ಮಂಗಳೂರು: ಎಸ್ಡಿಪಿಐ 6ನೇ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆ

ಮಂಗಳೂರು: ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರವು ದೇಶದಲ್ಲಿ ಜನತೆಗೆ ಅಗತ್ಯದ ಆಹಾರ , ವಸತಿಗೆ ಸಂಬಂಧಿಸಿದ ಯಾವ ಯೋಜನೆಯನ್ನು ಜಾರಿ ಮಾಡುತ್ತಿಲ್ಲ. ಹಿಂದೂ- ಮುಸ್ಲಿಮರ ಮಧ್ಯೆ ವೈಷಮ್ಯ ಬೆಳೆಸಲು ಷಡ್ಯಂತ್ರ ನಡೆಯುತ್ತಿದ್ದು, ಇದೊಂದು ಮಾನವ ವಿರೋಧಿ ಸರಕಾರವಾಗಿದೆ ಎಂದು ಎಸ್ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷ ಮುಹಮ್ಮದ್ ಶಫಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಎಕ್ಕೂರಿನ ಇಂಡಿಯಾನ ಸಭಾಂಗಣದಲ್ಲಿ ಮಂಗಳವಾರ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದ ಜನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದ ಸಿಎಎ, ಎಸ್ಐಆರ್, ಬುಲ್ಡೋಜರ್, ಗುಂಪು ಹತ್ಯೆ ಇತ್ಯಾದಿಗಳು ಕೇವಲ ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧದ ಸಮರ ಎಂದು ನಾವು ಭಾವಿಸಿದರೆ ಅದು ತಪ್ಪಾಗುತ್ತದೆ. ಇದರಿಂದ ಬುಡಕಟ್ಟು ಜನಾಂಗ, ಕೂಲಿ ಕಾರ್ಮಿಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಂದರೆಗೊಳಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರಕಾರವು ದೇಶದಲ್ಲಿ ಶ್ರೀಮಂತರಿಗೆ ಹೂಡಿಕೆ ಮಾಡಲು ಅನುಕೂಲ ಮಾಡಿಕೊಡುವ ಕಾರ್ಯಕ್ರಮ ಗಳನ್ನು ಅನುಷ್ಠಾನ ಮಾಡುತ್ತಿದೆ. ದೇಶದ ನೆಲ,ಜಲ, ಅರಣ್ಯವನ್ನು ಭಾರೀ ಪ್ರಮಾಣದಲ್ಲಿ ಶ್ರೀಮಂತ ಬಂಡವಾಳ ಶಾಹಿಗಳಿಗೆ ಮಾರಾಟ ಮಾಡಿದೆ. ಇದರಿಂದ ದೇಶವು ಮತ್ತೆ ಗುಲಾಮಗಿರಿಗೆ ತಳ್ಳಲ್ಪಡುವ ಅಪಾಯ ಕಂಡು ಬಂದಿದೆ. ಇಂತಹ ಸಂದರ್ಭದಲ್ಲಿ ದೇಶವನ್ನು ರಕ್ಷಿಸಬೇಕಾದುದು ದೇಶದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ನುಡಿದರು.
*ದೇಶದಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ: ಪ್ರತಿವರ್ಷ ಎರಡು ಲಕ್ಷ ಜನ ಕಲುಷಿತ ನೀರು ಸೇವನೆಯಿಂದ ದೇಶದಲ್ಲಿ ಸಾಯುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಕೊರೆತೆ ಇದೆ. 60 ಕೋಟಿ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಬಡವರಿಗೆ ಜಮೀನು ಸಿಗುತ್ತಿಲ್ಲ. ಆದರೆ, ಸರಕಾರ ಭೂಮಿ, ಕಾಡು ಶ್ರೀಮಂತ ಉದ್ಯಮಿಗಳಿಗೆ ಮಾರು ತ್ತಿದೆ. ವಿಮಾನ ನಿಲ್ದಾಣ, ಬಂದರು, ಹಣಕಾಸು, ಶಿಕ್ಷಣ ಸಂಸ್ಥೆಗಳ ಸಹಿತ ರಾಷ್ಟ್ರೀಯ ಸಂಪತ್ತುಗಳನ್ನು ಖಾಸಗಿ ಒಡೆತನಕ್ಕೆ ಪರಭಾರೆ ಮಾಡುತ್ತಿದೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರದ ಸ್ಮಾರ್ಟ್ ಇಂಡಿಯಾದಿಂದ ಹಿಡಿದು ಎಲ್ಲ ಯೋಜನೆಗಳೂ ದೊಡ್ಡ ಹಗರಣಗಳೇ ಹೊರತು ಜನಪರವಲ್ಲ. ನೋಟ್ ಬ್ಯಾನ್ ಸಹಿತ ಯಾವ ಯೋಜನೆಯೂ ಯಶಸ್ವಿಯಾಗಿಲ್ಲ. ಎಸ್ಐಆರ್ನಿಂದ ಲಕ್ಷಾಂತರ ಮಂದಿ ಮತದಾರರ ಪಟ್ಟಿಯಿಂದ ಹೊರಗುಳಿಯುತ್ತಿದ್ದಾರೆ. ಫ್ಯಾಸಿಸ್ಟ್ ಸರಕಾರದ ಇಂತಹ ಷಡ್ಯಂತಗಳನ್ನು ಬಹಿರಂಗಪಡಿಸಬೇಕು ಎಂದು ನುಡಿದರು.
ರಾಷ್ಟ್ರೀಯ ಉಪಾಧ್ಯಕ್ಷರಾದ ಶರ್ಫುದ್ದೀನ್ ಅಹ್ಮದ್, ಪ್ರಧಾನ ಕಾರ್ಯದರ್ಶಿಗಳಾದ ಮುಹಮ್ಮದ್ ಇಲ್ಯಾಸ್, ಅಬ್ದುಲ್ ಮಜೀದ್ ಪಿ, ಮೆಹರ್ ಅಫ್ರೋಝ್ ಯಾಸ್ಮಿನ್, ಕಾರ್ಯದರ್ಶಿಗಳಾದ ಅಲ್ಪೊನ್ಸ್ ಫ್ರಾಂಕೊ, ತೈದುಲ್ ಉಲ್ ಇಸ್ಲಾಂ, ಮುಹಮ್ಮದ್ ರಿಯಾಝ್, ಜಿ.ಅಬ್ದುಲ್ ಸತ್ತಾರ್, ರುನಾ ಲೈಲಾ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಅಬ್ದುಲ್ ಮಜೀದ್ ಕೆ.ಎಚ್, ಮೆಹಬೂಬ್ ಶರೀಫ್, ಮುಹಮ್ಮದ್ ಮುಬಾರಕ್, ಶೇಖ್ ಮುಹಮ್ಮದ್, ಅಶ್ರಫ್ ಮೌಲವಿ ಮುವಾತ್ತುಫುಝ, ನಿಝಾಮುದ್ದೀನ್ ಖಾನ್, ಅಬ್ದುಲ್ ಹನ್ನಾನ್, ಪಿ. ಅಬ್ದುಲ್ ಹಮೀದ್, ರಾಯ್ ಅರಕ್ಕಲ್, ಮುಹಮ್ಮದ್ ಫಾರೂಕ್ ಸಹೀದಾ ಸಹದಿಯಾ, ಅಸಾ ಉಮರ್ ಫಾರೂಖ್, ಸಾಹೀರಾ ಅಬ್ಬಾಸ್, ಯಾಮೊಯ್ದೀನ್ , ಸಿಪಿ ಅಬ್ದುಲ್ ಲತೀಫ್, ಮುನವ್ವರ್ ಹುಸೈನ್, ಸದಾಶಿವ್ ತ್ರಿಪಾಠಿ, ಅಶೋಕ್ ಜಾದವ್, ಅಶ್ಫಕ್ ಹುಸೈನ್, ಅಝರ್ ತಾಂಬೋಲಿ, ಮುಮ್ತಾಝ್ ಖುರೈಸಿ, ನಾಮನಿರ್ದೇಶಿತ ಸದಸ್ಯ ವಿದ್ಯಾರಾಜ್ ಮಾಲ್ವಿಯ, ವಿಶೇಷ ಆಹ್ವಾನಿತರಾದ ಯಾಸ್ಮಿನ್ ಇಸ್ಲಾಂ, ಶಾಹಿದ ತಸ್ನೀಮ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿಗಳಾದ ಸೀತಾರಾಮ್ ಖಾಟಿಕ್ ಸ್ವಾಗತಿಸಿದರು. ಮುಹಮ್ಮದ್ ಅಶ್ರಫ್ ಅಂಕಜಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







