‘ಆಪರೇಷನ್ ಸಿಂಧೂರ್’ ಸಿನೆಮಾ ಪ್ರಕಟನೆಗೆ ತೀವ್ರ ಆಕ್ಷೇಪ: ಕ್ಷಮೆಯಾಚಿಸಿದ ನಿರ್ದೇಶಕ

Photo: Instagram/@aapkabestimain
ಹೊಸದಿಲ್ಲಿ: ಭಾರತೀಯ ಸೇನೆಯು ಪಾಕಿಸ್ತಾನದ ಮೇಲೆ ನಡೆಸಿದ ಸೇನಾ ದಾಳಿಯಾದ ‘ಆಪರೇಷನ್ ಸಿಂಧೂರ್’ ಅನ್ನು ಆಧರಿಸಿ ಪ್ರಕಟಿಸಲಾಗಿದ್ದ ಸಿನೆಮಾ ತೀವ್ರ ವಿವಾದಕ್ಕೆ ಗುರಿಯಾಗಿದ್ದು, ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೆ ಸಿನೆಮಾ ಪ್ರಕಟಿಸಿದ್ದ ನಿರ್ದೇಶಕ ಉತ್ತಮ್ ಮಾಹೇಶ್ವರಿ ಕ್ಷಮೆ ಕೋರಿದ್ದಾರೆ.
‘ಆಪರೇಷನ್ ಸಿಂಧೂರ್’ ಎಂಬ ಶೀರ್ಷಿಕೆ ಹೊಂದಿರುವ ಚಲನಚಿತ್ರವನ್ನು ಶುಕ್ರವಾರ ರಾತ್ರಿ ನಿರ್ದೇಶಕ ಉತ್ತಮ್ ಮಾಹೇಶ್ವರಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದರು. ಈ ಚಿತ್ರವನ್ನು ನಿಕ್ಕಿ ವಿಕ್ಕಿ ಭಾಗ್ನಾನಿ ಫಿಲ್ಮ್ಸ್ ಹಾಗೂ ದಿ ಕಂಟೆಂಟ್ ಇಂಜಿನಿಯರ್ ಚಲನಚಿತ್ರ ನಿರ್ಮಾಣ ಸಂಸ್ಥೆಗಳು ನಿರ್ಮಿಸಲಿದ್ದವು.
ಈ ಚಲನಚಿತ್ರದ ನಿರ್ದೇಶಕರು ಯುದ್ಧದ ಪೋಷಾಕು ಧರಿಸಿ, ಕೈಯಲ್ಲಿ ಆಯುಧ ಹಿಡಿದುಕೊಂಡಿರುವ ಮಹಿಳಾ ಯೋಧರೊಬ್ಬರ ಪೋಸ್ಟರ್ ಅನ್ನೂ ಹಂಚಿಕೊಂಡಿದ್ದರು.
ಈ ದೃಶ್ಯವನ್ನು ಸ್ಫೋಟಗಳು ಸಂಭವಿಸುತ್ತಿರುವ, ಮುಳ್ಳು ತಂತಿ ಕಟ್ಟಿದ, ಸೇನಾ ಟ್ಯಾಂಕರ್ ಗಳು ಹಾಗೂ ಯುದ್ಧ ವಿಮಾನಗಳಿರುವ ಯುದ್ಧ ಭೂಮಿಯ ಹಿನ್ನೆಲೆಯಲ್ಲಿ ವಿನ್ಯಾಸಗೊಳಿಸಲಾಗಿತ್ತು.
ಆದರೆ, ಈ ಚಿತ್ರ ಪ್ರಕಟಣೆಯ ಸಮಯದ ಔಚಿತ್ಯವನ್ನು ಪ್ರಶ್ನಿಸಿ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ.
“ಸಿಂಧೂರ್’ ಅಥವಾ ‘ಆಪರೇಷನ್ ಸಿಂಧೂರ್’ ಶೀರ್ಷಿಕೆಯನ್ನು ವ್ಯಾವಹಾರಿಕ ಲಾಭಕ್ಕಾಗಿ ಯಾವುದೇ ಕಾರ್ಪೊರೇಟ್ ಕಂಪನಿಗಳು ಅಥವಾ ಚಲನಚಿತ್ರೋದ್ಯಮ ಬಳಸಿಕೊಳ್ಳಬಾರದು. ಕಾನೂನಾತ್ಮಕವಾಗಿ ಇದಕ್ಕೆ ಅವಕಾಶವಿದೆಯಾದರೂ, ನೈತಿಕವಾಗಿ ಇದು ತಪ್ಪು. ಕೆಲವು ವಿಷಯಗಳು ಗೌರವಕ್ಕೆ ಅರ್ಹವಾಗಿರುತ್ತವೆಯೆ ಹೊರತು, ಲಾಭ ಮಾಡಿಕೊಳ್ಳುವ ಅವಕಾಶಕ್ಕಾಗಿಯಲ್ಲ” ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಟೀಕಾಪ್ರಹಾರಗಳ ಬೆನ್ನಿಗೇ, “ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಇತ್ತೀಚಿನ ವೀರೋಚಿತ ಕಾರ್ಯಾಚರಣೆಯಾದ ‘ಆಪರೇಷನ್ ಸಿಂಧೂರ್’ನಿಂದ ಪ್ರೇರಣೆಗೊಂಡು, ಈ ಕಾರ್ಯಾಚರಣೆಯನ್ನು ಆಧರಿಸಿ ಇತ್ತೀಚೆಗೆ ಪ್ರಕಟಿಸಲಾಗಿದ್ದ ಚಿತ್ರದ ಕುರಿತು ನಾನು ಪ್ರಾಮಾಣಿಕವಾಗಿ ಕ್ಷಮೆ ಕೋರುತ್ತೇನೆ. ಇದು ಯಾರದೇ ಭಾವನೆಗಳನ್ನು ಘಾಸಿಗೊಳಿಸುವ ಅಥವಾ ಪ್ರಚೋದಿಸುವ ಉದ್ದೇಶವಾಗಿರಲಿಲ್ಲ” ಎಂದು ನಿರ್ದೇಶಕ ಉತ್ತಮ್ ಮಾಹೇಶ್ವರಿ ಸ್ಪಷ್ಟನೆ ನೀಡಿದ್ದಾರೆ.
ಎಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀಷರದ ಪಹಲ್ಗಾಮ್ ನಲ್ಲಿ 26 ಮಂದಿ ಪ್ರವಾಸಿಗರನ್ನು ಬಲಿ ಪಡೆದಿದ್ದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಬುಧವಾರ ಮುಂಜಾನೆ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಯಶಸ್ವಿಯಾಗಿ ವಾಯು ದಾಳಿ ನಡೆಸಿ, ಕನಿಷ್ಠ ಪಕ್ಷ ಒಂಬತ್ತು ಭಯೋತ್ಪಾದಕರ ಶಿಬಿರಗಳನ್ನು ನಾಶಗೊಳಿಸಿದ್ದವು.