ಧರ್ಮಸ್ಥಳ ಪ್ರಕರಣ | 5ನೇ ದಿನದ ಶೋಧ ಕಾರ್ಯಾಚರಣೆ ಆರಂಭ
ದೂರುದಾರ ಗುರುತಿಸಿದ 9ನೇ ಸ್ಥಳದಲ್ಲಿ ಉತ್ಖನನ

ಧರ್ಮಸ್ಥಳದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಅರಣ್ಯದಲ್ಲಿ ಮೃತದೇಹಗಳ ಅವಶೇಷ ಪತ್ತೆಗಾಗಿ ಅಗೆಯುವ ದೃಶ್ಯ ಹೊರಗಿನವರಿಗೆ ಕಾಣಿಸದಂತೆ ಹಸಿರು ಬಣ್ಣದ ಪರದೆಯನ್ನು ಕಟ್ಟಲಾಗಿದೆ.
ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳ ಪತ್ತೆಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ 5ನೇ ದಿನಕ್ಕೆ ಕಾಲಿಟ್ಟಿದೆ.
ಇಂದು ಪೂರ್ವಾಹ್ನ ವಿಶೇಷ ತನಿಖಾ ತಂಡ (ಎಸ್ಐಟಿ)ವು ಈ ಪ್ರಕರಣದ ಸಾಕ್ಷಿ ದೂರುದಾರ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ತೋರಿಸಿರುವ ಒಂಭತ್ತನೇ ಜಾಗಕ್ಕೆ ಆಗಮಿಸಿದ್ದು, ಅಗೆಯುವ ಪ್ರಕ್ರಿಯೆ ಆರಂಭಿಸಿದ್ದಾರೆ.
ಇದಕ್ಕೂ ಮೊದಲು ಅಗೆಯುವ ಪ್ರಕ್ರಿಯೆ ಹೊರಗೆ ಕಾಣಿಸದಂತೆ ದೂರುದಾರು ಗುರುತಿಸಿರುವ ರಸ್ತೆ ಬದಿಯಲ್ಲೇ ಇರುವ 9, 10 ಮತ್ತು 11ನೇ ಜಾಗಗಳನ್ನು ಹಸಿರು ಪರದೆ ಕಟ್ಟಿ ಮುಚ್ಚಲಾಗಿದೆ.
ಎಸ್ಪಿ ದರ್ಜೆಯ ಅಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ಸಹಿತ ಎಸ್ಐಟಿ ಅಧಿಕಾರಿಗಳ ಜೊತೆಗೆ ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಮಂಗಳೂರಿನ ಕೆಎಂಸಿ ವೈದ್ಯರ ತಂಡ, ಎಫ್.ಎಸ್.ಎಲ್. ತಂಡ, ಐ.ಎಸ್.ಡಿ. ಹಾಗೂ ಇತರ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ಬದಿಯಲ್ಲಿ ಸಾಕ್ಷಿ ದೂರುದಾರ ಒಟ್ಟು 13 ಜಾಗಗಳನ್ನು ತೋರಿಸಿ, ‘ಅಲ್ಲಿ ಮೃತದೇಹಗಳನ್ನು ಹೂತಿದ್ದೆ’ ಎಂದು ಎಸ್ಐಟಿಗೆ ತಿಳಿಸಿದ್ದ. ಅದರಂತೆ ಆತ ತೋರಿಸಿದ್ದ ಜಾಗಗಳಲ್ಲಿ ಜು.29ರಿಂದ ಅಗೆಯುವ ಕಾರ್ಯವನ್ನು ಎಸ್ಐಟಿ ಆರಂಭಿಸಿದೆ. ಮೂರನೇ ದಿನದ ಅಗೆತದ ವೇಳೆ ದೂರುದಾರು ಗುರುತಿಸಿದ ಆರನೇ ಜಾಗದಲ್ಲಿ ಅಸ್ಥಿಪಂಜರದ ಅವಶೇಷಗಳು ಸಿಕ್ಕಿವೆ. ಉಳಿದ ಐದು ಕಡೆಗಳಲ್ಲಿ ಅಗೆದಾಗ ಮೃತದೇಹದ ಯಾವುದೇ ಅವಶೇಷಗಳೂ ಸಿಕ್ಕಿಲ್ಲ. ಸಾಕ್ಷಿ ದೂರುದಾರ ತೋರಿಸಿರುವ ಜಾಗಗಳಲ್ಲಿ ಇನ್ನೂ ಐದು ಕಡೆ ಅಗೆಯಲು ಬಾಕಿ ಇದೆ. 9ನೇ ಜಾಗವನ್ನು ಅಗೆಯುವ ಕಾರ್ಯ ಈಗ ಆರಂಭಗೊಂಡಿದೆ.







