ದಲಿತ ವೃದ್ಧೆಗೆ ಸೂರು ಕಲ್ಪಿಸಿದ ಮುಸ್ಲಿಮ್ ಯುವಕರು

ಸುಳ್ಯ: ಪ್ರತಿಯೊಂದು ವಿಚಾರಕ್ಕೂ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಗೋಡೆಗಳು ನಿರ್ಮಾಣವಾಗುತ್ತಿರುವ ಇಂದಿನ ಕಾಲದಲ್ಲಿ ಮನುಷ್ಯತ್ವವೇ ಎಲ್ಲಕ್ಕಿಂತ ಮಿಗಿಲು ಎಂಬುವುದನ್ನು ಸಾಬೀತುಪಡಿಸುವ ಘಟನೆ ಸುಳ್ಯ ತಾಲೂಕಿನ ಐವತ್ತೊಕ್ಲು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಆಸರೆಯಿಲ್ಲದೆ ಸಂಕಷ್ಟದಲ್ಲಿದ್ದ ದಲಿತ ಸಮುದಾಯದ ವೃದ್ಧ ಮಹಿಳೆಯ ಕುಟುಂಬಕ್ಕೆ ಮುಸ್ಲಿಮ್ ಯುವಕರ ತಂಡವೊಂದು ಮನೆ ಕಟ್ಟಿಕೊಡುವ ಮೂಲಕ ಸೌಹಾರ್ದ ಮೆರೆದಿದೆ.
ಐವತ್ತೊಕ್ಲು ಜನತಾ ಕಾಲನಿಯ ನಿವಾಸಿ 70 ವರ್ಷದ ದಲಿತ ವೃದ್ಧೆ ದೇಸಿಲು ತನ್ನ ಮಗಳು ಮತ್ತು ಆಕೆಯ ಇಬ್ಬರು ಮಕ್ಕಳೊಂದಿಗೆ ಅತಂತ್ರ ಜೀವನ ನಡೆಸುತ್ತಿದ್ದರು. ವಾಸ್ತವ್ಯಕ್ಕೆ ಸ್ವಂತ ಮನೆ ಇಲ್ಲದೆ ಪರದಾಡುತ್ತಿದ್ದರು. ಗಂಡನ ಆಸರೆ ಇಲ್ಲದ ವೃದ್ಧೆ ಮತ್ತು ಅವರ ಕುಟುಂಬ ಅಕ್ಕಪಕ್ಕದ ತಮ್ಮ ಜಾತಿಯವರ ಮನೆಗಳಲ್ಲಿ ವಾಸ ಮಾಡುತ್ತಿದ್ದರು. ಗಾಳಿ, ಮಳೆ ಬರುವ ಸಂದರ್ಭ ಜನತಾ ಕಾಲನಿಯಲ್ಲಿರುವ ಹಳೆಯ ಶಿಥಿಲಾವಸ್ಥೆಯಲ್ಲಿರುವ ನಿರಂತರ ಕಲಿಕಾ ಕೇಂದ್ರವನ್ನು ಆಶ್ರಯಿಸುತ್ತಿದ್ದರು.
ದೇಸಿಲು ಕುಟುಂಬದ ಸ್ಥಿತಿಯನ್ನು ಕಂಡು ಮರುಗಿದ ಸ್ಥಳೀಯ ಮುಸ್ಲಿಮ್ ಯುವಕರ ತಂಡ ಶಾಶ್ವತ ಸೂರು ಕಲ್ಪಿಸಿಕೊಡಲು ನಿರ್ಧರಿಸಿದರು. ಅದರಂತೆ ಸ್ಥಳೀಯ ಹಿಂದೂ ಸಹೋದರರನ್ನು ಸೇರಿಸಿಕೊಂಡು ''ದೇಸಿಲು ಮನೆ ನಿರ್ಮಾಣ'' ಎಂಬ ವಾಟ್ಸ್ಆ್ಯಪ್ ಗ್ರೂಪ್ ರಚಿಸಿ ಸುಳ್ಯ ತಾಪಂ ಮಾಜಿ ಸದಸ್ಯ ಅಬ್ದುಲ್ ಗಫೂರ್ರ ಸಹಕಾರದಲ್ಲಿ ಸ್ಥಳೀಯರಾದ ಟಿ.ಎಸ್.ಅಬ್ದುಲ್ ಖಾದರ್, ಎನ್.ಅಬೂಬಕರ್, ಸಿ.ಎಂ.ಬಶೀರ್, ಜಮಾಲ್ ಪಡ್ಪಿನಂಗಡಿ ನೇತೃತ್ವದಲ್ಲಿ ಹಣ ಸಂಗ್ರಹಿಸಿ ಸರಕಾರಿ ಜಾಗದಲ್ಲಿ ಅಚ್ಚುಕಟ್ಟಾದ ಮನೆ ನಿರ್ಮಿಸಿ ಕೊಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್: ಫಲಿತಾಂಶ ಮಾತ್ರ ಶೂನ್ಯ!
ಬಡ ದಲಿತ ವೃದ್ಧೆಯ ದಯನೀಯ ಸ್ಥಿತಿಯ ಕುರಿತು ವರ್ಷಗಳ ಹಿಂದೆ ಯಾರೋ ಒಬ್ಬರು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅದನ್ನು ಗಮನಿಸಿದ್ದ ಶಾಸಕಿ ಭಾಗೀರಥಿ ಮುರುಳ್ಯ ಸಹಿತ ಸ್ಥಳೀಯ ಜನಪ್ರತಿನಿಧಿಗಳು ದೇಸಿಲು ಅವರನ್ನು ಭೇಟಿ ಮಾಡಿ ಮನೆ ನಿರ್ಮಾಣದ ಭರವಸೆ ನೀಡಿದ್ದರು. ಆದರೆ ಫಲಿತಾಂಶ ಮಾತ್ರ ಶೂನ್ಯವಾಗಿತ್ತು.
ಸರಕಾರಿ ದಾಖಲೆಗಳೇ ಇಲ್ಲ: ಇಂದಿನ ಡಿಜಿಟಲ್ ಯುಗದಲ್ಲಿ ಆಧಾರ್ ಕಾರ್ಡ್, ರೇಶನ್ ಕಾರ್ಡ್, ವೋಟರ್ ಐಡಿ ಇಲ್ಲದವರು ವಿರಳ ಎನ್ನಬಹುದು. ಆದರೆ ಅನಕ್ಷರಸ್ಥೆ ದೇಸಿಲು ಅವರಿಗೆ ಯಾವುದೇ ಸರಕಾರಿ ದಾಖಲೆಗಳೇ ಇಲ್ಲ. ಇದರಿಂದ ಅವರು ಸರಕಾರಿ ಸವಲತ್ತುಗಳಿಂದ ವಂಚಿತರಾಗಿದ್ದರು.
'ದಾಖಲೆ' ಮೀರಿದ ಮಾನವೀಯತೆ: ದೇಸಿಲು ಕುಟುಂಬದ ಅಸಹಾಯಕತೆ ಕಂಡ ಸ್ಥಳೀಯ ಮುಸ್ಲಿಮ್ ಯುವಕರ ತಂಡವು ಯಾವುದೇ ದಾಖಲೆ ಕೇಳದೆ ಮನೆ ನಿರ್ಮಾಣಕ್ಕೆ ಅಡಿಗಲ್ಲಿಟ್ಟರು. ಸ್ಥಳೀಯರ ಸಹಕಾರದಿಂದ ಅಚ್ಚುಕಟ್ಟಾದ ಮನೆ ನಿರ್ಮಿಸಿ ಕೀಲಿ ಕೈ ಹಸ್ತಾಂತರಿಸಿ ಮಾನವೀಯತೆ ಮೆರೆದಿದ್ದಾರೆ. ಯುವಕರ ಕಾರ್ಯಕ್ಕೆ ಸಾರ್ವಜನಿ ಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ದಲಿತ ವೃದ್ಧೆ ದೇಸಿಲು ಅವರ ಕುಟುಂಬ ವಾಸ್ತವ್ಯಕ್ಕೆ ಮನೆಯಿಲ್ಲದೆ ಕಷ್ಟದಲ್ಲಿದ್ದರು. ಅವರ ಸಂಕಷ್ಟ ಕಂಡು ನಮ್ಮೂರಿನ ಯುವಕರು ಅವರಿಗೆ ವಾಸಿಸಲು ಯೋಗ್ಯವಾದ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಇದಕ್ಕೆ ಸಹಕರಿಸಿದ ಸರ್ವಧರ್ಮದವರಿಗೆ ನಮ್ಮ ಅಭಿನಂದನೆಗಳು. ದೇಸಿಲು ಕುಟುಂಬಕ್ಕೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಸಹಿತ ಎಲ್ಲಾ ಅಗತ್ಯ ದಾಖಲೆಗಳು ಇಲ್ಲದಿರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಈ ದಾಖಲೆಗಳನ್ನು ಕೂಡಾ ಕಾನೂನು ಬದ್ಧವಾಗಿ ಈ ಕುಟುಂಬಕ್ಕೆ ಸಿಗುವಂತೆ ಮಾಡುವ ಪ್ರಯತ್ನ ಮಾಡಲಿದ್ದೇವೆ.
-ಅಬ್ದುಲ್ ಗಫೂರ್ ಕಲ್ಮಡ್ಕ
ಮಾಜಿ ಸದಸ್ಯರು, ತಾಪಂ ಸುಳ್ಯ
ದೇಸಿಲು ಮತ್ತವರ ಕುಟುಂಬ ಸ್ವಂತ ಮನೆ ಇಲ್ಲದೆ ಕಷ್ಟಪಡುತ್ತಿರುವಾಗ ಇಲ್ಲಿನ ಮುಸ್ಲಿಮ್ ಯುವಕರು ಮುಂದೆ ಬಂದು ಧನ ಸಂಗ್ರಹಿಸಿ ಸುಂದರವಾದ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಅವರ ಈ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ. ದೇಸಿಲು ಅವರಿಗೆ ಮನೆ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಈ ಮೂಲಕ ಧನ್ಯವಾದ ಅರ್ಪಿಸುತ್ತಿದ್ದೇನೆ.
-ಗುಡ್ಡಪ್ಪ ಎ.,
ಸ್ಥಳೀಯ ದಲಿತ ಮುಖಂಡ






