ಬಂಟ್ವಾಳ : ನೀಟ್ ಪ್ರತಿಭಟನೆ ಕುರಿತು ದ್ವೇಷ ಪ್ರಚೋದನೆ ಆರೋಪ; ಪ್ರಕರಣ ದಾಖಲು, ಆರೋಪಿ ಬಂಧನ

ವಿಟ್ಲ: ನೀಟ್ ಪ್ರತಿಭಟನೆಯ ಕುರಿತು ಧಾರ್ಮಿಕ ದ್ವೇಷವನ್ನು ಪ್ರಚೋದಿಸುವ ಹಾಗೂ ಅವಹೇಳನಕಾರಿ ಬರಹವನ್ನು ವಾಟ್ಸಾಪ್ ಸ್ಟೇಟಸ್ನಲ್ಲಿ ಪ್ರಸಾರ ಮಾಡಿದ ಆರೋಪದಡಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಬಂಟ್ವಾಳ ಕೇಪು ನಿವಾಸಿ ಭರತ್ (36) ಬಂಧಿತ ವ್ಯಕ್ತಿ.
ಪೊಲೀಸರ ಮಾಹಿತಿ ಪ್ರಕಾರ, ದೂರುದಾರರು ಸದಸ್ಯರಾಗಿರುವ KFC KHANDIGA ಎಂಬ ವಾಟ್ಸಾಪ್ ಗುಂಪಿನಲ್ಲಿ ಜು. 23ರಂದು ಬಂದಿದ್ದ ಸ್ಕ್ರೀನ್ಶಾಟ್ನಲ್ಲಿ ಸಮುದಾಯಗಳ ನಡುವೆ ವೈಮನಸ್ಸು ಉಂಟುಮಾಡುವ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುವ ರೀತಿಯ ಬರಹವಿರುವುದು ಕಂಡುಬಂದಿದೆ. ಪರಿಶೀಲನೆ ವೇಳೆ ಬಂಟ್ವಾಳ ಕೇಪು ನಿವಾಸಿ ಭರತ್ ಎಂಬಾತ ಅದೇ ಬರಹವನ್ನು ತನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ಪ್ರಕಟಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ದೂರು ದಾಖಲಾದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 160/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 197(1)(a), 197(1)(c) ಹಾಗೂ 353(2)ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ.
ತನಿಖೆಯ ವೇಳೆ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.




