ಧರ್ಮಸ್ಥಳ ಪ್ರಕರಣ| "ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ": ರಾಜ್ಯಪಾಲರಿಗೆ ದೂರು ನೀಡಿದ ಜಯಂತ್

ಜಯಂತ್ ಟಿ.
ಬೆಳ್ತಂಗಡಿ: ಎಸ್ಐಟಿ ಅಧಿಕಾರಿಗಳು ತನ್ನನ್ನು ವಿಚಾರಣೆಗೆಂದು ಕರೆದು ತನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಬೆದರಿಕೆ ಹಾಕಿರುವುದಾಗಿ ಸೌಜನ್ಯಾ ಪರ ಹೋರಾಟಗಾರ ಜಯಂತ್ ಟಿ. ರಾಜ್ಯಪಾಲ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?:
ಎಸ್ಐಟಿ ಅಧಿಕಾರಿಗಳಾದ ಜಿತೇಂದ್ರ ದಯಾಮ, ಸೈಮನ್, ಮಂಜುನಾಥ್ ಆರ್.ಜೆ., ಮಂಜುನಾಥ ಗೌಡ, ಹಾಗೂ ಗುಣಪಾಲ ಸೇರಿ ನನಗೆ ಬೆದರಿಕೆ ಹಾಕಿದರು. ಬಳಿಕ ದೂರುದಾರ ಚಿನ್ನಯ್ಯನನ್ನು ಕರೆಸಿ ಆತನ ಮೂಲಕ ತನಗೆ ತೀವ್ರವಾಗಿ ಹಲ್ಲೆ ಮಾಡಿಸಿದರು. ಅದೇ ರೀತಿ ಚಿನ್ನಯ್ಯನ ಮೇಲೆ ಹಲ್ಲೆ ನಡೆಸಿ ನನಗೆ ಬೆದರಿಸಿ ಸುಳ್ಳು ಹೇಳಿಕೆ ಪಡೆಯುವ ಪ್ರಯತ್ನ ನಡೆಸಿದರು. ಸುಳ್ಳು ಹೇಳಿಕೆ ನೀಡುವಂತೆ ಒತ್ತಾಯಿಸಿದರು ಎಂದು ಜಯಂತ್ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಅದಕ್ಕೆ ಒಪ್ಪದಿದ್ದಾಗ ‘ದೊಡ್ಡವರ ವಿರುದ್ಧ ದೂರು ನೀಡುತ್ತಿಯಾ? ನಿನ್ನನ್ನು ಹಾಗೂ ನಿನ್ನೊಂದಿಗೆ ಇರುವವರನ್ನು ಜೈಲಿಗೆ ಹಾಕದೆ ಬಿಡುವುದಿಲ್ಲ’ ಎಂದು ಬೆದರಿಸಿದ್ದಾರೆ. ಅಧಿಕಾರಿಗಳ ಹಲ್ಲೆಯಿಂದ ಗಾಯಗೊಂಡ ನಾನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದಿದ್ದೇನೆ ಎಂದೂ ತಿಳಿಸಿದ್ದಾರೆ.
ತನ್ನಿಂದ ಯಾವುದೇ ಹೇಳಿಕೆ ಪಡೆಯದೆ ಅವರಾಗಿಯೇ ಹೇಳಿಕೆಯನ್ನು ಟೈಪ್ ಮಾಡಿದ್ದಾರೆ. ಪ್ರತಿ ದಿನ ಎಸ್ಐಟಿ ಕಚೇರಿಗೆ ಕರೆಸಿ ಮಾನಸಿಕ, ದೈಹಿಕ ಹಿಂಸೆ ನೀಡಿದ್ದಾರೆ. ಸುಳ್ಳು ಸಾಕ್ಷಿ ಹೇಳಿವಂತೆ ಒತ್ತಾಯಿಸಿದ್ದಾರೆ. ಎಸ್ಐಟಿಯಿಂದ ತನಗೆ ಬೆದರಿಕೆ ಇದ್ದ ಕಾರಣ ನ್ಯಾಯಾಲಯದಿಂದ ತಾತ್ಕಾಲಿಕ ತಡೆ ಲಭಿಸಿದ ಬಳಿಕ ಇದೀಗ ದೂರು ನೀಡಿದ್ದೇನೆ ಎಂದು ತಿಳಿಸಿದ ಜಯಂತ್ ಟಿ., ತನ್ನ ಮೇಲೆ ದೌರ್ಜನ್ಯ ನಡೆಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.







