ಹುರುಪಿನ ಯೋಜನೆಗಳೊಂದಿಗೆ ಗಣೇಶ್ ರಾವ್ ಕೇಸರ್ಕರ್

ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ (ಕೆ.ಟಿ.ವಿ.ಎ.)ಗೆ ಕೆ.ಗಣೇಶ್ ರಾವ್ ಕೇಸರ್ಕರ್ ನೂತನ ಅಧ್ಯಕ್ಷರಾಗಿದ್ದಾರೆ. ಖಳನಾಗಿ, ಪೋಷಕನಾಗಿ, ನಾಯಕನಾಗಿ ಸುಮಾರು ಮುನ್ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಗಣೇಶ್ ಬಣ್ಣದ ಲೋಕಕ್ಕೆ ಪ್ರವೇಶಿಸಿದ್ದೇ ಕಿರುತೆರೆಯ ಮೂಲಕ. ದೂರದರ್ಶನದ ‘ಮಂಜು ಕರಗಿತು’ ಎನ್ನುವ ಧಾರಾವಾಹಿಯಿಂದ ಶುರುವಾದ ಇವರ ಪಯಣ ವಿವಿಧ ಖಾಸಗಿ ವಾಹಿನಿಗಳ, ಹಲವು ಧಾರಾವಾಹಿಗಳ 6,000ಕ್ಕೂ ಅಧಿಕ ಸಂಚಿಕೆಗಳಲ್ಲಿ ಆವರಿಸಿದೆ. ಕೆ.ಟಿ.ವಿ.ಎ. ಅಧ್ಯಕ್ಷ ಸ್ಥಾನದಲ್ಲಿ ಇವರು ಹಾಕಿರುವ ಯೋಜನೆಗಳ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.
*ಕೆ.ಟಿ.ವಿ.ಎ. ಅಧ್ಯಕ್ಷರಾಗಿದ್ದೀರಿ. ಅಭಿನಂದನೆಗಳು. ಮುಂದೆ ಏನೆಲ್ಲ ಯೋಜನೆ ಹಾಕಿಕೊಂಡಿದ್ದೀರಿ?
ವಂದನೆಗಳು. ಅಧ್ಯಕ್ಷನಾದ ದಿನಗಳಿಂದಲೇ ಯೋಜನೆಗಳ ಕಾರ್ಯರೂಪಕ್ಕಾಗಿ ರೂಪುರೇಷೆ ತಯಾರಾಗುತ್ತಿದೆ. ಈಗಾಗಲೇ 4 ಬಾರಿ ಸಭೆ ಕರೆಸಲಾಗಿದೆ. ಕಚೇರಿಯಿಂದಲೇ ಕಾರ್ಯರೂಪ ಶುರುವಾಗಿದೆ.
ಕಳೆದ 25 ವರ್ಷಗಳಲ್ಲಿ ಸ್ಥಾಪಕ ಅಧ್ಯಕ್ಷರಿಂದ ಇದುವರೆಗೆ ಅಧ್ಯಕ್ಷರಾದವರ ಫೋಟೊಗಳೊಂದಿಗೆ ಅವರ ಹೆಸರನ್ನು ಭಿತ್ತಿಯಲ್ಲಿ ಬರೆಸಿದ್ದೇವೆ. ನನ್ನ ಮೂಲಕ ಇಷ್ಟು ವರ್ಷಗಳಲ್ಲಿ ಮೊದಲ ಬಾರಿಗೆ ಕಲಾವಿದರ ವಿಭಾಗದಿಂದ ಓರ್ವ ಅಧ್ಯಕ್ಷಸ್ಥಾನ ಪಡೆದಂತಾಗಿದೆ.
* ಹೀಗಾಗಿಯೇ ಕಿರುತೆರೆಯ ಹಿರಿಯ ಕಲಾವಿದರಿಗೆ ಅವಕಾಶಗಳಿಲ್ಲ ಎನ್ನುವ ಸಮಸ್ಯೆಗೆ ನಿಮ್ಮಿಂದ ಪರಿಹಾರ ನಿರೀಕ್ಷಿಸಬಹುದೇ?
ಈ ಬಗ್ಗೆ ಈಗಾಗಲೇ ಒಂದು ಚರ್ಚೆ ನಡೆಸಲಾಗಿದೆ. ಪಾತ್ರಧಾರಿಗಳನ್ನು ಆಯ್ಕೆ ಮಾಡುವುದು ವಾಹಿನಿ ಎಂದು ದೂರಲಾಗುತ್ತದೆ. ಆದುದರಿಂದ ವಾಹಿನಿ ಮುಖ್ಯಸ್ಥರಲ್ಲೇ ಮಾತನಾಡಿ, ಕಲಾವಿದರಿಗೆ ಮಾತ್ರವಲ್ಲ, ಹಿರಿಯ ತಂತ್ರಜ್ಞರಿಗೂ ಅವರ ಸಾಮರ್ಥ್ಯಕ್ಕೆ ಅನುಸಾರವಾದ ಅವಕಾಶ ನೀಡುವಂತೆ ಮಾತುಕತೆ ನಡೆಸಲಾಗುತ್ತದೆ.
* ಮುಖ್ಯವಾಗಿ ಕಲಾವಿದರನ್ನು ತಡರಾತ್ರಿ ತನಕ ಚಿತ್ರೀಕರಣದಲ್ಲಿ ಬಳಸಿಕೊಳ್ಳುವುದರ ವಿರುದ್ಧ ನಿಯಮಗಳು ಅಗತ್ಯ ಅನಿಸುವುದಿಲ್ಲವೇ?
ನಮ್ಮದು ಅಸಂಘಟಿತ ಕಾರ್ಮಿಕ ವಲಯ. ಬಹಳಷ್ಟು ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶ ಕೆ.ಟಿ.ವಿ.ಎ. ವ್ಯಾಪ್ತಿಗೆ ಬರುವುದಿಲ್ಲ. ಆದರೆ ನಮ್ಮ ಸಮಸ್ಯೆಗಳ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ವಿವರಿಸಿ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಯತ್ನಿಸುತ್ತೇವೆ.
* ಕೆ.ಟಿ.ವಿ.ಎ.ಯಿಂದ ಸದ್ಯದಲ್ಲೇ ಕಾರ್ಯಗತಗೊಳ್ಳುವಂಥ ಕಾರ್ಯಕ್ರಮಗಳನ್ನೇನಾದರೂ ಹಮ್ಮಿಕೊಂಡಿದ್ದೀರಾ?
ಸಂಘದಲ್ಲಿರುವ ಸದಸ್ಯರ ಮಕ್ಕಳಿಗೆ ನೀಡಲಾಗುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮತ್ತೆ ಮುಂದುವರಿಸಬೇಕಿದೆ. 2024-25ರ ಸಾಲಿನ ಪ್ರತಿಭಾ ಪುರಸ್ಕಾರವನ್ನು ಇನ್ನೂ ನೀಡಿಲ್ಲ. ಸಂಘದಿಂದ ನೆರವೇರಿಸಲು ಹಣಕಾಸಿನ ಕೊರತೆ ಇದೆ. ಹಾಗಾಗಿ ನಮ್ಮತಂಡ ಒಂದು ಪ್ರಾಯೋಜಕ ಸಂಸ್ಥೆಯೊಂದಿಗೆ ಮಾತನಾಡಿದೆ. ಸೆಪ್ಟಂಬರ್ನಲ್ಲಿ ಈ ಕಾರ್ಯಕ್ರಮ ನಡೆಸಲು ಸಿದ್ಧವಾಗಿದ್ದೇವೆ.
* ನಿಮ್ಮ ಯೋಜನೆಗಳ ಕಾರ್ಯರೂಪಕ್ಕೆ ಹಣಕಾಸು ಸಮಸ್ಯೆಯಾಗಿಲ್ಲವೇ?
ಖಂಡಿತವಾಗಿ ಅದೊಂದು ಸಮಸ್ಯೆಯೇ ಸರಿ. ನಮ್ಮ ಕೆ.ಟಿ.ವಿ.ಎ. ಎನ್ನುವುದು ಒಂದು ಕ್ಷೇಮಾಭಿವೃದ್ಧಿ ಸಂಘವಷ್ಟೇ. ಸದಸ್ಯರು ತಂಡಕ್ಕೆ ಸೇರಿಕೊಂಡಾಗ ಕಟ್ಟಿದ ಸದಸ್ಯತ್ವ ಶುಲ್ಕದ ಹಣದಿಂದಲೇ ಖರ್ಚುವೆಚ್ಚ ಭರಿಸಬೇಕಾಗಿದೆ. ಚುನಾವಣೆ ಸಂದರ್ಭದಲ್ಲಿ ಕಾರ್ಮಿಕರಿಗೆ ಮತ್ತು ಅವರ ಕುಟುಂಬಕ್ಕೆ ಆರೋಗ್ಯ ವಿಮೆ ಮಾಡಿಸುವ ಭರವಸೆ ನೀಡಿದ್ದೆ.
ಆದರೆ ಅಸೋಸಿಯೇಷನ್ನಲ್ಲಿ ಅಷ್ಟು ಫಂಡ್ಸ್ ಇಲ್ಲ. ಹಾಗಾಗಿ ದಾನಿಗಳನ್ನು ಬಳಸಿಕೊಂಡು ನನ್ನ ಮಾತುಗಳನ್ನು ಈಡೇರಿಸುವುದಾಗಿ ಈ ಸಂದರ್ಭದಲ್ಲಿ ಹೇಳಲು ಬಯಸುತ್ತೇನೆ.
* ದಾನಿಗಳ ಬಲದಿಂದಲೇ ಅಭಿವೃದ್ಧಿ ಯೋಜನೆಗಳು ಕಾರ್ಯರೂಪಗೊಳ್ಳಬಹುದೇ?
ಹಣ ಸಂಗ್ರಹಿಸುವುದು, ಸರಕಾರದಿಂದ ಅನುದಾನಗಳನ್ನು ಪಡೆಯುವುದು ಮಾಡಲೇಬೇಕಾಗುತ್ತದೆ. ಈ ಹಿಂದೆ ‘ಕರ್ನಾಟಕ ಕಿರುತೆರೆ ಕಲಾವಿದರ ಮತ್ತು ಕಾರ್ಮಿಕರ ಕೂಟ’ದ ಮೂಲಕ ಯಶಸ್ವಿಯಾಗಿ ಹೆಲ್ತ್ ಕ್ಯಾಂಪ್ ನಡೆಸಿದ ಅನುಭವ ಇದೆ. ಮಲ್ಟಿನ್ಯಾಶನಲ್ ಸಂಸ್ಥೆಗಳ ಸಿ.ಎಸ್.ಆರ್. ಫಂಡ್ಗಳನ್ನು ಬಳಸಿಕೊಳ್ಳಬೇಕಿದೆ. ಮಾತ್ರವಲ್ಲ, ಪ್ರತಿವರ್ಷ ಬಿಬಿಎಂಪಿ, ಸರಕಾರದಿಂದ ಸಹಾಯಕ ಸಂಘಸಂಸ್ಥೆಗಳಿಗೆ ಒಂದಷ್ಟು ಅನುದಾನ ಕೊಡುವ ಬಗ್ಗೆ ನಿಯಮಗಳಿವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳುವ ಭರವಸೆ ಇದೆ. 25 ವರ್ಷಗಳಿಂದ ನಾನು ಕೂಡ ಒಂದು ರಾಷ್ಟ್ರೀಯ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಕಾರಣ, ಅವರ ಸಹಕಾರವನ್ನು ಕೂಡ ಪಡೆದು ಸಂಘವನ್ನು ಬಲಿಷ್ಠಗೊಳಿಸುವ ವಿಶ್ವಾಸವಿದೆ.
* ನಿಮ್ಮ ಅಭಿವೃದ್ಧಿ ಕಾರ್ಯಗಳಿಗೆ ಸದಸ್ಯರ ಸಹಕಾರ ಹೇಗಿದೆ?
ಸದಸ್ಯರ ಸಹಕಾರದಿಂದಲೇ ಬಹುಮತದಿಂದ ಆಯ್ಕೆಯಾಗಿದ್ದೇನೆ. ಉಳಿದಂತೆ ಪ್ರತಿಸ್ಪರ್ಧಿ ಬಣದಿಂದ ಚುನಾಯಿತರಾಗಿರುವ ಒಂಭತ್ತು ಮಂದಿಯಲ್ಲಿ ಬಹುತೇಕರು ನಮಗೆ ತಟಸ್ಥವಾಗಿ ಬೆಂಬಲಿಸುವ ಮಾತನಾಡಿದ್ದಾರೆ. ಆದರೆ ಒಂದಿಬ್ಬರು ನಮಗೆ ತೊಂದರೆ ನೀಡಲು ಹುನ್ನಾರ ನಡೆಸಿರುವುದು ಗಮನಕ್ಕೆ ಬಂದಿದೆ. ಅದು ಸಫಲವಾಗುವುದಿಲ್ಲ ಎನ್ನುವ ನಂಬಿಕೆ ಇದೆ.






