ಬದ್ರ್ ಕಮಿಟಿಯ ಶ್ರಮ ಹಿರಿಯರ ವ್ಯಕ್ತಿತ್ವದ ಪ್ರತೀಕ: ಸ್ಪೀಕರ್ ಯು.ಟಿ. ಖಾದರ್

ಕೊಣಾಜೆ: ಖಿದ್ಮತುಲ್ ಇಸ್ಲಾಮ್ ಬದ್ರ್ ಕಮಿಟಿ ಶಾಂತಿನಗರ ನಡುಪದವು ಇದರ 40 ನೇ ವಾರ್ಷಿಕ ಮತ್ತು ಬದ್ರ್ ಟವರ್ ಕಟ್ಟಡ ಉದ್ಘಾಟನೆ ಹಾಗೂ ಏಕದಿನ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಗುರುವಾರ ನಡುಪದವು ಮಸೀದಿ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿದಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು, ಮಕ್ಕಳಿಗೆ ಮೌಲ್ಯ ಯುತ ಶಿಕ್ಷಣ, ಧರ್ಮಗುರುಗಳಿಗೆ ವಸತಿ, ಆರ್ಥಿಕ ಸಮಸ್ಯೆ ನಿವಾರಣೆಗೆ ಕೈಗೊಂಡ ಯೋಜನೆಗಳ ಮೂಲಕ ನಡುಪದವು ಮಸೀದಿ ಇತರ ಜಮಾಅತ್ ಗಳಿಗೆ ಮಾದರಿ, ಬದ್ರ್ ಕಮಿಟಿಯ ಶ್ರಮ ಹಿರಿಯರ ವ್ಯಕ್ತಿತ್ವದ ಪ್ರತೀಕ ಎಂದು ಹೇಳಿದರು.
ಬೆಳ್ತಂಗಡಿ ದಾರುಸ್ಸಲಾಂ ಅಧ್ಯಕ್ಷ ಸಯ್ಯದ್ ಅಬಿದೀನ್ ಜಿಫ್ರಿ ತಂಙಳ್ 'ಬದ್ರ್ ಟವರ್' ಕಟ್ಟಡವನ್ನು ಉದ್ಘಾಟಿಸಿ, ಪ್ರಸ್ತುತ ದಿನಗಳಲ್ಲಿ ಯುದ್ಧದಿಂದಾಗಿ ವಿಶ್ವವೇ ಸಂಕಷ್ಟದಲ್ಲಿದ್ದು ಜನರು ವಿವಿಧ ಸಮಸ್ಯೆಗಳನ್ನು ಎದುರಿಸಿದ್ದಾರೆ, ಯಾವುದೇ ಕಾಲಘಟ್ಟದಲ್ಲೂ ಕಷ್ಟ ಎದುರಾದರೆ ದೇವನ ಮೇಲೆ ವಿಶ್ವಾಸವಿಟ್ಟು ಜೀವನ ಸಾಗಿಸಿದರೆ ಜಯಗಳಿಸಲು ಸಾಧ್ಯ ಎಂದರು.
ನಡುಪದವು ಅಲ್-ಉಮರ್ ಜುಮಾ ಮಸೀದಿಯ ಖತೀಬ್ ಜುನೈದ್ ಸಅದಿ ಅಲ್ ಅಫ್ಳಲಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕ ಗುರು ನಿಝಾಮುದ್ದೀನ್ ಅಝ್ಹರಿ ಕುಮ್ಮನಂ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಪೊಯ್ಯತ್ತಬೈಲ್ ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಬ್ದುಲ್ ಜಬ್ಬಾರ್ ಸಖಾಫಿ ಧಾರ್ಮಿಕ ಪ್ರವಚನ ಉದ್ಘಾಟಿಸಿದರು.
ಮಂಜೇಶ್ವರ ಶಾಸಕ ಕೆಎಂ ಅಶ್ರಫ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಸೀದಿಯ ಮಾಜಿ ಅಧ್ಯಕ್ಷ ಅಬ್ದುಲ್ ನಾಸೀರ್ ಕೆಕೆ ಅವರು ಅಶಯದ ಮಾತುಗಳನ್ನಾಡುತ್ತಾ, ಮದ್ರಸದ ಗುರುಗಳು ಆರ್ಥಿಕವಾಗಿ ಬಹಳ ಹಿಂದುಳಿದಿದ್ದಾರೆ. ರಾಜ್ಯದ ಎಲ್ಲಾ ಮದ್ರಸದ ಗುರುಗಳಿಗೆ ಸರ್ಕಾರದ ವತಿಯಿಂದ ಅನುದಾನ ಒದಗುವಂತೆ ಸಹಾಯ ಮಾಡಬೇಕೆಂದು ಯು.ಟಿ.ಖಾದರ್ ಅವರಲ್ಲಿ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಬಾಳೆಪುಣಿ ಗ್ರಾಪಂ ಮಾಜಿ ಉಪಾಧ್ಯಕ್ಷ ಸಿ.ಎಂ.ಶರೀಫ್ ಪಟ್ಟೋರಿ, ಮದ್ರಸಾ ಅಧ್ಯಾಪಕರಾದ ಮುಹಮ್ಮದ್ ಹನೀಫ್ ಫೈಝಿ, ಹೈದರ್ ಲತೀಫಿ, ರಶೀದ್ ಇರ್ಫಾನಿ, ಸಯ್ಯದ್ ಬದ್ರುದ್ದೀನ್ ಹೈದ್ರೋಸ್ ತಂಙಳ್, ಉಸ್ಮಾನ್ ಉಸ್ತಾದ್, ಕುಂಞಿ ಹಾಜಿ, ಉಮ್ಮರ್ ಸಅದಿ ಉಸ್ತಾದ್, ಎಂ.ಪಿ.ಮಹಮ್ಮದ್, ಕೆಎಂಎಸ್ ಮಹಮ್ಮದ್ ಶಾಫಿ, ಟಿ.ಆರ್.ಅಬ್ದುಲ್ ಖಾದರ್, ಡಾ.ಇಸ್ಮಾಯಿಲ್, ಖಿದ್ಮತುಲ್ ಇಸ್ಲಾಂ ಬದ್ರ್ ಕಮಿಟಿ ಅಧ್ಯಕ್ಷ ನಝೀರ್ ಕೆ.ಎಂ., ಖಾದರ್ ಪಟ್ಟೋರಿ, ಕೊಣಾಜೆ ಗ್ರಾ.ಪಂ.ಮಾಜಿ ಅಧ್ಯಕ್ಷ ನಝರ್ ಷಾ ಪಟ್ಟೋರಿ ಮೊದಲಾದವರು ಉಪಸ್ಥಿತರಿದ್ದರು.
ಮಸೀದಿಯ ಮಾಜಿ ಅಧ್ಯಕ್ಷ ಇಬ್ರಾಹಿಂ ನಡುಪದವು ಸ್ವಾಗತಿಸಿದರು. ಅಧ್ಯಕ್ಷ ಎನ್.ಎಸ್.ಅಬ್ದುಲ್ ನಾಸಿರ್ ನಡುಪದವು ಪ್ರಾಸ್ತಾವಿಕವಾಗಿ ಮಾತನಾಡಿದರು. ಬದ್ರ್ ಕಮಿಟಿ ಕಾರ್ಯದರ್ಶಿ ಉಮರ್ ಸ ಅದಿ ವಂದಿಸಿದರು. ನಿಝಾಮ್ ಅನ್ಸಾರಿ ಕಾರ್ಯಕ್ರಮ ನಿರೂಪಿಸಿದರು.






