ಚಿತ್ರಕಲಾವಿದ ಸೈಯದ್ ಆಸಿಫ್ ಅಲಿ ನಿಧನ

ಮಂಗಳೂರು, ಜ.5: ಮೂಲತಃ ಚಿತ್ರದುರ್ಗ ಜಿಲ್ಲೆಯ ಪ್ರಸಕ್ತ ನಗರದಲ್ಲಿ ವಾಸವಾಗಿದ್ದ ಚಿತ್ರಕಲಾವಿದ ಉಪನ್ಯಾಸಕ ಸೈಯದ್ ಆಸಿಫ್ ಅಲಿ (54) ಸೋಮವಾರ ಅಪರಾಹ್ನ ನಿಧನರಾಗಿದ್ದಾರೆ.
ಆಸಿಫ್ ಅಲಿ ಅವರ ಪತ್ನಿ ಈ ಹಿಂದೆಯೇ ನಿಧನರಾಗಿದ್ದು, ಒಬ್ಬ ಪುತ್ರ ಮತ್ತು ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಊರಿನವರಾಗಿದ್ದ ಸೈಯದ್ ಆಸಿಫ್ ಅಲಿ ಮಂಗಳೂರಿನ ಮಹಾಲಸಾ ಕಲಾ ಮಹಾವಿದ್ಯಾಲಯದಲ್ಲಿ ಸುಮಾರು 30 ವರ್ಷದಿಂದ ಉಪನ್ಯಾಸಕರಾಗಿದ್ದರು. ಸೋಮವಾರ ಅಪರಾಹ್ನ ಮಹಾಲಸಾ ವಿದ್ಯಾಲಯದಲ್ಲಿರುವಾಗಲೇ ಹೃದಯಘಾತಕ್ಕೊಳಗಾದರು ಎಂದು ತಿಳಿದು ಬಂದಿದೆ.
ಜಲವರ್ಣ ಚಿತ್ರದಲ್ಲಿ ವಿಶೇಷ ಪರಿಣತಿ ಪಡೆದಿದ್ದ ಅವರು ಕರ್ನಾಟಕ ಲಲಿತ ಕಲಾ ಅಕಾಡಮಿಯ ವರ್ಣಶ್ರೀ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ತುಮಕೂರಿನ ಆರ್ಕೆಎನ್ ಚಿತ್ರಕಲಾ ವಿದ್ಯಾಲಯದಲ್ಲಿ ಜಿಡಿ ಆರ್ಟ್ ಪದವಿ ಮತ್ತು ಹಂಪಿ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಇನ್ ವಿಶುವಲ್ ಆರ್ಟ್ ಸ್ನಾತಕೋತ್ತರ ಪದವಿ ಪಡೆದಿದ್ದರು.
ಅಖಿಲ ಭಾರತ ರಾಷ್ಟ್ರಮಟ್ಟದ ಚಿತ್ರಕಲಾ ಪ್ರದರ್ಶನ ಪ್ರಶಸ್ತಿ-ಅಂಬಾಲ, ಮೈಸೂರು ದಸರಾ ವಾರ್ಷಿಕ ಚಿತ್ರಕಲಾ ಪ್ರದರ್ಶನದ ಒಂಬತ್ತು ಪ್ರಶಸ್ತಿ, ಕಾಮ್ಲಿನ್ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು.







