ಒಂದು ಕ್ಷೌರದ ಹಿಂದಿನ ರೌರವ ಕಥೆ!

ಹೆಬ್ಬುಲಿ ಕಟ್ ಎನ್ನುವ ಹೆಸರು ನೋಡಿ ಇದು ನಟ ಸುದೀಪ್ ಅಭಿಮಾನಿಗಳಷ್ಟೇ ನೋಡಬಹುದಾದ ಚಿತ್ರ ಎಂದುಕೊಂಡರೆ ತಪ್ಪು. ಹೇರ್ ಸ್ಟೈಲ್ ಹೇಗಿರಬೇಕು ಎಂದು ನಿರ್ಧರಿಸಲು ಹಣವೊಂದೇ ಸಾಕು ಎಂದುಕೊಂಡವರೇ ಅಧಿಕ. ಆದರೆ ಇಂತಹ ನವ ಜನಾಂಗದ ಮುಂದೆ ಕ್ಷೌರದೊಳಗೂ ಜನಾಂಗ ನಿಂದನೆಯ ಆಳವೆಷ್ಟಿದೆ ಎಂದು ತೋರಿಸಿಕೊಡುವ ಚಿತ್ರ ಇದು.
ನಗರವಾಗಿ ಬದಲಾಗುತ್ತಿರುವ ಹಳ್ಳಿಯೊಂದರಲ್ಲಿ ನಡೆಯುವ ಹಸಿದವರ ಹಸಿಹಸಿಯಾದ ಕಥೆ. ಆದರೆ ಇಲ್ಲಿ ತಂತ್ರಜ್ಞಾನ ಬೆಳೆಯುತ್ತಿದ್ದರೂ ಜನರಲ್ಲಿ ಕೊಳೆಯುತ್ತಲೇ ಹೋದ ಜಾತಿ ಮನಸ್ಥಿತಿಗೆ ಹಿಡಿದ ಕನ್ನಡಿ ಈ ಸಿನೆಮಾ. ಮನೆಯಲ್ಲಿ, ಶಾಲೆಯಲ್ಲಿ ‘ವಿನ್ಯಾ’ ಎಂದೇ ಕರೆಯಲ್ಪಡುವ ವಿನಯನ ಬಾಳಲ್ಲಿ ನಡೆಯುವ ಕಥೆ ಇದು. ವಿನಯ ದಲಿತರ ಮನೆಯ ಹುಡುಗ. ಪ್ರೌಢಶಾಲೆಯಲ್ಲಿ ತನ್ನ ಸಹಪಾಠಿಯಾದ ಗೌಡರ ಮನೆ ಹುಡುಗಿ ರೇಖಾ ಎಂದರೆ ಇವನಿಗೆ ಒಂದು ಆಕರ್ಷಣೆ. ಈ ಬಗ್ಗೆ ಆತ್ಮೀಯವಾಗಿ ಹೇಳಿಕೊಳ್ಳಲು ಸಿಗುವ ಸ್ನೇಹಿತನೆಂದರೆ ತನಗಿಂತ ಏಳೆಂಟು ವರ್ಷ ಹಿರಿಯನಾದ ಪಂಕ್ಚರ್ ಅಂಗಡಿ ರಫೀಕ್. ಇಷ್ಟಕ್ಕೇ ಇದು ‘ಚೆಲುವಿನ ಚಿತ್ತಾರ’ ಎಂದುಕೊಳ್ಳಬಾರದು. ಅಥವಾ ಮರಾಠಿಯ ‘ಸೈರಾಟ್’ ಕೂಡ ಅಲ್ಲ. ಯಾಕೆಂದರೆ ಈ ಹುಡುಗನದು ಪ್ರೀತಿ ಪ್ರೇಮದ ವಯಸ್ಸೇ ಅಲ್ಲ. ಬರೀ ಹೈಸ್ಕೂಲು ಹುಡುಗನ ಹಗಲುಗನಸು.
ಊರಿನಲ್ಲಿ ಬಸನಗೌಡ ಅಂದರೆ ಬಹಳ ಭಯ, ಮರ್ಯಾದೆ. ಈತನ ತಂಗಿಯೇ ವಿನಯನ ಕ್ಲಾಸ್ಮೇಟ್ ರೇಖಾ. ಸುದೀಪ್ರ ‘ಹುಚ್ಚ’ ಸಿನೆಮಾದ ನಾಯಕಿ ರೇಖಾಳಂತೆ ಈ ಹುಡುಗಿ ರೇಖಾ ಕೂಡ ಪುಸ್ತಕದ ಮಧ್ಯೆ ನವಿಲುಗರಿ ಇಟ್ಟಿರುತ್ತಾಳೆ. ಅದರೊಂದಿಗೆ ಹೆಬ್ಬುಲಿ ಸಿನೆಮಾದ ಸುದೀಪ್ ಫೋಟೊ ಕೂಡ ಇರುತ್ತದೆ. ಈ ಹುಡುಗಿಗೆ ಕಿಚ್ಚನೆಂದರೆ ಇಷ್ಟ ಎಂದು ಅರಿವಾದೊಡನೆ ಅಂಥದೇ ಹೇರ್ಕಟ್ ಮಾಡಿಸುವ ಕನಸು ವಿನಯನದ್ದಾಗುತ್ತದೆ. ಆದರೆ ಇದಕ್ಕಾಗಿ ದುಡ್ಡು ಹೊಂದಿಸಿಕೊಂಡರೂ ಕೂಡ ಚೆನ್ನನ ಕ್ಷೌರದ ಅಂಗಡಿಯೊಳಗೆ ಕಾಲಿಡುವುದು ಎಷ್ಟು ದುಬಾರಿ ಎನ್ನುವುದನ್ನು ಚಿತ್ರದ ಕ್ಲೈಮ್ಯಾಕ್ಸ್ ತೋರಿಸಿ ಕೊಡುತ್ತದೆ.
ವಿನಯನ ಪಾತ್ರದಲ್ಲಿ ಮೌನೇಶ್ ನಟರಂಗ ಭರವಸೆಯ ಅಭಿನಯ ನೀಡಿದ್ದಾರೆ. ವಿನಯನ ತಂದೆಯಾಗಿ ‘ಫೋಟೊ’ ಖ್ಯಾತಿಯ ಮಹಾದೇವ ಹಡಪದ್ ಕಣ್ಣೋಟದಲ್ಲೇ ಎಷ್ಟೋ ಮಾತನಾಡುತ್ತಾರೆ. ಪಂಕ್ಚರ್ ಅಂಗಡಿ ರಫೀಕ್ನಾಗಿ, ಸುದೀಪ್ ಪಕ್ಕಾ ಅಭಿಮಾನಿಯಾಗಿ ಪುನೀತ್ ಶೆಟ್ಟಿ ಅಭಿನಯ ಆಕರ್ಷಕ. ರೇಖಾಳಾಗಿ ಅನನ್ಯಾ ನಿಹಾರಿಕಾ ಸೇರಿದಂತೆ ಪ್ರತಿಯೊಬ್ಬರೂ ಪಾತ್ರಕ್ಕೆ ಹೊಂದಿಕೊಂಡ ಆಯ್ಕೆ. ನಿರ್ದೇಶಕ ಭೀಮರಾವ್ಗೆ ಇದು ಮೊದಲ ಚಿತ್ರ. ಆದರೆ ಎಲ್ಲ ವಿಭಾಗದಿಂದ ನೈಜ ಕೆಲಸ ತೆಗೆಸುವಲ್ಲಿ ಯಶಸ್ವಿಯಾಗಿದ್ದಾರೆ. ಅನಂತ್ ಶಾಂದ್ರೇಯ ಸಂಭಾಷಣೆಯಲ್ಲಿ ಸಹಜತೆಯಿದೆ. ಉತ್ತರ ಕರ್ನಾಟಕದ ಸ್ಥಳೀಯ ಸೊಗಡಿನ ಮಾತಿನ ಮಿಂಚುಗಳೇ ಪ್ರೇಕ್ಷಕರನ್ನು ಚಿತ್ರದೊಳಗೆ ತಂದು ಕೂರಿಸುತ್ತವೆ. ನವನೀತ್ ಶ್ಯಾಮ್ ಹಿನ್ನೆಲೆ ಸಂಗೀತ ದೃಶ್ಯಗಳಿಗೆ ಬೆಂಬಲವಾದ ರೀತಿ ಅಮೋಘ. ಕಾಲ್ಪನಿಕ ಮತ್ತು ಸಾಹಸ ಸನ್ನಿವೇಶಗಳಿಗೆ ತಕ್ಕಂತೆ ಬದಲಾಗುವ ದೀಪಕ್ ಯರಗೇರ ಛಾಯಾಗ್ರಹಣದ ರೀತಿ ಆಕರ್ಷಕ.
ಹಳ್ಳಿಯೊಂದರಲ್ಲಿ ಕಲ್ಲು ಎತ್ತುವ ಸ್ಪರ್ಧೆಯ ಮೂಲಕ ಸರಳವಾಗಿ ಶುರುವಾಗುವ ಚಿತ್ರ. ಆದರೆ ಜಾತಿ, ಧರ್ಮದ ಹೆಸರಲ್ಲಿ ಬದುಕಿಗೆ ಚಪ್ಪಡಿ ಕಲ್ಲನ್ನೇ ಹಾಕುವ ದೃಶ್ಯದೊಂದಿಗೆ ಮಾರ್ಮಿಕವಾಗಿ ಅಂತ್ಯ ಕಾಣುತ್ತದೆ. ಕೊನೆಯಲ್ಲಿ ಇದು ಸದ್ಯದ ಸತ್ಯವೆಂದು ಸಾರುವ ಇಂತಹ ಅನೇಕ ಘಟನೆಗಳ ಪತ್ರಿಕಾ ವರದಿಗಳು ಪರದೆಯ ಮೇಲೆ ರಾಚುತ್ತವೆ.