ಎಸೆಸೆಲ್ಸಿ ಫಲಿತಾಂಶ| ನಿರೀಕ್ಷೆಗೆ ಮಿಗಿಲಾಗಿ ಅಂಕ ಲಭಿಸಿದೆ, ಸಂತಸವಾಗಿದೆ: ಆದ್ಯ

ಉಪ್ಪಿನಂಗಡಿ: ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ರಲ್ಲಿ 622 ಅಂಕ ಗಳಿಸಿ ರಾಜ್ಯಕ್ಕೆ 4 ನೇ ಸ್ಥಾನಿಯಾಗಿ, ದ.ಕ ಜಿಲ್ಲೆಗೆ ದ್ವಿತೀಯ ಸ್ಥಾನಿಯಾಗಿ, ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನಿಯಾಗಿ ಹೊರ ಹೊಮ್ಮಿದ ದ.ಕ ಜಿಲ್ಲೆಯ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ ಆದ್ಯ ಪರೀಕ್ಷಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪರೀಕ್ಷೆಯನ್ನು ಸುಲಭವಾಗಿಸಲು ನಾನು ಕಲಿತ ಇಂದ್ರಪ್ರಸ್ಥ ಶಾಲೆಯ ಎಲ್ಲಾ ಶಿಕ್ಷಕರ ಪ್ರೋತ್ಸಾಹವೇ ಕಾರಣ . ಶಾಲಾ ರಜೆಯಲ್ಲೂ ಶಿಕ್ಷಕರಿಗೆ ಫೋನಾಯಿಸಿ ಸಂದೇಹದ ಬಗ್ಗೆ ವಿಚಾರಿಸಿದರೆ ಸ್ಪಂದಿಸುತ್ತಿದ್ದರು. ಮನೆಯಲ್ಲೂ ಹೆತ್ತವರು ಕಲಿಕೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸುತ್ತಿದ್ದರು. ಶಾಲೆಯಲ್ಲಿಯೂ ಮನೆಯಲ್ಲಿಯೂ ಎಲ್ಲರೂ ನನ್ನ ಬಗ್ಗೆ ಅತಿ ಎನಿಸುವಷ್ಠು ನಿರೀಕ್ಷೆ ಇರಿಸಿದ್ದರು. ಪರಿಣಾಮ ನನಗೆ ಅವರೆಲ್ಲರ ನಿರೀಕ್ಷೆಯೇ ಭಾರವೆನಿಸುತ್ತಿತ್ತು. ಪರೀಕ್ಷೆಯನ್ನು ಚೆನ್ನಾಗಿ ಬರೆದಿದ್ದೆ. ಇದೀಗ ನಾನು ನಿರೀಕ್ಷಿಸದ 622 ಅಂಕ ಲಭಿಸಿ ನನ್ನ ಮನಸ್ಸು ಹಗುರವಾಗಿದೆ. ಆತ್ಮತೃಪ್ತಿ ಲಭಿಸಿದೆ. ವರ್ಷವಿಡೀ ಶಾಲೆಯಲ್ಲಿ ಕಲಿತದ್ದನ್ನು ಮನೆಯಲ್ಲಿ ಪುನರ್ ಮನನ ಮಾಡಿದರೆ ಎಲ್ಲರಿಗೂ ಈ ಮಟ್ಟದ ಸಾಧನೆ ತೋರಬಹುದು. ವಿಜ್ಞಾನವೊಂದರಲ್ಲಿ ನನಗೆ 97 ಅಂಕ ಲಭಿಸಿದ್ದು ಬಿಟ್ಟರೆ ಉಳಿದ ಎಲ್ಲಾ ಪಠ್ಯಗಳಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದೇನೆ. ಮುಂದಕ್ಕೆ ನನಗೆ ವಾಣಿಜ್ಯ ವಿಭಾಗದಲ್ಲಿ ಕಲಿಕೆಯನ್ನು ಮುಂದುವರೆಸಬೇಕೆಂಬ ಕನಸಿದೆ. ಸಿಎ , ಯುಪಿಎಸ್ಸಿ ಯಂತಹ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ಹಂಬಲವಿದೆ ಎಂದು ತಿಳಿಸಿದರು.




