ಸುಲಿಗೆ ಪ್ರಕರಣ: ಅಧೀನ ನ್ಯಾಯಾಲದಲ್ಲಿ ದೋಷಮುಕ್ತಗೊಂಡಿದ್ದ ಆರೋಪಿಗೆ ಕಠಿಣ ಶಿಕ್ಷೆ

ಮಂಗಳೂರು : ನ್ಯಾಯಾಲಯದಿಂದ ದೋಷಮುಕ್ತಗೊಂಡು ಬಿಡುಗಡೆಗೊಂಡಿದ್ದ ಸುಲಿಗೆ ಪ್ರಕರಣದ ಆರೋಪಿ ಶಿವಮೊಗ್ಗ ಆರ್ಎಂಎಲ್ ನಗರದ ನಿವಾಸಿ ಶಿವಕುಮಾರ್ (38)ಗೆ ಮೇಲ್ಮನವಿ ನ್ಯಾಯಾಲಯವು ಬುಧವಾರ 7 ವರ್ಷಗಳ ಕಾಲ ಕಠಿಣ ಶಿಕ್ಷೆ ನೀಡಿದೆ.
2017ರ ಜೂ.26ರಂದು ಲೋಕೇಶ್ ನಗರದ ಫುಟ್ಬಾಲ್ ಮೈದಾನದ ಬಳಿ ಕಾಲುದಾರಿಯಲ್ಲಿ ಪೋನ್ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದಾಗ ಅವರ ಕೈಯಲ್ಲಿದ್ದ 10,000 ರೂ. ಮೌಲ್ಯದ ಮೊಬೈಲ್ ಪೋನ್ನ್ನು ಶಿವಕುಮಾರ್ ಸುಲಿಗೆ ಮಾಡಿದ್ದ. ಇನ್ನೋರ್ವ ಆರೋಪಿ ಮುತ್ತುಮ್ ಎಂಬಾತ ಲೋಕೇಶ್ರ ಕುತ್ತಿಗೆಯಲ್ಲಿದ್ದ 10 ಗ್ರಾಂ ತೂಕದ, 40,000 ರೂ. ಮೌಲ್ಯದ ಚಿನ್ನದ ಸರ ಸುಲಿಗೆ ಮಾಡಿದ್ದ. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಗಳೂರಿನ 2ನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿ ಗಳು ಬಿಡುಗಡೆಗೊಂಡಿದ್ದರು. ಇದರ ವಿರುದ್ಧ ಅಭಿಯೋಜನೆಯು ಮೇಲ್ಮನವಿ ಸಲ್ಲಿಸಿತ್ತು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ ಸಿ-1 ತ್ವರಿತ ನ್ಯಾಯಾಲಯದಲ್ಲಿ ಈ ಮೇಲ್ಮನವಿಯ ವಿಚಾರಣೆ ನಡೆದಿತ್ತು.
ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಆರೋಪಿಗಳ ವಿರುದ್ದದ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ನ್ಯಾಯಾಧೀಶ ಮೋಹನ ಜೆ.ಎಸ್. ರದ್ದುಗೊಳಿಸಿ ಭಾರತೀಯ ದಂಡ ಸಂಹಿತೆಯ ಕಲಂ 392ರ ಪ್ರಕಾರ 50,000 ರೂ. ದಂಡ ಮತ್ತು 7 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ.
ಈ ಪ್ರಕರಣದ ಇನ್ನೋರ್ವ ಆರೋಪಿ ಮುತ್ತಮ್ ಮೃತಪಟ್ಟಿದ್ದಾನೆ. ಸರಕಾರದ ಪರವಾಗಿ ಕೆ.ಬದರಿನಾಥ ನಾಯರಿ ಮೇಲ್ಮನವಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.






