ಅಜಿಲಮೊಗರು: ಕಾಮಗಾರಿ ಪ್ರಾರಂಭಿಸಿ 8 ವರ್ಷ ಕಳೆದರೂ ಸಾಕಾರಗೊಳ್ಳದ ‘ಸೌಹಾರ್ದ ಸೇತುವೆ’!
ಸೇತುವೆ ಪೂರ್ಣಗೊಂಡಲ್ಲಿ 4 ತಾಲೂಕುಗಳ 113 ಗ್ರಾಮಗಳಿಗೆ ಅನುಕೂಲ

ಬಂಟ್ವಾಳ: ತಾಲೂಕಿನ ನೇತ್ರಾವತಿ ನದಿ ದಂಡೆಯ ಅಜಿಲಮೊಗರು ಗ್ರಾಮದ ಒಂದು ದಡದಲ್ಲಿ ಹಝ್ರತ್ ಸೈಯದ್ ಬಾಬಾ ಫಕ್ರುದ್ದೀನ್ ಜುಮಾ ಮಸೀದಿ ಮತ್ತು ಇನ್ನೊಂದು ದಡದಲ್ಲಿ ಕಡೇಶಿವಾಲಯ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯವಿದೆ. ಈ ಎರಡೂ ಧಾರ್ಮಿಕ ಕ್ಷೇತ್ರಗಳ ನಡುವೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಸಾಮರಸ್ಯದ ಕೊಂಡಿಯಾಗಿ ನೇತ್ರಾವತಿ ನದಿಯಲ್ಲಿ ನಿರ್ಮಿಸಲು ಉದ್ದೇಶಿಸಿದ ಮಹತ್ವಾಕಾಂಕ್ಷೆಯ ‘ಸೌಹಾರ್ದ ಸೇತುವೆ’ ಕಾಮಗಾರಿ ಆರಂಭಗೊಂಡು ಸುಮಾರು ೮ ವರ್ಷಗಳೇ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ.
ಈ ಯೋಜನೆಗೆ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ೧೯.೮೪ ಕೋಟಿ ರೂ. ಮೊತ್ತದ ಅನುದಾನ ಮಂಜೂರಾಗಿದೆ. ೧೦.೫೦ ಮೀ. ಅಗಲ ಮತ್ತು ೩೭೮ ಮೀ.ಉದ್ದದ ಸಂಪರ್ಕ ರಸ್ತೆ ಇದ್ದಾಗಿದ್ದು, ನೇತ್ರಾವತಿ ನದಿಗೆ ಅಡ್ಡವಾಗಿ ನಿರ್ಮಿಸಲಾಗುವ ಸೌಹಾರ್ದ ಸೇತುವೆ ಎರಡು ವರ್ಷಗಳಲ್ಲಿ ಮುಗಿಯಬೇಕಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ೮ ವರ್ಷಗಳು ಕಳೆದರೂ ಅದಿನ್ನೂ ಸಾಕಾರಗೊಂಡಿಲ್ಲ ಎಂದು ಇಲ್ಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೇತುವೆಯ ಶೇ.೮೦ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಕೇವಲ ಎರಡು ಪಿಲ್ಲರ್ಗಳಷ್ಟೇ ಬಾಕಿ ಇವೆ.
113 ಗ್ರಾಮಗಳನ್ನು ಬೆಸೆಯುವ ಸೇತುವೆ
ನನೆಗುದಿಗೆ ಬಿದ್ದಿರುವ ‘ಸೌಹಾರ್ದ ಸೇತುವೆ’ ಪೂರ್ಣಗೊಳ್ಳುವುದರಿಂದ ಬಂಟ್ವಾಳ, ಬೆಳ್ತಂಗಡಿ, ಕಾರ್ಕಳ ಮತ್ತು ಮೂಡುಬಿದಿರೆ ತಾಲೂಕುಗಳ ೧೧೩ ಗ್ರಾಮಗಳ ಜನತೆಗೆ ಅನುಕೂಲವಾಗಲಿದೆ. ಆದರೆ ಈಗ ಅಜಿಲಮೊಗರು ಮಸೀದಿಗೆ ಬಂಟ್ವಾಳ-ಮಣಿಹಳ್ಳ ರಾಷ್ಟ್ರೀಯ ಹೆದ್ದಾರಿಯಿಂದ ಸರಪಾಡಿ-ಅಲ್ಲಿಪಾದೆ ರಸ್ತೆ ಮೂಲಕ ಸಾಗಬೇಕು. ಕಡೇಶಿವಾಲಯ ಕ್ಷೇತ್ರಕ್ಕೆ ಬಿ.ಸಿ.ರೋಡು-ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಮಧ್ಯೆ ಗಡಿಯಾರ ರಸ್ತೆ ಮೂಲಕ ಸುತ್ತು ಬಳಸಿ ಪ್ರಯಾಣಿಸಬೇಕಾಗಿದೆ. ಈ ಸೇತುವೆ ಕಾಮಗಾರಿ ಪೂರ್ಣಗೊಂಡರೆ ಬಂಟ್ವಾಳ ತಾಲೂಕಿನ ನಾವೂರು, ಮಣಿನಾಲ್ಕೂರು, ಸರಪಾಡಿ, ಕಡೇಶಿವಾಲಯ, ಮಾಣಿ, ಬುಡೋಳಿ, ಬರಿಮಾರು, ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಬೆಳ್ತಂಗಡಿ ತಾಲೂಕಿನ ತೆಕ್ಕಾರು, ಬಾರ್ಯ, ತಣ್ಣೀರುಪಂತ ಮತ್ತಿತರ ಪ್ರದೇಶಗಳಿಗೆ ತ್ವರಿತವಾಗಿ ತೆರಳಲು ಅನುಕೂಲಕರವಾಗಲಿದೆ. ಅಲ್ಲದೆ ಮೂಡುಬಿದಿರೆ, ಕಾರ್ಕಳ, ಪುತ್ತೂರು, ಮಡಿಕೇರಿ, ಸುಳ್ಯ ಪ್ರಯಾಣಕ್ಕೆ ಹತ್ತಿರವಾಗಲಿದೆ. ಸಾವಿರಾರು ಗ್ರಾಮಸ್ಥರಿಗೆ ಅನುಕೂಲವಾಗಲಿರುವ ಸೇತುವೆ ನಿರ್ಮಾಣಕ್ಕಾಗಿ ಸ್ಥಳೀಯ ಆಡಳಿತ ಹಿಂದೇಟು ಹಾಕುತ್ತಿರುವುದು ಖೇದಕರದ ಸಂಗತಿ ಎಂದು ಸ್ಥಳೀಯರು ನೋವು ವ್ಯಕ್ತಪಡಿಸಿದ್ದಾರೆ.
ಪ್ರವಾಸೋದ್ಯಮಕ್ಕೂ ಅನುಕೂಲ: ಸೌಹಾರ್ದ ಸೇತುವೆ ಪೂರ್ಣಗೊಂಡಲ್ಲಿ ಪ್ರವಾಸೋದ್ಯಮ ತಾಣ ವಾಗಲಿದೆ. ಅಜಿಲಮೊಗರು ಇತಿಹಾಸ ಪ್ರಸಿದ್ಧ ವಾದ ಮುಸ್ಲಿಮರ ಧಾರ್ಮಿಕ ಕ್ಷೇತ್ರವಾಗಿದ್ದು, ಕಡೇಶಿವಾಲಯ ಹಿಂದೂ ಧಾರ್ಮಿಕ ಕ್ಷೇತ್ರವಾಗಿದೆ.
ಆ ನಿಟ್ಟಿನಲ್ಲಿ ಹಲವು ಜಿಲ್ಲೆಗಳಿಂದ ಬರುವ ಭಕ್ತಾಧಿಗಳ ಸಂಖ್ಯೆ ಇನ್ನಷ್ಟು ಅಧಿಕವಾಗಲಿದೆ ಎಂದು ಸ್ಥಳೀಯರೊಬ್ಬರು ಹೇಳುತ್ತಾರೆ.
ತಡೆಗೆ ರಾಜಕೀಯವೇ ನೆಪ!: ಸೇತುವೆ ಪೂರ್ಣ ಗೊಳ್ಳದೆ ಇರಲು ಬಹುಶಃ ಸೌಹಾರ್ದ ಸೇತುವೆ ಎಂಬ ಹೆಸರಿಟ್ಟಿರುವುದೇ, ಕಾರಣವಾಗಿರಬಹುದು ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ. ಅಧಿಕಾರಿಗಳು ಮತ್ತು ರಾಜಕಾರಣಿಗಳು ಕುಂಟು ನೆಪಗಳನ್ನು ಹೇಳುವುದು ಬಿಟ್ಟು ಕಾಮಗಾರಿ ಪೂರ್ಣಗೊಳ್ಳಲು ಆಸಕ್ತಿ ವಹಿಸಬೇಕು. ಅನೇಕ ತಾಲೂಕುಗಳು, ಗ್ರಾಮಗಳು ಸಂಪರ್ಕ ಸಾಧಿಸಲು ಕೇಂದ್ರ ಬಿಂದುವಾದ ಈ ಸೇತುವೆ ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಸ್ಥರಿಗೂ ಸಾಕಷ್ಟು ನೆರವಾಗಲಿದೆ.
೨೦೧೮ರಲ್ಲಿ ಬಿ.ರಮಾನಾಥ ರೈ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಈ ಸೇತುವೆಗೆ ಅನುದಾನ ಮಂಜೂರು ಮಾಡಿತ್ತು. ಆದರೆ ಈಗಿನ ಶಾಸಕ ರಾಜೇಶ್ ನಾಯ್ಕ್ ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿರುವುದರಿಂದ ಕಾಮಗಾರಿಯು ಮಂದಗತಿಯಲ್ಲಿ ಸಾಗಿದೆ ಎಂದರೆ ತಪ್ಪಾಗಲಾರದು. ಪ್ರಸಕ್ತ ಕಾಮಗಾರಿಯನ್ನು ತ್ವರಿತಗೊಳಿಸಿ, ‘ಸೌಹಾರ್ದ ಸೇತುವೆ’ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಜನರ ಒತ್ತಾಯವಾಗಿದೆ. ಈ ಕುರಿತು ಇಲ್ಲಿನ ನಿವಾಸಿಗಳಾದ ಸಂಜೀವ್ ಪೂಜಾರಿ, ಶಾಹುಲ್ ಹಮೀದ್, ಬಾಲಕೃಷ್ಣ ಪೂಜಾರಿ, ಅಬ್ದುಲ್ ಖಾದರ್ ಮತ್ತಿತರರು ‘ವಾರ್ತಾಭಾರತಿ’ಯೊಂದಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಸೇತುವೆಗಾಗಿ ಹೋರಾಟ ಸಮಿತಿ ರಚನೆ
ಸೇತುವೆ ನಿರ್ಮಾಣದಲ್ಲಿ ರಾಜಕೀಯ ಹಾಗೂ ಸ್ಥಳೀಯ ಆಡಳಿತದ ನಿರ್ಲಕ್ಷ್ಯಯಕ್ಕೆ ಬೇಸತ್ತ ನಾಡಿನ ಸರ್ವ ಧರ್ಮೀಯರು ಒಗ್ಗೂಡಿ ಸೌಹಾರ್ದ ಸೇತುವೆ ನಿರ್ಮಾಣಕ್ಕಾಗಿ ೭೦ ಮಂದಿಗಳನ್ನೊಳಗೊಂಡ ಹೋರಾಟ ಸಮಿತಿ ರಚಿಸಿದ್ದಾರೆೆ. ‘‘ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸದಿದ್ದರೆ ಸ್ಥಳೀಯ ನಾಗರಿಕರೆಲ್ಲರೂ ನದಿಗೆ ಇಳಿದು ಪ್ರತಿಭಟನೆ ನಡೆಸುವ ಉದ್ದೇಶವನ್ನಿಟ್ಟುಕೊಂಡಿದ್ದೇವೆ. ಈ ಪ್ರತಿಭಟನೆಯಿಂದ ಜನರಿಗೆ ಜೀವ ಹಾನಿ ಸಂಭವಿಸಿದ್ದರೆ ಜಿಲ್ಲಾಡಳಿತ ನೇರ ಹೊಣೆಯಾಗಲಿದೆ’’ ಎಂದು ಹೋರಾಟ ಸಮಿತಿಯ ಸದಸ್ಯರೊಬ್ಬರು ಎಚ್ಚರಿಸಿದ್ದಾರೆ.
ಚೆನ್ನೈ ಮೂಲದ ಎಸ್ಪಿಎಲ್ ಇನ್ಫ್ರಾಸ್ಟ್ರಕ್ಚರ್ ಪ್ರೈ. ಲಿ. ಕಂಪೆನಿ ಸೇತುವೆ ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿದೆ. ಸದ್ಯ ಸೇತುವೆಯ ಎರಡು ಪಿಲ್ಲರ್ಗಳ ನಿರ್ಮಾಣ ಬಾಕಿಯಿದೆ. ನದಿಯಲ್ಲಿ ಆರು ಮೀ. ನೀರು ಇರುವುದರಿಂದ ಪಿಲ್ಲರ್ ನಿರ್ಮಾಣ ಕಷ್ಟಸಾಧ್ಯ. ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಪಿಲ್ಲರ್ಗಳ ಕಾಮಗಾರಿ ಆರಂಭಿಸಲಾಗುವುದು. ಈ ವರ್ಷಾಂತ್ಯದೊಳಗೆ ಸೇತುವೆ ನಿರ್ಮಾಣ ಪೂರ್ಣಗೊಳ್ಳಲಿದೆ.
ರಘು ಎಲ್., ಕಾರ್ಯನಿರ್ವಾಹಕ ಇಂಜಿನಿಯರ್, ಕೆಆರ್ಡಿಸಿಎಲ್