ನ್ಯಾಯಕ್ಕೆ ಆಗ್ರಹಿಸಿ ಕೇರಳ ಸಿಎಂ ಭೇಟಿಯಾದ 'ಜಸ್ಟಿಸ್ ಫಾರ್ ಅಶ್ರಫ್ ಆ್ಯಕ್ಷನ್ ಕಮಿಟಿ', ವಯನಾಡ್ ಸಿಪಿಎಂ ನಾಯಕರು
ಕುಡುಪು ಅಶ್ರಫ್ ಗುಂಪು ಹತ್ಯೆ ಪ್ರಕರಣ

ಮಂಗಳೂರು: ಮಂಗಳೂರಿನಲ್ಲಿ ಗುಂಪು ಥಳಿತಕ್ಕೆ ಒಳಗಾಗಿ ಹತ್ಯೆಯಾದ ವಯನಾಡ್ ನಿವಾಸಿ ಅಶ್ರಫ್ ಪ್ರಕರಣದಲ್ಲಿ ನ್ಯಾಯಕ್ಕಾಗಿ ಕೇರಳದ ವಯನಾಡ್ ನಲ್ಲಿ ಹೋರಾಟ ಬಲಗೊಳ್ಳುತ್ತಿದೆ. ವಯನಾಡ್ ಪ್ರವಾಸದಲ್ಲಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು 'ಜಸ್ಟಿಸ್ ಫಾರ್ ಅಶ್ರಫ್ ಆ್ಯಕ್ಷನ್ ಕಮಿಟಿ' ಮತ್ತು ಅಲ್ಲಿನ ಸಿಪಿಎಂ ಮುಖಂಡರ ಜಂಟಿ ನಿಯೋಗವು ಇಂದು (ಮೇ 21) ಭೇಟಿಯಾಗಿ ನ್ಯಾಯ ಒದಗಿಸುವಂತೆ ಮನವಿ ಮಾಡಿತು.
ನಿಯೋಗವು ಅಶ್ರಫ್ ಹತ್ಯೆ ಪ್ರಕರಣದ ಕುರಿತು ಮುಖ್ಯಮಂತ್ರಿಗೆ ಸವಿಸ್ತಾರವಾಗಿ ವಿವರಿಸಿತು. ಕರ್ನಾಟಕ ರಾಜ್ಯ ಸರಕಾರ ಹಾಗೂ ಮುಖ್ಯಮಂತ್ರಿಯ ಜೊತೆ ಈ ಬಗ್ಗೆ ಮಾತನಾಡಿ ಅಶ್ರಫ್ ಕುಟುಂಬಕ್ಕೆ ನ್ಯಾಯ ಒದಗಿಸಲು ಕಾರ್ಯಪ್ರವೃತ್ತರಾಗುವಂತೆ ವಿನಂತಿಸಿತು. ಇದಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.
ಮುಖ್ಯಮಂತ್ರಿಯನ್ನು ಭೇಟಿಯಾದ ನಿಯೋಗದಲ್ಲಿ ಮಾಜಿ ಸಚಿವ, ಹಿರಿಯ ಕಮ್ಯುನಿಸ್ಟ್ ನೇತಾರ ಪಾಲೋಳಿ ಮುಹಮ್ಮದ್ ಕುಟ್ಟಿ, ಸಿಪಿಎಂ ವಯನಾಡ್ ಜಿಲ್ಲಾ ನಾಯಕರಾದ ಅಹ್ಮದ್ ಮಟ್ಟಿ, ಅಡ್ವಕೇಟ್ ಜಯಕೃಷ್ಣನ್, ಆ್ಯಕ್ಷನ್ ಕಮಿಟಿಯ ನಝರ್ ಪರಪ್ಪೂರ್, ನಾಸರ್ ಕಪ್ಪನ್, ರಹೀಮ್ ಕೆ.ಕೆ., ಅಬ್ದುಲ್ ಹಖ್ ಉಪಸ್ಥಿತರಿದ್ದರು.
ವಯನಾಡ್ ನ ಸಿಪಿಎಂಗೆ ಸಾಧ್ಯವಾಗುವುದು, ದ.ಕ. ಜಿಲ್ಲಾ ಕಾಂಗ್ರೆಸ್ ಗೆ ಏಕೆ ಸಾಧ್ಯವಾಗುವುದಿಲ್ಲ ?
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲ ದಿನಗಳ ಹಿಂದೆ ದ.ಕ. ಜಿಲ್ಲಾ ಪ್ರವಾಸದಲ್ಲಿದ್ದರು. ಆ ಸಂದರ್ಭ ಗುಂಪು ಹತ್ಯೆಗೆ ಬಲಿಯಾದ ಅಶ್ರಫ್ ಗೆ ನ್ಯಾಯ ದೊರಕಬೇಕು, ಮಂಗಳೂರು ಪೊಲೀಸರು ಪ್ರಕರಣವನ್ನು ತೇಲಿಸುತ್ತಿದ್ದಾರೆ ಎಂಬ ಆಕ್ರೋಶ ಬಲವಾಗಿತ್ತು. ಆದರೆ, ಈ ಕುರಿತು ಗಮನ ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯರ ಭೇಟಿಗೆ ಸಮಯ ನಿಗದಿಗೊಳಿಸಲು ಜಿಲ್ಲೆಯ ಕಾಂಗ್ರೆಸ್ ಪಕ್ಷ ಏಕೆ ಪ್ರಯತ್ನಿಸಿಲ್ಲ? ಕನಿಷ್ಟ ಒಂದು ಮನವಿ ಪತ್ರವನ್ನು ಸಲ್ಲಿಸಲೂ ಪ್ರಯತ್ನಿಸದಿರುವುದು ಯಾವ ಸಂದೇಶ ನೀಡುತ್ತದೆ ಎಂದು ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.
ಕೇರಳದ ವಯನಾಡ್ ನ ಸಿಪಿಎಂ ಪಕ್ಷಕ್ಕೆ ಸಾಧ್ಯವಾಗುವುದು, ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕತ್ವಕ್ಕೆ ಯಾಕೆ ಸಾಧ್ಯವಾಗುವುದಿಲ್ಲ ? ಈಗಂತೂ ಕಾಂಗ್ರೆಸ್ ಪಕ್ಷದ ಯಾವೊಬ್ಬ ಜಿಲ್ಲಾ ನಾಯಕನೂ ಅಶ್ರಫ್ ಗುಂಪು ಹತ್ಯೆ ಪ್ರಕರಣದ ಕುರಿತು ತುಟಿ ಬಿಚ್ಚುತ್ತಿಲ್ಲ. ಕಾಂಗ್ರೆಸ್ ಪಕ್ಷದ ಮುಸ್ಲಿಮ್ ನಾಯಕರಷ್ಟೆ ಸ್ಪೀಕರ್ ಬಳಿ, ಉಸ್ತುವಾರಿ ಸಚಿವರ ಬಳಿ ನ್ಯಾಯಕ್ಕಾಗಿ ಅಗ್ರಹಿಸಿ ಮನವಿ ಪತ್ರ ಹಿಡಿದು ಓಡಾಡುತ್ತಿದ್ದಾರೆ. ಈ ನಾಯಕರ ಅಸಹಾಯಕತೆ ಎದ್ದು ಕಾಣುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕುಡುಪು ಮಾಬ್ ಲಿಂಚಿಂಗ್ ಪ್ರಕರಣದಲ್ಲಿ ನ್ಯಾಯ ದೊರಕಲು ಸಾಧ್ಯವೆ ? ಪ್ರಕರಣ ದುರ್ಬಲಗೊಳ್ಳುತ್ತಾ ಹಾಗೆಯೆ ಮುಚ್ಚಿ ಹೋಗುವುದರ ಕುರಿತು ಯಾರಿಗಾದರು ಅನುಮಾನ ಇದೆಯೆ, ಇದೆಲ್ಲದರ ಅರ್ಥ ಏನು ಎಂದು ಕಾಂಗ್ರೆಸ್ ಪಕ್ಷ ವಿವರಿಸುತ್ತದೆಯೆ ಎಂದವರು ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.