ಸಂತ ಅಲೋಶಿಯಸ್ ರೆಕ್ಟರ್ ಮೆಲ್ವಿನ್ ಪಿಂಟೊಗೆ ಭಾವಪೂರ್ಣ ವಿದಾಯ

ಮಂಗಳೂರು, ಎ.13: ಮೂರು ದಿನಗಳ ಹಿಂದೆ ನಿಧನರಾಗಿದ್ದ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ರೆಕ್ಟರ್ ವಂ. ಮೆಲ್ವಿನ್ ಜೋಸೆಫ್ ಪಿಂಟೊ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವು ನಗರದ ಫಾತಿಮಾ ರೆಟ್ರೀಟ್ ಹೌಸ್ ಆವರಣದ ಪ್ರಾರ್ಥನಾ ಮಂದಿರಲ್ಲಿ, ಮಂಗಳೂರು, ಉಡುಪಿ, ಕಾರವಾರ ಮತ್ತು ಮೈಸೂರು ಧರ್ಮ ಪ್ರಾಂತ್ಯದ ನಾಲ್ವರು ಧರ್ಮಾಧ್ಯಕ್ಷರುಗಳ ನೇತೃತ್ವದಲ್ಲಿ ಸೋಮವಾರ ದಿವ್ಯ ಬಲಿಪೂಜೆಯೊಂದಿಗೆ ನಡೆಯಿತು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ. ಡಾ.ಪೀಟರ್ ಪಾವ್ಲ್ ಸಲ್ಡಾನಾ ಪ್ರಧಾನ ಅರ್ಚಕರಾಗಿ ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ. ಡಾ. ಫ್ರಾನ್ಸಿಸ್ ಸೆರಾವೊ ಮುಖ್ಯ ಪ್ರವಚನಕಾರರಾಗಿ ಬಲಿಪೂಜೆಗೆ ನೇತೃತ್ವ ನೀಡಿದರು.
ತಮ್ಮ ಪ್ರವಚನದಲ್ಲಿ ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಯೇಸುಸಭೆಯ ವಂ. ಡಾ. ಫ್ರಾನ್ಸಿಸ್ ಸೆರಾವೊ ವಂ. ಮೆಲ್ವಿನ್ ಕ್ರಿಸ್ತನಿಗೆ ಸಾಕ್ಷಿಯಾಗಿ ಬದುಕಿದರು ಎಂದರು.
ಕೋವಿಡ್ನಂತಹ ಸಂಕಷ್ಟ ಸಮಯದಲ್ಲಿ ಅವರು ನೀಡಿದ ನೇತೃತ್ವ ಮತ್ತು ಮೆರೆದ ಮಾನವೀಯತೆ ಅನುಕರ ಣೀಯ. ಅವರ ಆದರ್ಶ ಮತ್ತು ಮಾನವೀಯ ಗುಣಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ನೀಡಬಹುದಾದ ನೈಜ ಶ್ರದ್ಧಾಂಜಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಚರ್ಚ್ ಆವರಣದಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ. ಜೆರಾಲ್ದ್ ಐಸಾಕ್ ಲೋಬೊ ಮತ್ತು ದಫನ ಭೂಮಿಯಲ್ಲಿ ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ. ಡಾ. ದುಮಿಂಗ್ ಡಾಯಸ್ ಸಂಸ್ಕಾರದ ಪ್ರಾರ್ಥನಾ ವಿಧಿಗೆ ನೇತೃತ್ವ ನೀಡಿದರು.
ಬಲಿಪೂಜೆಯ ನಂತರ ಯೇಸು ಧರ್ಮಸಭೆಯ ಪರವಾಗಿ ಸಹಪಾಠಿ ವಂ. ಜೋಸೆಫ್ ಲೋಬೊ, ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ಪರವಾಗಿ ಎನ್. ಜಿ. ಮೋಹನ್, ಕುಟುಂಬದ ಪರವಾಗಿ ಸಹೋದರಿ ವಿನಯಾ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಪರವಾಗಿ ಧರ್ಮಾಧ್ಯಕ್ಷ ವಂ. ಡಾ.ಪೀಟರ್ ಪಾವ್ಲ್ ಸಲ್ಡಾನಾ ವಂ. ಮೆಲ್ವಿನ್ ಜೋಸೆಫ್ ಪಿಂಟೊ ಅವರಿಗೆ ನುಡಿ ನಮನ ಸಲ್ಲಿಸಿದರು.
ಅಂತಿಮ ಯಾತ್ರೆಗೂ ಮುನ್ನ ಕರ್ನಾಟಕ ವಿಧಾನಸಭೆಯ ಸ್ವೀಕರ್ ಯು.ಟಿ. ಖಾದರ್ ಆಗಮಿಸಿ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಯೇಸು ಸಭೆಯ ಪ್ರಾಂತೀಯ ಮುಖ್ಯಸ್ಥರಾದ ವಂ, ಡಯ್ನೋಶಿಯಸ್ ವಾಸ್ ಉಪಸ್ಥಿತರಿದ್ದರು. ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪ ಕುಲಸಚಿವ ವಂ. ಡಾ. ಮೆಲ್ವಿನ್ ಡಿಕುನ್ಹಾ ವಂದಿಸಿದರು.
ಎ.10ರಂದು ನಿಧನರಾಗಿದ್ದ ಮೆಲ್ವಿನ್ ಜೋಸೆಫ್ ಪಿಂಟೊ ಅವರ ಪಾರ್ಥಿವ ಶರೀರವನ್ನು ಪೂರ್ವಾಹ್ನ ಸಂತ ಆಲೋಶಿಯಸ್ ಕಾಲೇಜು ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ವಿಶ್ವವಿದ್ಯಾಲಯದ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ, ಸಾರ್ವಜನಿಕರು ಅಗಲಿದ ವಂ. ಮೆಲ್ವಿನ್ ಜೋಸೆಫ್ ಪಿಂಟೊ ಅವರಿಗೆ ಅಂತಿಮ ನಮನ ಸಲ್ಲಿಸಿ, ಭಾವಪೂರ್ಣ ವಿದಾಯ ಕೋರಿದರು.






