ಮಂಗಳೂರು | ಹಿಂದೂ ದೇವರ ಬಗ್ಗೆ ಅವಹೇಳನ ಆರೋಪ; ಶಿಕ್ಷಕಿಯನ್ನು ಅಮಾನತುಗೊಳಿಸಿದ ಶಾಲಾ ಆಡಳಿತ ಮಂಡಳಿ
![ಮಂಗಳೂರು | ಹಿಂದೂ ದೇವರ ಬಗ್ಗೆ ಅವಹೇಳನ ಆರೋಪ; ಶಿಕ್ಷಕಿಯನ್ನು ಅಮಾನತುಗೊಳಿಸಿದ ಶಾಲಾ ಆಡಳಿತ ಮಂಡಳಿ ಮಂಗಳೂರು | ಹಿಂದೂ ದೇವರ ಬಗ್ಗೆ ಅವಹೇಳನ ಆರೋಪ; ಶಿಕ್ಷಕಿಯನ್ನು ಅಮಾನತುಗೊಳಿಸಿದ ಶಾಲಾ ಆಡಳಿತ ಮಂಡಳಿ](https://www.varthabharati.in/h-upload/2024/02/12/1243146-img5653.webp)
ಮಂಗಳೂರು: ತರಗತಿಯಲ್ಲಿ ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪದಲ್ಲಿ ನಗರದ ವೆಲೆನ್ಸಿಯಾದ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಎಂಬವರನ್ನು ಶಾಲಾ ಆಡಳಿತ ಮಂಡಳಿ ಸೇವೆಯಿಂದ ಅಮಾನತುಗೊಳಿಸಿದೆ.
ಶಿಕ್ಷಕಿ ವಿರುದ್ಧ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಶಾಲಾ ಆಡಳಿತ ಮಂಡಳಿಯು ಅಮಾನತುಗೊಳಿಸುವ ನಿರ್ಧಾರ ಕೈಗೊಂಡಿದೆ. ಘಟನೆಯ ಬಗ್ಗೆ ಶಿಕ್ಷಣ ಇಲಾಖೆಯು ಆಂತರಿಕ ತನಿಖೆ ನಡೆಸಲಿದೆ ಎಂದು ತಿಳಿದು ಬಂದಿದೆ.
ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೋಮವಾರ ಸಂಜೆ ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು. ಶಿಕ್ಷಣ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
ಫೆ.8ರಂದು ಶಿಕ್ಷಕಿ ಪ್ರಭಾ ಶಾಲೆಯಲ್ಲಿ ʼWork is worship’ ಎಂಬ ವಿಷಯದ ಪಾಠ ಮಾಡುತ್ತಿದ್ದ ವೇಳೆ ಆಯೋಧ್ಯೆಯ ಶ್ರೀರಾಮ ಮಂದಿರ ಮತ್ತು ಶ್ರೀರಾಮನ ಬಗ್ಗೆ ನಿಂದಿಸಿರುವುದಾಗಿ ಆರೋಪಿಸಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಶಿಕ್ಷಕಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಸೋಮವಾರ ಮಂಗಳೂರು ನಗರದ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಸ್ಥಳಕ್ಕೆ ಆಗಮಿಸಿದ್ದರು. ಅವರ ನೇತೃತ್ವದಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳ ಪೋಷಕರು ಹಾಗೂ ಕಾರ್ಯಕರ್ತರು ಶಾಲೆಗೆ ಮುತ್ತಿಗೆಗೆ ಯತ್ನ ನಡೆಸಿದ್ದರು. ಆದರೆ ಈ ವೇಳೆ ಪೊಲೀಸರು ಶಾಲೆಯ ಗೇಟ್ ಬಳಿ ಶಾಸಕ ಹಾಗೂ ಪೋಷಕರನ್ನು ತಡೆದಿದ್ದರು.
ಮುಖ್ಯ ಶಿಕ್ಷಕಿಯ ಸ್ಪಷ್ಟನೆ
ಜೆಪ್ಪು ಸಂತ ಜೆರೋಸಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿರುವ ಇತ್ತೀಚಿನ ಘಟನೆಯ ಹಿನ್ನೆಲೆ ಯಲ್ಲಿ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ತಮ್ಮ ಸಂಸ್ಥೆಯಿಂದ ವಜಾಗೊಳಿಸಲಾಗಿದೆ ಹಾಗೂ ಅವರ ಸ್ಥಾನಕ್ಕೆ ಬೇರೆ ಶಿಕ್ಷಕರನ್ನು ನೇಮಿಸಲಾಗುವುದು ಎಂದು ಶಾಲಾ ಮುಖ್ಯ ಶಿಕ್ಷಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದುವರೆಗೂ ಒಳ್ಳೆಯ ಮನೋಭಾವ ಹಾಗೂ ಶ್ರೇಷ್ಠ ಗುಣಮಟ್ಟದ ಶಿಕ್ಷಣದಿಂದ ನಮ್ಮ ನಡುವೆ ಉತ್ತಮ ಸಂಬಂಧವನ್ನು ನಿರ್ಮಿಸಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
‘‘ಜಿಲ್ಲಾಮಟ್ಟದ ಅಧಿಕಾರಿಗಳಿಂದ ನಡೆಯುತ್ತಿರುವ ತನಿಖೆಯು ಪಾರದರ್ಶಕತೆಯಿಂದ ಕೂಡಿರಲು ನಮ್ಮ ಸಹಕಾರವನ್ನು ಒದಗಿಸಲು ಶಿಕ್ಷಕಿಯನ್ನು ವಜಾಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾವು ಈ ತನಿಖೆಯ ಅಂತಿಮ ಆದೇಶಕ್ಕೆ ಬದ್ಧರಾಗಿದ್ದೇವೆ. ಮಕ್ಕಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಪೋಷಕರಿಂದ ಇದೇ ರೀತಿ ಸಹಕಾರವನ್ನು ನಿರೀಕ್ಷಿಸುತ್ತೇವೆ’’ ಎಂದು ಹೇಳಿದ್ದಾರೆ.
‘‘ಸಂತ ಜೆರೋಸಾ ಶಾಲೆ 60 ವರ್ಷಗಳ ಇತಿಹಾಸವನ್ನು ಹೊಂದಿದ್ದು ಮತ್ತು ಈವರೆಗೂ ಈ ತರಹದ ಯಾವುದೇ ಘಟನೆಗಳು ನಡೆದಿಲ್ಲ. ನಾವು ಸಾಂವಿಧಾನಿಕ ಸಿದ್ಧಾಂತಗಳಿಗೆ ಬೆಲೆ ಕೊಟ್ಟು ಮತ್ತು ಅವುಗಳಿಗೆ ಬದ್ಧರಾಗಿ ಇರುತ್ತೇವೆ. ನಾವು ಎಲ್ಲ ಧರ್ಮಗಳು, ನಂಬಿಕೆಗಳು ಮತ್ತು ಆಚರಣೆಗಳನ್ನು ಸಮಾನವಾಗಿ ಸ್ವೀಕರಿಸುತ್ತೇವೆ. ಈ ದುರದೃಷ್ಟಕರ ಘಟನೆಯು ನಮ್ಮ ಮಧ್ಯೆ ತಾತ್ಕಾಲಿಕ ಅಪನಂಬಿಕೆಯನ್ನು ಸೃಷ್ಟಿಸಿದ್ದು ನಮ್ಮ ಈ ನಡೆಯು ನಿಮ್ಮ ಸಹಕಾರದಿಂದ ಈ ನಂಬಿಕೆಯನ್ನು ಪುನಃ ನಿರ್ಮಿಸುವುದಕ್ಕೆ ಸಹಕಾರಿಯಾಗಲಿದೆ ಮತ್ತು ನಾವೆಲ್ಲ ನಮ್ಮ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ, ಒಟ್ಟಾಗಿ ಶ್ರಮಿಸೋಣ" ಎಂದು ವಿದ್ಯಾರ್ಥಿಗಳ ಪೋಷಕರಿಗೆ ಮಾಡಿರುವ ಮನವಿಯಲ್ಲಿ ಮುಖ್ಯ ಶಿಕ್ಷಕಿ ತಿಳಿಸಿದ್ದಾರೆ.