ಅಶ್ರಫ್ ಗುಂಪು ಹತ್ಯೆ ಪ್ರಕರಣ: ನಿಷ್ಪಕ್ಷ ತನಿಖೆಗೆ ಸಹೋದರನಿಂದ ಉಸ್ತುವಾರಿ ಸಚಿವರಿಗೆ ಮನವಿ

ಮಂಗಳೂರು : ಕುಡುಪುವಿನಲ್ಲಿ ಕ್ರಿಕೆಟ್ ಪಂದ್ಯಾಟದ ವೇಳೆ ನಡೆದ ಕೇರಳದ ವಯನಾಡ್ ಜಿಲ್ಲೆಯ ಪುಲ್ಪಳ್ಳಿ ಅಶ್ರಫ್ ಗುಂಪು ಹತ್ಯೆ ಪ್ರಕರಣವನ್ನು ನಿಷ್ಪಕ್ಷ ತನಿಖೆ ನಡೆಸಿ ನ್ಯಾಯವನ್ನು ದೊರಕಿಸಿಕೊಡುವಂತೆ ಅಶ್ರಫ್ ಸಹೋದರ ಜಬ್ಬಾರ್ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದರು.
ʼಎಪ್ರಿಲ್ 27ರಂದು ನನ್ನ ಸಹೋದರ ಅಶ್ರಫ್ ಮಂಗಳೂರಿನ ಕುಡುಪು ಬಳಿ ಹತ್ಯೆಗೀಡಾಗಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಕೈಗೊಂಡಿರುವ ತನಿಖಾ ಪ್ರಕ್ರಿಯೆಯಲ್ಲಿ ಹಲವಾರು ಲೋಪಗಳು ಕಂಡು ಬಂದಿದೆ. ಅದರ ಬಗ್ಗೆ ಮಾಧ್ಯಮಗಳಲ್ಲಿಯೂ ವರದಿಯಾಗಿದೆ. FIR ದಾಖಲಿಸುವುದರಲ್ಲಿ ಮತ್ತು ಪ್ರಕರಣದ ತನಿಖೆಯಲ್ಲಿ ಪೊಲೀಸರು ಪಾಲಿಸಬೇಕಿದ್ದ ಕೆಲವು ಪ್ರಕ್ರಿಯೆಯಲ್ಲಿ ಲೋಪಗಳು ಉಂಟಾಗಿರುವ ಕಾರಣಕ್ಕೆ ತನಿಖಾಧಿಕಾರಿಯೂ ಸೇರಿದಂತೆ ಇಬ್ಬರು ಪೇದೆಗಳನ್ನು ಈಗಾಗಲೇ ಇಲಾಖೆಯು ಅಮನಾತುಗೊಳಿಸಿದೆಯಾದರೂ, ಅವರ ಬದಲಿಗೆ ತನಿಖಾಧಿಕಾರಿಯನ್ನು ಈವರೆಗೆ ನೇಮಿಸಿಲ್ಲ. ಪ್ರಕರಣದ ನಿಷ್ಪಕ್ಷ ತನಿಖೆಗೆ ದಕ್ಷ ಪೊಲೀಸ್ ಅಧಿಕಾರಿಯೊಬ್ಬರನ್ನು ತಕ್ಷಣ ನೇಮಿಸಬೇಕು. ನಮಗೆ ನ್ಯಾಯವನ್ನು ದೊರಕಿಸಿಕೊಡಬೇಕುʼ ಎಂದು ಜಬ್ಬಾರ್ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಗುಂಪು ಹತ್ಯೆ ಪ್ರಕರಣಗಳಲ್ಲಿ ಸಂತ್ರಸ್ತರ ಕುಟುಂಬದವರಿಗೆ ಕಾನೂನಾತ್ಮಕವಾಗಿ ನೀಡಬೇಕಿರುವ ಪರಿಹಾರವನ್ನು ತಕ್ಷಣ ಘೋಷಿಸಬೇಕು. ತೆಹಸೀನ್ ಪೂನಾವಾಲ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪಿನ ಅನ್ವಯ ಗುಂಪು ಹತ್ಯೆ ಪ್ರಕರಣಗಳನ್ನು Fast Track (ಫಾಸ್ಟ್ ಟ್ರ್ಯಾಕ್) ನ್ಯಾಯಾಲಯದಲ್ಲಿ ನಡೆಸಬೇಕಿರುವ ಕಾರಣ ಸದರಿ ಪ್ರಕರಣವನ್ನು Fast Track ನ್ಯಾಯಲಯಕ್ಕೆ ಒಪ್ಪಿಸಬೇಕು. ಭಾರತೀಯ ನ್ಯಾಯ ಸಂಹಿತೆ- 2023 ಜಾರಿಯಾದ ನಂತರ ಗುಂಪು ಹತ್ಯೆ ಪ್ರಕರಣ ಕರ್ನಾಟಕದಲ್ಲಿ ಬೆಳಕಿಗೆ ಬಂದಿರುವುದು ಇದೇ ಮೊದಲು. ಈ ಪ್ರಕರಣಕ್ಕೆ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ (SPP) ಅವರನ್ನು ಈ ಕೂಡಲೇ ನೇಮಿಸಬೇಕು. ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ತೆಹಸೀನ್ ಪೂನಾವಾಲ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪಿನ್ನು ಚಾಚೂ ತಪ್ಪದೆ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಅಶ್ರಫ್, ಶಾಹುಲ್ ಹಮೀದ್, ನಾಸಿರ್ ಲಕ್ಕಿಸ್ಟಾರ್ ಉಪಸ್ಥಿತರಿದ್ದರು.