ಮಂಗಳೂರು | ಕಂಬಳ ಕ್ರೀಡೆಗೆ 5 ಕೋ.ರೂ. ಅನುದಾನ ನೀಡಲು ಅಸೋಸಿಯೇಶನ್ ಮನವಿ

ಮಂಗಳೂರು, ನ.21: ರಾಜ್ಯ ಸರಕಾರದ ಕ್ರೀಡಾ ಪ್ರಾಧಿಕಾರದಿಂದ ಮಾನ್ಯತೆ ಪಡೆದಿರುವ ಕಂಬಳ ಕ್ರೀಡೆಗೆ 5 ಕೋ.ರೂ. ಅನುದಾನ ನೀಡಬೇಕು ಎಂದು ರಾಜ್ಯ ಕಂಬಳ ಅಸೋಸಿಯೇಶನ್ ಮನವಿ ಮಾಡಿದೆ.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಶನ್ ಅಧ್ಯಕ್ಷ ಡಾ. ಐಕಳಬಾವ ದೇವಿಪ್ರಸಾದ್ ಶೆಟ್ಟಿ, ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ವರ್ಷ 25 ಜೋಡುಕರೆ ಕಂಬಳಗಳು ನಡೆಯಲಿದೆ. ಇದಕ್ಕೆ ಮುಂದಿನ ಬಜೆಟ್ ನಲ್ಲಿ ಪ್ರವಾಸೋದ್ಯಮ ಮತ್ತು ಯುವ ಸಬಲೀಕರಣ, ಕ್ರೀಡಾ ಇಲಾಖೆಗಳು ತಲಾ 2.5 ಕೋ. ರೂ.ಗಳಂತೆ 5 ಕೋ. ರೂ. ಮೀಸಲಿಡಬೇಕು ಎಂದು ಹೇಳಿದರು.
ಕಳೆದ ವರ್ಷ ಪ್ರವಾಸೋದ್ಯಮ ಇಲಾಖೆ 10 ಕಂಬಳಗಳಿಗೆ ತಲಾ 5 ಲ. ರೂ. ಬಿಡುಗಡೆ ಮಾಡಿತ್ತು. ಆದರೆ 20 ಕಂಬಳಗಳು ನಡೆದಿದ್ದವು. ಈ ಮೊತ್ತ ಸಾಕಾಗಲಿಲ್ಲ. ಕ್ರೀಡಾ ಇಲಾಖೆ ಪ್ರತಿ ಕಂಬಳಕ್ಕೆ 2 ಲ. ರೂ. ಬಿಡುಗಡೆ ಮಾಡಿತ್ತು. ಒಂದು ಕಂಬಳ ಆಯೋಜನೆಗೆ 40 ರಿಂದ 50 ಲ. ರೂ. ವೆಚ್ಚವಾಗುತ್ತದೆ. ಚಿನ್ನವನ್ನು ಬಹುಮಾನವಾಗಿ ನೀಡಲಾಗುತ್ತಿದೆ. ಆದರೆ ಚಿನ್ನದ ದರ ವಿಪರೀತ ಹೆಚ್ಚಾಗಿರುವುದರಿಂದ ಹೊರೆಯಾಗಿದೆ. ಕಂಬಳದಿಂದ ಕ್ರೀಡೆ ಮತ್ತು ಪ್ರವಾಸೋದ್ಯಮ ಇಲಾಖೆಗಳಿಗೆ ಪ್ರಯೋಜನವಾಗುತ್ತಿದೆ. ಅನೇಕ ಕುಟುಂಬಗಳು ಕಂಬಳವನ್ನು ಅವಲಂಬಿಸಿಕೊಂಡಿವೆ ಎಂದು ಐಕಳಬಾವ ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಕಂಬಳದ ತೀರ್ಪುಗಾರರು, ಕೋಣ ಓಡಿಸುವವರು, ಪರಿಚಾರಕ ವರ್ಗದವರ ಸಹಿತ ಕಂಬಳದಲ್ಲಿ ತೊಡಗಿಸಿಕೊಂಡವರ ಜೀವನ ಭದ್ರತೆಗಾಗಿ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಾರ್ಡ್ ಒದಗಿಸಬೇಕು. ಕಂಬಳವು ಜಾನಪದ ಕ್ರೀಡೆಯಾದ ಕಾರಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ಪ್ರೋತ್ಸಾಹ ನೀಡಬೇಕು. ಒಂಟಿ ಕರೆಯ ಸಾಂಪ್ರದಾಯಿಕ ಕಂಬಳಗಳಿಗೂ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು.
ನಿಯಮ ಕಟ್ಟುನಿಟ್ಟು ಪಾಲನೆಗೆ ಸೂಚನೆ :
ಕಂಬಳಗಳನ್ನು ನಡೆಸಲು ಅಸೋಸಿಯೇಶನ್ ಬೈಲಾ ರಚಿಸಿದೆ. ಕಂಬಳವು 24 ಗಂಟೆಗಳ ಒಳಗೆ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ಸಮಯ ಪಾಲನೆ ಮಾಡಬೇಕು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಕೋಣಗಳಿಗೆ ಯಾವುದೇ ರೀತಿಯ ಹಿಂಸೆಯನ್ನು ನೀಡಬಾರದು ಎಂದು ಕೂಡ ತಿಳಿಸಲಾಗಿದೆ. ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ ಬಳಕೆಯ ನಿಯಮಗಳನ್ನು ಸಂಘವು ಕಟ್ಟುನಿಟ್ಟಾಗಿ ಪಾಲಿಸಲಿದೆ. ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕದ ಶಬ್ದವನ್ನು ಕಂಬಳ ಕರೆ ಒಳಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಈ ವರ್ಷದಿಂದ ಸಬ್ ಜೂನಿಯರ್ ವಿಭಾಗಕ್ಕೆ ಅವಕಾಶವಿರುವುದಿಲ್ಲ. ಇದರಿಂದಾಗಿ ಸುಮಾರು ಮೂರು ಗಂಟೆಗಳ ಸಮಯ ಉಳಿಸಲು ಸಾಧ್ಯವಾಗಲಿದೆ. ಸಬ್ ಜೂನಿಯರ್ ಕೋಣಗಳಿಗೆ ತರಬೇತಿ ಸಿಗುವಂತಾಗಲು ಪ್ರತ್ಯೇಕ ಕೂಟಗಳನ್ನು ಆಯೋಜಿಸಲಾಗುವುದು. ಕಂಬಳದಲ್ಲಿ ಭಾಗವಹಿಸುವ ಕೋಣಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಹಿಂದೆ 150-160 ಇದ್ದದ್ದು, ಇದೀಗ 280ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಸಮಯ ಪರಿಪಾಲನೆ ಕಷ್ಟವಾಗುತ್ತಿದೆ ಎಂದು ಐಕಳಬಾವ ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಮೈಸೂರಿನಲ್ಲಿ ಕಂಬಳ ಮಾಡಲು ಡಿಸಿಎಂ ಡಿ.ಕೆ.ಶಿವಕುಮಾರ್ ಆಸಕ್ತಿ ತೋರಿಸಿದ್ದಾರೆ. ಅಲ್ಲಿ ಕಂಬಳಕ್ಕೆ ಪೂರಕವಾದ 20 ಎಕರೆ ಜಾಗವಿದೆ. ತಜ್ಞರು ಪ್ರಸ್ತಾವಿತ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಾಧ್ಯವಾದರೆ ಎಪ್ರಿಲ್ ಬಳಿಕ ಕಂಬಳ ನಡೆಸಲಾಗುವುದು. ಬೆಂಗಳೂರಿನಲ್ಲಿ ಕಂಬಳ ನಡೆಸಲು ಈ ಬಾರಿ ಬೇಡಿಕೆ ಬಂದಿಲ್ಲ ಎಂದು ಹೇಳಿದರು.
ಹೆಚ್ಚುವರಿ ಸಾಧನಗಳ ಬಳಕೆ :
ಸಮಯವನ್ನು ಮೇಲ್ವಿಚಾರಣೆ ಮಾಡಲು ಟೈಮರ್ಗಳು, ಸಿಸಿಟಿವಿ ಕ್ಯಾಮರಾಗಳು ಮತ್ತು ಹೆಚ್ಚುವರಿ ರೆಕಾರ್ಡಿಂಗ್ ಸಾಧನಗಳನ್ನು ಬಳಸಲಾಗುತ್ತದೆ. ವಿಳಂಬ ತಡೆಯುವುದು, ಆಧುನಿಕ ತಂತ್ರಜ್ಞಾನ ಬಳಸಿ ಫಲಿತಾಂಶ ನೀಡುವುದಕ್ಕೆ ಆದ್ಯತೆ ನೀಡಲಾಗುವುದು. ಈ ಬಾರಿ ಮೂರು ಕಡೆ ಹೊಸದಾಗಿ ಕಂಬಳ ನಡೆಯಲಿದೆ ಎಂದರು.
ರಾಜ್ಯದ ಎಲ್ಲೆಡೆ ಕಂಬಳ ನಡೆಸಲು ಯಾರೂ ಅಡ್ಡಿ ಮಾಡುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಪಿಲಿಕುಳ ಕಂಬಳದ ಪ್ರಕರಣ ನಡೆಯುತ್ತಿದೆ. ಅದರ ತೀರ್ಪು ಹೊರಬೀಳಲಿದೆ. ಉಳಿದಂತೆ ಎಲ್ಲ ಕಡೆ ಹಸಿರು ನಿಶಾನೆ ದೊರೆತಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ರಾಷ್ಟ್ರೀಯ ಮಾನ್ಯತೆಗಾಗಿ ಪ್ರಧಾನಿಗೆ ಮನವಿ :
ಕಂಬಳಕ್ಕೆ ರಾಷ್ಟ್ರೀಯ ಮಾನ್ಯತೆ ನೀಡುವಂತೆ ನ.28ರಂದು ಉಡುಪಿಗೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಲಾಗುವುದು ಎಂದು ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಶನ್ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪಿ.ಆರ್.ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಕಂಬಳ ಸಂಘಟಕ ಸಂದೀಪ್ ಶೆಟ್ಟಿ ಉಪಸ್ಥಿತರಿದ್ದರು.







