ಬಕ್ರೀದ್ ತ್ಯಾಗ ಮತ್ತು ಸಹೋದರತ್ವದ ಹಬ್ಬ : ಸ್ಪೀಕರ್ ಯುಟಿ ಖಾದರ್

ಉಳ್ಳಾಲ : ಈದುಲ್ ಅಝ್ಹಾ (ಬಕ್ರೀದ್) ಹಬ್ಬ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿದ್ದು, ಪ್ರತಿಯೊಂದು ಹಬ್ಬವೂ ಪ್ರೀತಿ, ವಿಶ್ವಾಸ ಹಾಗೂ ಸಹೋದರತ್ವದ ಸಂದೇಶ ಸಾರುತ್ತದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಗುರುವಾರ ಬಕ್ರೀದ್ ಹಬ್ಬದ ಪ್ರಯುಕ್ತ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಝಿಯಾರತ್ ಮಾಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಬಕ್ರೀದ್ ಹಬ್ಬ ಪ್ರೀತಿ ಹಾಗೂ ಪರೋಪಕಾರಿ ಮನೋಭಾವವನ್ನು ಬೆಳೆಸುವ ಹಬ್ಬವಾಗಿದೆ. ನಮ್ಮ ಊರಲ್ಲಿ ಶಾಂತಿ ನೆಲೆಸಬೇಕು. ಶಾಂತಿ, ಸೌಹಾರ್ದತೆ ಮತ್ತು ನೆಮ್ಮದಿಯ ಬದುಕು ಎಲ್ಲರಿಗೂ ದೊರೆಯಬೇಕು. ಮಕ್ಕಳು ಹಿರಿಯರ ತನಕ ಎಲ್ಲರೂ ನಿರ್ಭಯವಾಗಿ ಬದುಕುವಂತಾಗಲಿ ಎಂಬುದೇ ನನ್ನ ಪ್ರಾರ್ಥನೆ ಎಂದು ಹೇಳಿದರು.
ಉಪಾಧ್ಯಕ್ಷ ಅಶ್ರಫ್ ರೈಟ್ ವೇ ಮಾತನಾಡಿ, ತ್ಯಾಗ ಮತ್ತು ಬಲಿದಾನದ ಹಬ್ಬವಾಗಿರುವ ಬಕ್ರೀದ್ ಸೌಹಾರ್ದತೆ ಮತ್ತು ಸಹೋದರತ್ವದ ಸಂಕೇತವಾಗಬೇಕು. ಶಾಂತಿಯನ್ನು ಸಾರುವ ಇಸ್ಲಾಂ ಧರ್ಮ ಏಕತೆಯನ್ನು ಬಯಸುತ್ತದೆ. ಪವಿತ್ರ ಹಜ್ ಯಾತ್ರೆಗೆ ತೆರಳಿರುವ ಯಾತ್ರಾರ್ಥಿಗಳು ಯಶಸ್ವಿಯಾಗಿ ಹಜ್ ಕರ್ಮ ನೆರವೇರಿಸಿ ಮರಳಲಿ ಎಂದು ಆಶಿಸಿದರು.
ಹಾಫಿಳ್ ಅಬ್ದುಲ್ ಮಜೀದ್ ಫಾಳ್ ಲಿ ಅವರು ನಮಾಝ್ ಹಾಗೂ ಜುಮಾ ಕುತುಬಾ ನೆರವೇರಿಸಿದರು.
ಈ ಸಂದರ್ಭದಲ್ಲಿ ಕೋಶಾಧಿಕಾರಿ ನಾಝಿಮ್ ರಹ್ಮಾನ್, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಶ್ರಫ್ ಹಾಜಿ ಕೋಡಿ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ ಮದನಿ ನಗರ ಉಪಸ್ಥಿತರಿದ್ದರು






