ಧರ್ಮಸ್ಥಳ ಪ್ರಕರಣ | 3ನೇ ದಿನದ ಶೋಧ ಕಾರ್ಯಾಚರಣೆ ಆರಂಭ

ಬೆಳ್ತಂಗಡಿ, ಜು.31: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳ ಪತ್ತೆಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ 3ನೇ ದಿನಕ್ಕೆ ಕಾಲಿಟ್ಟಿದೆ.
ಎಸ್ಐಟಿ ಅಧಿಕಾರಿಗಳು ಗುರುವಾರ ಪೂರ್ವಾಹ್ನ 11:30ರ ಸುಮಾರಿಗೆ ನೇತ್ರಾವತಿ ಸ್ನಾನಘಟ್ಟದಲ್ಲಿ 3ನೇ ದಿನದ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ದೂರುದಾರನನ್ನು ಕರೆದೊಯ್ದಿರುವ ಅಧಿಕಾರಿಗಳು ಇದೀಗ ದೂರುದಾರ ಗುರುತಿಸಿರುವ ನೇತ್ರಾವತಿ ನದಿಯ ಬದಿಯಲ್ಲೇ ಇರುವ 6ನೇ ಜಾಗದ ಅಗೆಯುವಿಕೆ ಆರಂಭಿಸಿದ್ದಾರೆ.
ಎಸ್ಐಟಿ ಈ ವರೆಗೆ ಅಗೆದಿರುವ ಎಲ್ಲ ಐದು ಸ್ಥಳಗಳೂ ನದಿ ಬದಿಯಲ್ಲೇ ಇದ್ದು , ಎಲ್ಲೂ ಮೃತದೇಹದ ಅವಶೇಷಗಳು ಪತ್ತೆಯಾಗಿಲ್ಲ. ಇನ್ನೂ ಅಗೆಯಲಿರುವ ಎಂಟರ ವರೆಗಿನ ಜಾಗಗಳು ನದಿ ಬದಿಯಲ್ಲೇ ಇವೆ. ಒಂಭತ್ತನೆ ಸ್ಥಳವು ನದಿ ತೀರದ ಮೇಲಿನ ಭಾಗದಲ್ಲಿದ್ದು, ಅಲ್ಲಿ ಅಗೆದಲ್ಲಿ ಮೃತದೇಹಗಳ ಅವಶೇಷಗಳು ಪತ್ತೆಯಾಗುವ ಬಗ್ಗೆ ಸಾಕ್ಷಿ ದೂರುದಾರ ಹೆಚ್ಚಿನ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಎಸ್ಐಟಿ ಅಧಿಕಾರಿಗಳ ಜೊತೆಗೆ ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಮಂಗಳೂರಿನ ಕೆಎಂಸಿ ವೈದ್ಯರ ತಂಡ, ಎಫ್.ಎಸ್.ಎಲ್. ತಂಡ, ಐ.ಎಸ್.ಡಿ. ಹಾಗೂ ಇತರ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.







