ಮಂಗಳೂರು: ಯೆನ್ಮಾರ್ಕ್ ಬಿಲ್ಡರ್ಸ್ನ ಫಳ್ನೀರ್ ವಿಸ್ತ ವಸತಿ ಸಮುಚ್ಚಯಕ್ಕೆ ಶಿಲಾನ್ಯಾಸ

ಮಂಗಳೂರು : ನಗರದ ಫಳ್ನೀರ್ ಮಿತ್ತಮೊಗರು ರಸ್ತೆಯ ಪೀಸ್ ಮ್ಯಾನ್ಶನ್ ಬಳಿ ನಿರ್ಮಾಣಗೊಳ್ಳಲಿರುವ ಯೆನ್ಮಾರ್ಕ್ ಬಿಲ್ಡರ್ಸ್ನ ಫಳ್ನೀರ್ ವಿಸ್ತ ವಸತಿ ಸಮುಚ್ಚಯಕ್ಕೆ ರಾಜ್ಯ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬೆಂಗಳೂರು ಬಳಿಕ ಮಂಗಳೂರು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಇದಕ್ಕೆ ಮಂಗಳೂರಿನ ಬಿಲ್ಡರ್ಗಳು ಮತ್ತು ಆರ್ಕಿಟೆಕ್ಟ್ ಗಳ ಕೊಡುಗೆ ಅಪಾರವಿದೆ. ಮಂಗಳೂರಿನಲ್ಲಿ ಸುಂದರವಾದ ವಸತಿ ಸಮುಚ್ಚಯ, ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಮುಂದೆ ಬರುವಾಗ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸರ್ವ ರೀತಿಯಲ್ಲೂ ಸಹಕರಿಸಲಿದ್ದಾರೆ. ಇಂತಹ ನಿರ್ಮಾಣ ಕಾರ್ಯ ದಿಂದ ಬಿಲ್ಡರ್ಗಳಿಗೆ ಮಾತ್ರ ಪ್ರಯೋಜನವಲ್ಲ, ಆಸುಪಾಸಿನ ಜಮೀನಿನ ಬೆಲೆಯೂ ಏರಿಕೆಯಾಗಿ ಅದು ಜನರಿಗೂ ಲಾಭ ತಂದು ಕೊಡಲಿದೆ. ಇದನ್ನು ಮನಗಂಡು ಸಮುಚ್ಚಯ, ಸಂಕೀರ್ಣದ ಆಸುಪಾಸಿನ ಜನರು ಕಟ್ಟಡ ನಿರ್ಮಾಣ ಕೆಲಸ ಕಾರ್ಯಗಳಿಗೆ ಸಹಕರಿಸಬೇಕು ಎಂದು ಹೇಳಿದರು.
ಅಕ್ಕಪಕ್ಕದವರಿಗೆ ತೊಂದರೆ ಕೊಡದೆ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗುವುದೇ ಅತ್ಯುತ್ತಮ ಬಿಲ್ಡರ್ಗಳ ಲಕ್ಷಣವಾಗಿದೆ. ಎಲ್ಲಾ ಬಿಲ್ಡರ್ಗಳು ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಉತ್ಕೃಷ್ಟ ಮಟ್ಟದ ಕಟ್ಟಡ ಮತ್ತಿತರ ಸೌಲಭ್ಯ ಕಲ್ಪಿಸಿ ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಬೇಕು ಎಂದು ಯು.ಟಿ.ಖಾದರ್ ಕರೆ ನೀಡಿದರು.
ಜಮಾಅತೆ ಇಸ್ಲಾಮೀ ಹಿಂದ್ನ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಮಾತನಾಡಿ ಯಾವುದೇ ಒಂದು ಯೋಜನೆ ಹಮ್ಮಿಕೊಂಡಾಗ ಪ್ರಾಮಾಣಿಕತೆಯು ಆ ಯೋಜನೆಯ ಮುಖ್ಯ ಬಂಡವಾಳವಾಗಿದೆ. ಅದರಲ್ಲೂ ಕಟ್ಟಡ ನಿರ್ಮಾಣದಲ್ಲಿ ಬಿಲ್ಡರ್ಗಳಿಗೆ ಪ್ರಾಮಾಣಿಕತೆ ಮಾತ್ರ ಬಂಡವಾಳವಲ್ಲ, ಶಕ್ತಿಯೂ ಬಂಡವಾಳವಾಗಿದೆ. ಯೆನ್ಮಾರ್ಕ್ ಬಿಲ್ಡರ್ಸ್ನವರು ಆ ಪ್ರಾಮಾಣಿಕತೆಯನ್ನು ಉಳಿಸುವರೆಂಬ ವಿಶ್ವಾಸವಿದೆ. ಧರ್ಮದ ಹೆಸರಿನಲ್ಲಿ ಕಂದಕ ಸೃಷ್ಟಿಯಾಗುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ವಸತಿ ಸಮುಚ್ಚಯಗಳಲ್ಲಿ ಎಲ್ಲಾ ಧರ್ಮೀಯರು ಕೂಡಿ ಬಾಳುವ ವಾತಾವರಣ ಸೃಷ್ಟಿಯಾಗಲಿ ಎಂದು ಆಶಿಸಿದರು.
ಎಕ್ಸ್ಪರ್ಟೈಸ್ನ ಅಶ್ರಫ್ ಕರ್ನಿರೆ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಕಾರ್ಪೊರೇಟರ್ಗಳಾದ ಅಬ್ದುಲ್ ರವೂಫ್ ಬಜಾಲ್, ಕೆ. ಭಾಸ್ಕರ ರಾವ್, ದ.ಕ.ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ನ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಆರ್ಕಿಟೆಕ್ ರಿಯಾಝ್ ಆಲಂ, ಝೂಮ್ ಪ್ಲಸ್ ಇದರ ಸ್ಥಾಪಕ ಬಿ. ಮುಹಮ್ಮದ್ ಉಮ್ಮರ್, ಮಿ. ಫಾಲ್ಕನ್ ಇಂಪೆಕ್ಸ್ ಕಾರ್ಪೊರೇಶನ್ನ ಆಡಳಿತ ಪಾಲುದಾರ ಝುಬೈರ್ ಅಹ್ಮದ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ಯೆನ್ಮಾರ್ಕ್ ಬಿಲ್ಡರ್ಸ್ನ ಆಡಳಿತ ಪಾಲುದಾರರಾದ ಮುನೀರ್ ಮತ್ತು ಮುಹಮ್ಮದ್ ಹುಸೈನ್ (ನೂರ್) ಹಾಗೂ ಬ್ಯಾರೀಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ನ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್ ಉಪಸ್ಥಿತರಿದ್ದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರಿನ ಹೃದಯಭಾಗದಲ್ಲಿರುವ ಫಳ್ನೀರ್ನಲ್ಲಿ ನಿರ್ಮಾಣಗೊಳ್ಳಲಿರುವ ಫಳ್ನೀರ್ ವಿಸ್ತದ ಸುತ್ತಮುತ್ತ ಹಲವು ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ವಾಣಿಜ್ಯ ಸಂಕೀರ್ಣಗಳು ಇದ್ದು, ಬಿಸಿನೆಸ್ ಹಬ್ಸ್ ಆಗಿ ಈ ಪ್ರದೇಶ ಗುರುತಿಸಲ್ಪ ಟ್ಟಿವೆ. 2,3,4 ಬಿಎಚ್ಕೆ ಅಪಾರ್ಟ್ಮೆಂಟ್ಗಳು ಇರಲಿದೆ. ನೆಲ ಅಂತಸ್ತು ಅಲ್ಲದೆ 5 ಮಹಡಿಗಳಲ್ಲಿ ಈ ಸಮುಚ್ಚಯ ತಲೆ ಎತ್ತಲಿದೆ. ಪ್ರತಿಯೊಂದು ಮಹಡಿಯಲ್ಲಿ 9 ಅಪಾರ್ಟ್ಮೆಂಟ್ ಸಹಿತ 45 ಅಪಾರ್ಟ್ಮೆಂಟ್ಗಳು ನಿರ್ಮಾಣಗೊಳ್ಳಲಿದೆ.
ವಸತಿ ಸಮುಚ್ಚಯದಲ್ಲಿ ವಿಶಾಲವಾದ ಸಂದರ್ಶಕರ ಹಾಲ್, ಮಹಡಿಯಲ್ಲಿ ಈಜುಕೊಳವಲ್ಲದೆ ಕಾರು ಪಾರ್ಕಿಂಗ್, ಒಳಾಂಗಣ ಆಟ, ಮಕ್ಕಳ ಆಟದ ವಲಯ, ಜಿಮ್ನಾಷಿಯಂ, ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ, ಸೌರ ಬಿಸಿನೀರು, ಗಾರ್ಡನ್, ಕಾರ್ ವಾಶ್ ಔಟ್ಲೆಟ್, ಸ್ವಯಂ ಚಾಲಿತ ಲಿಫ್ಟ್, ಭದ್ರತಾ ಕೊಠಡಿ, ಪಾರ್ಕಿಂಗ್ ಏರಿಯಾದಲ್ಲಿ ಇವಿ ಚಾರ್ಜಿಂಗ್ ಸೆಂಟರ್, ದಿನದ 24 ಗಂಟೆಯೂ ನೀರಿನ ವ್ಯವಸ್ಥೆ, ಅಂಡರ್ಗ್ರೌಂಡ್ ನೀರಿನ ಟ್ಯಾಂಕ್, ಮಿಂಚು ಪ್ರತಿಬಂಧಕ, ಸಿಸಿ ಟಿವಿ ಕಣ್ಗಾವಲು, ಮಳೆ ನೀರು ಕೊಯ್ಲು, ಜನರೇಟರ್ ವ್ಯವಸ್ಥೆ ಇರಲಿದೆ.
ಪ್ರತಿಯೊಂದು ಫ್ಲ್ಯಾಟ್ನಲ್ಲೂ ವಿಟ್ರಿಫೈಡ್ ನೆಲಹಾಸು, ಸಾಮಾನ್ಯ ಏರಿಯಾ ಮತ್ತು ಮೆಟ್ಟಲುಗಳಿಗೆ ಗ್ರಾನೈಟ್ ನೆಲಹಾಸು, ವಿದ್ಯುತ್ ವಯರಿಂಗ್ ಬಳಸಿದ ಬ್ರಾಂಡೆಡ್ ಕೇಬಲ್ ವಿ-ಗಾರ್ಡ್/ಫಿನೋಲೆಕ್ಸ್, ಮರೆಮಾಚಿದ ವೈರಿಂಗ್ ಅಳವಡಿಕೆ, ಉತ್ತಮ ಗುಣಮಟ್ಟದ ಸ್ನಾನಗೃಹದ ಸಾಮಗ್ರಿಗಳ ಅಳವಡಿಕೆ, ಕಿಟಕಿ ಮತ್ತು ಬಾಲ್ಕನಿ ಬಾಗಿಲುಗಳಿಗೆ ಸ್ಲೈಡಿಂಗ್ನೊಂದಿಗೆ ಯುಪಿವಿಸಿ ಫ್ರೇಮ್, ಉತ್ಕೃಷ್ಟ ಗುಣಮಟ್ಟದ ಬಾಗಿಲು ಇತ್ಯಾದಿ ವ್ಯವಸ್ಥೆ ಇರಲಿದೆ ಎಂದು ಪ್ರಕಟನೆ ತಿಳಿಸಿದೆ.






