ಮಂಗಳೂರು: 'ಬ್ಯಾರೀಸ್ ಫೆಸ್ಟಿವಲ್-2025'ಕ್ಕೆ ಚಾಲನೆ; ಉದ್ಯೋಗ ಮೇಳದಲ್ಲಿ 100ಕ್ಕೂ ಅಧಿಕ ಕಂಪೆನಿಗಳು ಭಾಗಿ

ಮಂಗಳೂರು: ಕರ್ನಾಟಕ ಬ್ಯಾರೀಸ್ ಸೋಶಿಯಲ್ ಮತ್ತು ಕಲ್ಚರಲ್ ಫೋರಂ ವತಿಯಿಂದ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯುವ 'ಬ್ಯಾರೀಸ್ ಫೆಸ್ಟಿವಲ್-2025' (ಬ್ಯಾರಿ ಬಹುಭಾಷಾ ಸೌಹಾರ್ದ ಉತ್ಸವ)ಕ್ಕೆ ಶನಿವಾರ ಚಾಲನೆ ದೊರಕಿತು.
ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಉದ್ಯೋಗ ಮೇಳದಲ್ಲಿ ದೇಶವಿದೇಶಗಳ 100ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸಿವೆ. ಸುಮಾರು 5,000ಕ್ಕೂ ಅಧಿಕ ಮಂದಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಶೈಕ್ಷಣಿಕ ಹಾಗೂ ವೃತ್ತಿ ಮಾರ್ಗದರ್ಶನ, ವೈದ್ಯಕೀಯ ಮತ್ತು ರಕ್ತದಾನ ಶಿಬಿರ, ಬಿಸಿನೆಸ್ ಮೀಟ್, ಆಹಾರ ಮೇಳ, ವಿವಿಧ ಸ್ಪರ್ಧೆಗಳು, ಗೋಷ್ಠಿಗಳು, ಯುವ ಸಮೂಹಕ್ಕೆ ಭವಿಷ್ಯದ ಕುರಿತಾಗಿ ಮಾರ್ಗದರ್ಶನ ಮತ್ತು ದಫ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯ್ಕ, ಉದ್ಯೋಗ ಮೇಳದ ಪ್ರಯೋಜನವನ್ನು ನಿರುದ್ಯೋಗಿಗಳು ಪಡೆಯಬೇಕು. ಆಗ ಮಾತ್ರ ಸಂಘಟಕರ ಶ್ರಮ ಸಾರ್ಥಕವಾಗಲಿದೆ. ಉದ್ಯೋಗ ಸಿಗದವರು ನಿರಾಶರಾಗಬಾರದು. ಕೇವಲ ಶಿಕ್ಷಣ ಪಡೆದರೆ ಸಾಲದು. ಕೌಶಲ್ಯವೂ ಮುಖ್ಯ. ಅದನ್ನು ಅಭ್ಯರ್ಥಿಗಳು ಕರಗತ ಮಾಡಿಕೊಳ್ಳಬೇಕು ಎಂದರು.
ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಸೌಹಾರ್ದ ಸಮ್ಮಿಲನ ಕಲ್ಪನೆಯಡಿ ಯೋಜನೆಯಡಿ ಈ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಉತ್ಸವ ಸಮಿತಿಯ ಅಧ್ಯಕ್ಷ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ.ಬಾವ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ವೇಳೆ ಉದ್ಯಮಿ, ಟೀಕೆ ಗ್ರೂಪ್ ನ ಉಮರ್ ಟೀಕೆ ಅವರಿಗೆ 'ಮೋಟಿವೇಶನಲ್ ಅವಾರ್ಡ್' ನೀಡಿ ಗೌರವಿಸಲಾಯಿತು.
ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಎನ್ಆರ್ ಐ ಫೋರಂ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್ ಸ್ಟಿಟ್ಯೂಶನ್ಸ್ ಬೆಂಗಳೂರು ಇದರ ವೈಸ್ ಚೆಯರ್ ಮ್ಯಾನ್ ಸುಹೈಲ್ ಅಹ್ಮದ್, ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ನ ನಿರ್ದೇಶಕಿ ಕೌಸರ್ ನಿಸಾರ್ ಅಹ್ಮದ್, ಉದ್ಯಮಿಗಳಾದ ಮುಸ್ತಫ ಭಾರತ್, ಝಕರಿಯಾ ಜೋಕಟ್ಟೆ, ಶರೀಫ್ ವೈಟ್ ಸ್ಟೋನ್, ಯು.ಟಿ.ಇಫ್ತಿಕಾರ್, ಯು.ಟಿ.ಝುಲ್ಫಿಕರ್ ಅಲಿ, ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ನಾಸಿರ್ ಲಕ್ಕಿಸ್ಟಾರ್, ಮೂಸಬ್ಬ ಬ್ಯಾರಿ, ಮುಸ್ತಫ ಸುಳ್ಯ, ಕೆ.ಎಂ.ಅಬೂಬಕರ್ ಸಿದ್ದೀಕ್, ಶೇಖ್ ಇರ್ಫಾನಿ, ಕಾಂಗ್ರೆಸ್ ಮುಖಂಡರಾದ ಕೆ.ಕೆ.ಶಾಹುಲ್ ಹಮೀದ್, ಪದ್ಮರಾಜ್ ಆರ್., ಪ್ರದೀಪ್ ಡಿಸೋಜ, ಸಂಘಟನೆಯ ಅಧ್ಯಕ್ಷ ಇಕ್ಬಾಲ್ ಪರ್ಲಿಯಾ, ಮತ್ತಿತರರು ಉಪಸ್ಥಿತರಿದ್ದರು.
,
ಬಿಜೈ ಚರ್ಚಿನ ಧರ್ಮಗುರು ರೆ.ಫಾ.ನಾರ್ಮನ್ ಡಿಸೋಜ ಶುಭ ಹಾರೈಸಿದರು. ಧರ್ಮಗುರು ಎಸ್.ಬಿ.ಮುಹಮ್ಮದ್ ದಾರಿಮಿ ದುಆಗೈದರು. ಸಂಘಟಕಿ ಯು.ಟಿ.ಫರ್ಝಾನ ಸ್ವಾಗತಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.







