ ಹೊಡೆದಾಟಗಳಿಗೆ ಒಂದು ಗಟ್ಟಿಯಾದ ಹಿನ್ನೆಲೆ ತೋರಿಸುವುದಿಲ್ಲ.
ಹೀಗಾಗಿಯೇ ಆತನ ಹೊಡೆದಾಟಗಳು ಪ್ರೇಕ್ಷಕನಿಗೆ ಕನೆಕ್ಟ್ ಆಗುವುದಿಲ್ಲ. ಇಷ್ಟಕ್ಕೂ ರಾಯನ ಸಾಹಸದ ವೈಭವೀಕರಣ ನಿರ್ದೇಶಕರ ಗುರಿಯೂ ಅಲ್ಲ. ಹಲವು ಮಹಿಳೆಯರೊಡನೆ ಸಂಬಂಧ ಇರಿಸಿಕೊಂಡ ವ್ಯಕ್ತಿಗೆ, ಕಾಳದಂಧೆಯ ಪಾತಕಿಗೆ ನಿಜವಾದ ವಿಷವರ್ತುಲ ಹೇಗೆ ಮನದೊಳಗಿಂದ ಕಾಡುತ್ತದೆ ಎನ್ನುವುದನ್ನು ತೋರಿಸುವುದೇ ಅವರ ಉದ್ದೇಶ. ಅದಕ್ಕೆ ಪ್ರೇಕ್ಷಕ ಸಿದ್ಧನಾಗಿರಬೇಕು ಅಷ್ಟೇ.
ಯಶ್ ಅವರ ಬಗ್ಗೆ ಪ್ರೇಕ್ಷಕರಲ್ಲಿ ಬಹುದೊಡ್ಡ ಇಮೇಜ್ ಇದೆ. ಕೆ.ಜಿ.ಎಫ್ ಮೂಲಕ ಯಶ್ ಪಡೆದ ಜಾಗತಿಕ ಯಶಸ್ಸು ಮತ್ತು ಈ ನಟನ ನಿಜವಾದ ಬದುಕಿನ ಸಾಧನೆಗಳೇ ಆ ಇಮೇಜ್. ಆದರೆ ಟಾಕ್ಸಿಕ್ ಸಂದೇಶವೇ ಒಂದು ವೇದನೆಯ ಕಥೆ. ಸೈಕಲಾಜಿಕಲ್ ಥ್ರಿಲ್ಲರ್ ಅನ್ನು ಹೇಳಲು ಇಂಥದೊಂದು ಬೃಹತ್ ಕ್ಯಾನ್ವಾಸ್ ಮತ್ತು ಸ್ಟಾರ್ ನಟನನ್ನು ಬಳಸಿರುವ ರೀತಿಯನ್ನು ಸಾಮಾನ್ಯ ಪ್ರೇಕ್ಷಕರು ಅರಗಿಸಿಕೊಳ್ಳುವುದು ಕಷ್ಟ. ಭಾರೀ ಬಂಡವಾಳ ಹೂಡಿ, ಮೂರು ಗಂಟೆಗೂ ಅಧಿಕ ಕಾಲಾವಧಿ ತೆಗೆದುಕೊಂಡು ಕೊಟ್ಟಿದ್ದೇನು? ಗುಡ್ಡ ಅಗೆದು ಇಲಿ ಹಿಡಿದಂತೆ ಕಾಣಿಸುವುದು ಸತ್ಯ. ಭ್ರಮಾಲೋಕದ ಕಥೆಯಲ್ಲಿ ಪ್ರಶ್ನೆಗಳಿರಬಾರದು. ಹೊಸದೊಂದು ಭ್ರಮೆಗೆ ಒಳಗಾಗುವ ಮೊದಲು ಹಳೆಯದನ್ನೆಲ್ಲ ಮರೆತು ಸಿದ್ಧಗೊಳ್ಳಬೇಕಿರುವುದು ಸಹಜ.






