ಬೆಂಗಳೂರಿಗೆ ಬರುವುದು ಅಮ್ಮನ ಮನೆಗೆ ಬಂದ ಅನುಭವ ಕೊಡುತ್ತದೆ: ಕನ್ನಡದಲ್ಲೇ ಮಾತನಾಡಿದ ನಟ ಜ್ಯೂನಿಯರ್ ಎನ್ಟಿಆರ್

ನಟ ಜೂನಿಯರ್ ಎನ್ಟಿಆರ್ | Photo Credit ; IMDb
ಆಸ್ಪತ್ರೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಖ್ಯಾತ ತೆಲುಗು ನಟ ಜೂನಿಯರ್ ಎನ್ಟಿಆರ್ ಕನ್ನಡದಲ್ಲಿ ಮಾತನಾಡುವ ಮೂಲಕ ಎಲ್ಲರನ್ನೂ ಸ್ವಾಗತಿಸಿದರು.
ಖ್ಯಾತ ತೆಲುಗು ನಟ ಜೂನಿಯರ್ ಎನ್ಟಿಆರ್ ಅವರು ರವಿವಾರ ಬೆಂಗಳೂರಿಗೆ ಆಗಮಿಸಿದಾಗ ಅಭಿಮಾನಿಗಳು ಅತ್ಯಧಿಕ ಸಂಖ್ಯೆಯಲ್ಲಿ ಜಮಾಯಿಸಿ ದರು. ಮಾರ್ಚ್ 8ರಂದು ರವಿವಾರ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ನಟ ಕನ್ನಡದಲ್ಲಿ ಮಾತನಾಡುವ ಮೂಲಕ ತಮ್ಮ ಭಾಷಣವನ್ನು ಆರಂಭಿಸಿದರು.
ಎನ್ಟಿಆರ್ ಆಗಮಿಸುತ್ತಲೇ ಜನರೆಲ್ಲರೂ ‘ಟೈಗರ್ ಟೈಗರ್’ ಎನ್ನುತ್ತಾ ಚಪ್ಪಾಳೆ ತಟ್ಟಿ ಆನಂದಿಸಿದರು. “ಎಲ್ಲರಿಗೂ ನಮಸ್ಕಾರ, ನನಗೆ ನನ್ನ ಭಾಷಣ ಕನ್ನಡದಿಂದ ಪ್ರಾರಂಭಿಸಬೇಕು ಎಂದಿತ್ತು. ಕರ್ನಾಟಕಕ್ಕೆ ಬರುವುದು ನನಗೆ ಯಾವಾಗಲೂ ಬಹಳ ಖುಷಿ ಸಿಗುತ್ತೆ. ನನ್ನ ಅಮ್ಮ ಕುಂದಾಪುರದವರೆಂದು ನಿಮಗೆ ಎಲ್ಲರಿಗೂ ತಿಳಿದಿದೆ. ಹೀಗಾಗಿ ಕರ್ನಾಟಕಕ್ಕೆ ಅಥವಾ ಬೆಂಗಳೂರಿಗೆ ಬಂದಾಗ ನನಗೆ ಅಪ್ಪನ ಮನೆಯಿಂದ ಅಮ್ಮನ ಮನೆಗೆ ಬಂದ ಅನುಭವವಾಗುತ್ತದೆ” ಎಂದು ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳನ್ನು ರಂಜಿಸಿದರು.
ಆಸ್ಪತ್ರೆ ಆವರಣದೊಳಗೆ ಸಾವಿರಾರು ಅಭಿಮಾನಿಗಳು ಆಗಮಿಸಿದ್ದ ಕಾರಣ ನೂಕು ನುಗ್ಗಲು ಹೆಚ್ಚಾಗಿ ಪರಿಸ್ಥಿತಿ ಕೈಮೀರಿ ಹೋಗಿತ್ತು. ಕೆಲ ಸಮಯ ಆಸ್ಪತ್ರೆಯೊಳಗೆ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಆಸ್ಪತ್ರೆಯೊಳಗಿನ ಎಸ್ಕಲೇಟರ್ ಕೂಡ ಹಾಳಾಗಿದೆ.
ಜನದಟ್ಟನೆ ಹೆಚ್ಚಾಗಿ ಎಸ್ಕಲೇಟರ್ ಮೇಲೆ ಅಭಿಮಾನಿಯೊಬ್ಬರು ಬಿದ್ದ ಘಟನೆಯೂ ನಡೆದಿದೆ. ಮತ್ತೊಬ್ಬರು ಅವರನ್ನು ರಕ್ಷಿಸಿದ್ದಾರೆ. ಜನದಟ್ಟನೆ ಆಸ್ಪತ್ರೆಯ ರೋಗಿಗಳು ಮತ್ತು ವೈದ್ಯಕೀಯ ಸಿಬ್ಬಂದಿಗೆ ತೀವ್ರ ತೊಂದರೆ ಉಂಟು ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಲಘು ಲಾಠಿ ಪ್ರಹಾರ ಮಾಡಬೇಕಾಗಿ ಬಂದಿತ್ತು.







