ಕೊಲೆಗಡುಕ ಕಾಳಿದಾಸ!

ಚಿತ್ರ: ಏ.ಆ
ನಿರ್ದೇಶನ: ಪ್ರೇಮ್
ನಿರ್ಮಾಣ: ವೆಂಕಟ್ ಕೆ. ನಾರಾಯಣ
ತಾರಾಗಣ: ಧ್ರುವ ಸರ್ಜಾ, ಸಂಜಯ್ ದತ್, ರೀಶ್ಮಾ ನಾಣಯ್ಯ, ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ ಮೊದಲಾದವರು.
ಧ್ರುವ ಸರ್ಜಾ ಪರದೆ ಮೇಲೆ ಬರುವ ಮೊದಲೇ ಮೂರು ತಲೆಗಳು ಉರುಳುತ್ತವೆ. ಜೈಲಿನಿಂದ ಬರುವ ಕಾಳಿದಾಸನ ಕಣ್ಣು ನಿವೃತ್ತ ಪೊಲೀಸ್ ಕಮಿಷನರ್ ಮೇಲೆ ಇರಬಹುದು ಎಂದು ಇಲಾಖೆ ಭಯ ಬೀಳುತ್ತದೆ. ತನಗೆ ಸೆಕ್ಯುರಿಟಿ ನೀಡಿದ ಪೊಲೀಸರಲ್ಲೇ ಕಮಿಷನರ್ ಕಾಳಿದಾಸನ ಫ್ಲ್ಯಾಶ್ ಬ್ಯಾಕ್ ಕಥೆಯನ್ನು ಹೇಳತೊಡಗುತ್ತಾರೆ.
ಸುಮಾರು ಎಪ್ಪತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ಸೀಮೆ ಎಣ್ಣೆ ವ್ಯವಹಾರ ನಡೆಸುವ ಕಾಳಿದಾಸನ ಕಣ್ಣಿಗೆ ಸೀಮೆಯಲ್ಲಿರದ ಸುಂದರಿ ಮಹಾಲಕ್ಷ್ಮಿ ಕಾಣಿಸುತ್ತಾಳೆ. ‘ಮಚ್ಚು ಲಕ್ಷ್ಮಿ’ ಎಂದೇ ಹೆಸರಾಗಿರುವ ಗಂಡುಬೀರಿ ಆಕೆ. ಕುಸ್ತಿಪಟು ಡಾಕ್ ದೇವ ಎನ್ನುವ ರೌಡಿಯಲ್ಲಿ ಅಭಿಮಾನ ಇರಿಸಿ ಬೆಳೆದವನು ಕಾಳಿದಾಸ. ಆದರೆ ದೇವನಿಗೆ ಕಾಳಿದಾಸನಲ್ಲಿ ವೈಷಮ್ಯ ಬೆಳೆಯಲು ಮಚ್ಚು ಲಕ್ಷ್ಮಿಯೊಂದಿಗಿನ ಕಾಳಿಯ ಸಂಬಂಧ ಕೂಡ ಕಾರಣವಾಗುತ್ತದೆ. ಹಾಗಾದರೆ ದೇವನಿಗೆ ಕಾಳಿದಾಸನಲ್ಲಿ ದ್ವೇಷ ಹುಟ್ಟುವುದು ಯಾಕೆ? ಅದರ ಪರಿಣಾಮ ಏನು? ಮೊದಲಾದ ಪ್ರಶ್ನೆಗಳು ಮೂಡಿದರೆ ಅವುಗಳಿಗೆ ಚಿತ್ರದಲ್ಲಿ ಉತ್ತರವಿದೆ.
ಕಾಳಿದಾಸನ ಪಾತ್ರದಲ್ಲಿ ಧ್ರುವ ಸರ್ಜಾ ತನ್ನ ಹಳೆಯ ಇಮೇಜ್ ಒಳಗೆ ಇಳಿಯುವ ಪ್ರಯತ್ನ ಮಾಡಿ ಗೆದ್ದಿದ್ದಾರೆ. ಅಂದರೆ ಮುಗ್ಧ ಪ್ರೇಮಿಯಾಗಿರುವ ದೃಶ್ಯಗಳಲ್ಲಿ ಇಷ್ಟವಾಗುತ್ತಾರೆ. ಧ್ರುವ ಒಳಗಿನ ನೃತ್ಯ ಪಟುವನ್ನು ಆಸ್ವಾದಿಸುವ ಅವಕಾಶ ಅಭಿಮಾನಿಗಳಿಗೆ ಇದೆ. ಡಾಕ್ ದೇವನಾಗಿ ಸಂಜಯ್ ದತ್ ನಟಿಸಿದ್ದಾರೆ. ಧ್ರುವ ಸರ್ಜಾ ಬಳಿಕ ಚಿತ್ರದಲ್ಲಿ ಪ್ರಾಧಾನ್ಯತೆ ಪಡೆದಿರುವ ಪಾತ್ರ ಅಂದರೆ ದತ್ ಅವರದ್ದೇ. ಅದರಲ್ಲೂ ಥಿಯೇಟರ್ ಫೈಟ್ ಸನ್ನಿವೇಶವಂತೂ ಭರ್ಜರಿಯಾಗಿ ಮೂಡಿ ಬಂದಿದೆ.
ಮಹಾಲಕ್ಷ್ಮಿಯಾಗಿ ರೀಷ್ಮಾ ನಾಣಯ್ಯ ಮೊದಲ ಬಾರಿಗೆ ಗುರುತಿಸಿಕೊಳ್ಳುವಂಥ ಪಾತ್ರ ಮಾಡಿದ್ದಾರೆ. ಪಾತ್ರ ಬಯಸುವ ಅತಿ ಅಭಿನಯ ನೀಡಿ ಬೆಂಕಿ ಹಚ್ಚಿದ್ದಾರೆ. ಕಾಳಿದಾಸನ ಅಣ್ಣ ಧರ್ಮನಾಗಿ ರಮೇಶ್ ಅರವಿಂದ್ ನಟಿಸಿದ್ದಾರೆ. ಅವರದು ಪೋಷಕ ಪಾತ್ರದಂತೆ ಕಂಡರೂ ಅದರೊಳಗೊಂದು ವಿಶೇಷ ಮರ್ಮವಿದೆ. ಚಿತ್ರ ಬಿಡುಗಡೆಗೂ ಮೊದಲು ಸದ್ದು ಮಾಡಿದ್ದ ಸಂಜಯ್ ದತ್ ಹಾಡು, ರಮೇಶ್ ಅರವಿಂದ್ ಅವರ ಹೊಡೆದಾಟದ ದೃಶ್ಯಗಳು ಚಿತ್ರದಲ್ಲಿ ಕಾಣಿಸುವುದಿಲ್ಲ. ರವಿಚಂದ್ರನ್ ಅವರಂತೂ ಟ್ರೇಲರ್ನಲ್ಲಿದ್ದಷ್ಟು ಸಮಯವೇ ಸಿನೆಮಾದಲ್ಲೂ ಇದ್ದ ಹಾಗಿದೆ. ಶಿಲ್ಪಾ ಶೆಟ್ಟಿ ನಟನೆಗೂ ಒಂದು ದೃಶ್ಯದಲ್ಲಷ್ಟೇ ಅವಕಾಶ. ಇವರಿಗೆಲ್ಲ ಎರಡನೇ ಭಾಗವೇ ವೇದಿಕೆಯಾಗುವ ನಿರೀಕ್ಷೆ ಇದೆ. ಸುದೀಪ್ ಪಾತ್ರವನ್ನಂತೂ ಎರಡನೇ ಭಾಗದ ಕೊಂಡಿಗಾಗಿಯೇ ಬಳಸಿಕೊಂಡಂತಿದೆ. ಎಪ್ಪತ್ತರ ದಶಕದಲ್ಲಿ ನಡೆಯುವ ಕಥೆಯಾದರೂ ನಟನೆಯ ಶೈಲಿಯನ್ನು ಈಗಿನ ಟ್ರೆಂಡ್ ರೀತಿಯಲ್ಲೇ ಹೊರತೆಗೆಯಲಾಗಿದೆ.
ಕಾರಾಗೃಹದಿಂದ ಹೊರಗೆ ಬರುವ ಕಾಳಿದಾಸ ಎಂಥ ಹಿಂಸೆಗೂ ಹೇಸದಂಥವನು. ಅದಕ್ಕೆ ಕಾರಣವೇನು? ಆತ ಎಂಥ ಪರಿಸ್ಥಿತಿಯಲ್ಲಿ ಜೈಲಿಗೆ ಹೋದ ಎನ್ನುವುದೇ ಚಿತ್ರದ ಪ್ರಮುಖ ಕಥೆ.
ಪ್ರೇಮ್ ಎಂದಿನಂತೆ ಚಿತ್ರದ ತಾಂತ್ರಿಕ ವಿಭಾಗದಲ್ಲಿ ಗುಣಮಟ್ಟ ತೋರಿಸಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ಹಿನ್ನೆಲೆ ಸಂಗೀತ ಚಿತ್ರದ ಜೀವಾಳವಾಗಿದೆ. ಎಪ್ಪತ್ತರ ದಶಕದ ಬೆಂಗಳೂರನ್ನು ಕಲಾನಿರ್ದೇಶಕರು ಸಿನಿಮೀಯ ರೀತಿಯಲ್ಲೇ ಕಟ್ಟಿಕೊಟ್ಟಿದ್ದಾರೆ. ಕಾಳಿದಾಸ ಇಲ್ಲಿಯೂ ಅನಕ್ಷರಸ್ಥನೇ. ಆದರೆ ಕವಿಯಲ್ಲ, ಕೊಲೆಗಡುಕ. ಸಮಸ್ಯೆ ತನ್ನ ನೇರಕ್ಕೆ ಬರುವವರೆಗೆ ರೌಡಿಗೆ ಅಭಿಮಾನಿಯಾಗಿ ಬಳಿಕ ಆತನ ವಿರುದ್ಧ ತಿರುಗಿ ನಿಲ್ಲುವಾತ ಕ್ರಾಂತಿಕಾರಿಯಂತೂ ಆಗುವುದಿಲ್ಲವಲ್ಲ?
ಚಿತ್ರದ ಪೋಷಕ ಪಾತ್ರಗಳಲ್ಲಿ ಕೂಡ ಸಾಕಷ್ಟು ಪ್ರಮುಖ ಕಲಾವಿದರು ನಟಿಸಿದ್ದಾರೆ. ನಾಯಕಿಯ ತಾಯಿಯಾಗಿ ಕಿವಿ ಕೇಳಿಸದ ಪಾತ್ರದಲ್ಲಿರುವ ಮಾನಸಿ ಸುಧೀರ್, ಸಂಜಯ್ ದತ್ ಬಲಗೈ ಬಂಟನಾಗಿ ಯಶ್ ಶೆಟ್ಟಿ, ಕಮಿಷನರ್ ಪಾತ್ರದಲ್ಲಿ ಪಿ. ರವಿಶಂಕರ್, ಪಿ.ಸಿ.ಗಳಾಗಿ ಸುಚೇಂದ್ರ ಪ್ರಸಾದ್, ಮುನಿ ಮೊದಲಾದವರು ಕೂಡ ಗಮನ ಸೆಳೆಯುತ್ತಾರೆ. ಕ್ರೇಜಿಸ್ಟಾರ್ನಿಂದ ಕಪಾಳ ಮೋಕ್ಷ ಪಡೆಯಲು ಶೋಭರಾಜ್, ಸಂಜಯ್ ದತ್ನಿಂದ ಕುಸ್ತಿ ಏಟು ತಿನ್ನಲು ಬಿಗ್ ಬಾಸ್ ಖ್ಯಾತಿಯ ರಘು ಸೀಮಿತವಾಗಿದ್ದಾರೆ.
ನಾಯಕನಲ್ಲಿ ಜೋಗಿಯ ಮುಗ್ಧತೆಯ ಭಾಗವನ್ನು ಸೃಷ್ಟಿಸಿ ತಮ್ಮ ಯಶಸ್ಸಿನ ಛಾಪನ್ನು ಮತ್ತೆ ತೆರೆಗೆ ತರಲು ಪ್ರೇಮ್ ಭಾರೀ ಪ್ರಯತ್ನ ಮಾಡಿದ್ದಾರೆ.
ಎಪ್ಪತ್ತರ ಕಾಲಘಟ್ಟದ ಮುಖ್ಯಮಂತ್ರಿಯ ಪಾತ್ರಧಾರಿಯು ದೇವರಾಜ ಅರಸು ಅವರನ್ನು ಹೋಲುತ್ತಾರೆ. ಕಥೆಯ ಅಂತ್ಯದಲ್ಲಿ ಬರುವ ಸುದೀಪ್ ಬೆಂಕಿ ಬಿದ್ದ ರೈಲಿನಲ್ಲಿ ರಾಮನ ವಿಗ್ರಹವನ್ನು ರಕ್ಷಿಸುವ ದೃಶ್ಯ ಗೋಧ್ರಾ ಹತ್ಯಾಕಾಂಡವನ್ನು ನೆನಪಿಸುತ್ತದೆ. ಈ ಎಲ್ಲ ಕಾರಣಗಳಿಂದ ಎರಡನೇ ಭಾಗದ ಮೂಲಕ ಪ್ರೇಮ್ ರಾಮರಾಜ್ಯಕ್ಕೆ ಹೊಸ ರಾಜಕೀಯ ಭಾಷ್ಯ ಬರೆಯಲು ಹೊರಟಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ.






